ADVERTISEMENT

ಕುಟುಂಬಸ್ಥರ ಅಧಿಕಾರಕ್ಕಾಗಿ ನರಬಲಿ ಪಡೆಯುವ ದೇವೇಗೌಡ ಕುಟುಂಬ: LR ಶಿವರಾಮೇಗೌಡ

ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:30 IST
Last Updated 26 ಅಕ್ಟೋಬರ್ 2024, 15:30 IST
ಎಲ್.ಆರ್.ಶಿವರಾಮೇಗೌಡ
ಎಲ್.ಆರ್.ಶಿವರಾಮೇಗೌಡ   

ನಾಗಮಂಗಲ (ಮಂಡ್ಯ ಜಿಲ್ಲೆ): ‘ಕುಟುಂಬದವರ ಅಧಿಕಾರಕ್ಕಾಗಿ ಎಚ್‌.ಡಿ. ದೇವೇಗೌಡರ ಕುಟುಂಬ ಒಂದೊಂದು ನರಬಲಿ ಪಡೆಯುತ್ತದೆ’ ಎಂದು ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ ಆರೋಪಿಸಿದರು.

‘ಮಂಡ್ಯದಲ್ಲಿ ಜೆಡಿಎಸ್‌ನವರು ಬಿಜೆಪಿಯ ಕತ್ತು ಹಿಸುಕಿದರು. ಹೊಂದಾಣಿಕೆ ಬಳಿಕ ಬಿಜೆಪಿಯ ಉಸಿರುಗಟ್ಟಿಸುತ್ತಿದ್ದಾರೆ. ಡಾ.ಸಿ.ಎನ್.ಮಂಜುನಾಥ್‌ ಗೆಲುವಿಗೆ ಶ್ರಮಿಸಿದ್ದ ಸಿ.ಪಿ.ಯೋಗೇಶ್ವರ್‌ ಅವರನ್ನೇ ಚನ್ನಪಟ್ಟಣದಲ್ಲಿ ಬಲಿ ಪಡೆದಿದ್ದಾರೆ’ ಎಂದು ಇಲ್ಲಿ ಶನಿವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ನಿಖಿಲ್‌ನನ್ನು 3ನೇ ಬಾರಿಗೆ ಆಹುತಿ ಮಾಡುತ್ತಿದ್ದಾರೆ. ಕುಮಾರಸ್ವಾಮಿಯೇ ಕಣಕ್ಕಿಳಿದರೂ ಚನ್ನಪಟ್ಟಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಚನ್ನಪಟ್ಟಣದ ಜನ ದಡ್ಡರಲ್ಲ; ಯೋಗೇಶ್ವರ್‌ ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ರಾಮನಗರದ ಜನ ಕುಮಾರಸ್ವಾಮಿ ಅವರನ್ನು ಓಡಿಸಿದ್ದಾರೆ. ಮಂಡ್ಯದವರೆಲ್ಲಾ ನರ ಸತ್ತವರೆಂದು ಎಚ್‌ಡಿಕೆ ಇಲ್ಲಿಗೆ ಬಂದಿದ್ದಾರೆ. ಜಿಲ್ಲೆಯ ಜನ ಮತ್ತು ಎಲ್ಲಾ ಮುಖಂಡರು ಎಚ್ಚೆತ್ತುಕೊಳ್ಳಬೇಕು. ಹಾಸನದಿಂದ ಗಂಡನ್ನು ಕರೆತಂದು ಮಂಡ್ಯದಲ್ಲಿ ಚುನಾವಣೆ ಮಾಡುವ ಅಗತ್ಯವಿಲ್ಲ. ಸಂಸದರಾಗಲು ಜಿಲ್ಲೆಯಲ್ಲಿ ಗಂಡಸರು ಇರಲಿಲ್ವಾ?’ ಎಂದರು.

‘ಕುಮಾರಸ್ವಾಮಿ 2 ಬಾರಿ ಲಾಟರಿಯಲ್ಲಿ ಮುಖ್ಯಮಂತ್ರಿಯಾದರು. ಕಳೆದ ಚುನಾವಣೆಯಲ್ಲಿ ಅವರ ಗಾಡಿ ನಿಂತು ಹೋಗಿತ್ತು. ಪಾಪ ‘ಮುಳುಗುವ ಹಡಗು’ ಎಂದು ಮಂಡ್ಯದ ಜನರು ಕೈ ಹಿಡಿದಿದ್ದಾರಷ್ಟೆ. ಈಗ ಕೇಂದ್ರ ಸಚಿವರಾಗಿ ಉನ್ನತ ಹುದ್ದೆಯಲ್ಲಿರುವ ಅವರು ಏನು ಮಾಡುತ್ತಿದ್ದಾರೆ? ದೇಶ–ವಿದೇಶ ಸುತ್ತಿ ಬೃಹತ್ ಕೈಗಾರಿಕೆಗಳ ಸ್ಥಾಪನೆ ಮಾಡಬೇಕಿತ್ತು. ಆದರೆ, ರಾಜ್ಯಕ್ಕೆ ಬಂದಾಗಲೆಲ್ಲಾ ಮುಡಾ ಕೇಸ್ ಮತ್ತು ಡಿಕೆಶಿ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.