ADVERTISEMENT

ಹೊಸಕೋಟೆಯಲ್ಲಿ ಹೆಣ್ಣು ಭ್ರೂಣ ಹತ್ಯೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 0:16 IST
Last Updated 1 ಜೂನ್ 2024, 0:16 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮೇಲುಕೋಟೆ (ಮಂಡ್ಯ ಜಿಲ್ಲೆ): ಹೋಬಳಿಯ ಹೊಸಕೋಟೆ ಗ್ರಾಮದ ಮನೆಯೊಂದರಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆದಿರುವ ಸಂಬಂಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ.

ವಿವರ: ಶ್ರೀರಂಗಪಟ್ಟಣ ತಾಲ್ಲೂಕಿನ ಶೆಟ್ಟಹಳ್ಳಿಯ ಮಾಲಾಶ್ರೀ (34) ಅವರು ಹೊಟ್ಟೆ ನೋವು, ತೀವ್ರ ರಕ್ತಸ್ರಾವದ ಚಿಕಿತ್ಸೆಗಾಗಿ ತಾಯಿಯೊಂದಿಗೆ ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದರು.

ADVERTISEMENT

ತಪಾಸಣೆ ವೇಳೆ ವೈದ್ಯೆ ಎಂ.ಕೆ.ಶಿಲ್ಪಶ್ರೀ ಅವರು ರಕ್ತಸ್ರಾವದ ಬಗ್ಗೆ ವಿಚಾರಿಸಿದಾಗ, ‘ಏ.16ರಂದು ಹಿರೇಮರಳಿಯ ಗೀತಾ ಹಾಗೂ ಕೆ.ಆರ್.ಪೇಟೆಯ ಶೃತಿ ಎಂಬುವರು ತಮ್ಮನ್ನು ಹೊಸಕೋಟೆಯ ಮನೆಯೊಂದಕ್ಕೆ ಕರೆದೊಯ್ದು ಮಾತ್ರೆ ಕೊಟ್ಟು ನುಂಗಲು ತಿಳಿಸಿದ್ದರು.

ಆ ನಂತರ ‌ಗರ್ಭಪಾತವಾಗಿದ್ದು, ಭ್ರೂಣವನ್ನು ಪಾಂಡವಪುರ ತಾಲ್ಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ಹೂಳಲಾಗಿದೆ. ಗರ್ಭಪಾತ ಮಾಡಿದ್ದಕ್ಕಾಗಿ ಚೇತನ್ ಕುಮಾರ್, ಆಶಾ ಶಿವರಾಜ್, ಗೀತಾ ಎಂಬುವರ ಖಾತೆಗಳಿಗೆ ಫೋನ್ ಪೇ ಮೂಲಕ ಹಣ ಹಾಕಲಾಗಿದೆ’ ಎಂದು ಅವರು ತಿಳಿಸಿದ್ದರು.

ವೈದ್ಯೆಯು ಕೂಡಲೇ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಿ.ಎ. ಅರವಿಂದ್ ಅವರಿಗೆ ವಿಷಯ ತಿಳಿಸಿದರು. ಅವರಿಂದ ಮಾಹಿತಿ ಪಡೆದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬೆಟ್ಟಸ್ವಾಮಿ ಅವರು ಪೊಲೀಸರಿಗೆ ದೂರು ನೀಡಿದರು.

ಆರೋಪಿಗಳಾದ ಗೀತಾ, ಶ್ರುತಿ, ಚೇತನ್ ಕುಮಾರ್, ಆಶಾ ಶಿವರಾಜ್, ಗರ್ಭಪಾತಕ್ಕೆ ಒಳಗಾಗಿರುವ ಮಾಲಾಶ್ರೀ, ಆಕೆಯ ಪತಿ ರವಿಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದು, ತನಿಖೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.