ಶ್ರೀರಂಗಪಟ್ಟಣ: ಪಟ್ಟಣದಲ್ಲಿ ರಥಸಪ್ತಮಿ ನಿಮಿತ್ತ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿ ಹಾಕಿದ್ದ ಜಾಯಿಂಟ್ ವೀಲ್ನಲ್ಲಿ ಶನಿವಾರ ರಾತ್ರಿ ಆಟವಾಡುತ್ತಿದ್ದ ಬಾಲಕಿಯ ಕೂದಲು ಯಂತ್ರದ ಕೊಂಡಿಗೆ ಸಿಕ್ಕಿಕೊಂಡು ಸಂಪೂರ್ಣ ಕಿತ್ತು ಬಂದಿದೆ.
ಗಾಯಗೊಂಡವರನ್ನು ಬೆಂಗಳೂರಿನ ಕೃಷ್ಣ ಎಂಬವರ ಪುತ್ರಿ ಶ್ರೀದಿವ್ಯಾ (14) ಎಂದು ಗುರುತಿಸಲಾಗಿದೆ. ಆಕೆಯ ತಲೆ ಕೂದಲು ಚರ್ಮ ಸಹಿತ ಕಿತ್ತು ಬಂದು, ತೀವ್ರ ರಕ್ತಸ್ರಾವವಾಗಿದೆ. ಯಂತ್ರದ ಕೊಂಡಿಗೆ ಸಿಕ್ಕಿದ ಬಾಲಕಿ ಐದಾರು ಸುತ್ತು ಗಿರಕಿ ಹೊಡೆದು ಬಳಿಕ ಕೆಳಕ್ಕೆ ಬಿದ್ದಳು. ಕೂದಲು ಮಾತ್ರ ಯಂತ್ರದ ಕೊಂಡಿಯಲ್ಲೇ ಸಿಕ್ಕಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
‘ಬಾಲಕಿಯನ್ನು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿ ಸಲಾಗಿದೆ. ಯಂತ್ರದ ಮಾಲೀಕನ ವಿರುದ್ಧ ಪಟ್ಟಣ ಠಾಣೆಯಲ್ಲಿ ಐಪಿಸಿ ಕಲಂ 337 (ನಿರ್ಲಕ್ಷ್ಯ) ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಸಿಪಿಐ ಬಿ.ಎಸ್.ಪ್ರಕಾಶ್ ತಿಳಿಸಿದ್ದಾರೆ.
ಬಾಲಕಿ ಸಮೀಪದ ಗಂಜಾಂನ ಸಂಬಂಧಿಕರ ಮನೆಗೆ ಬಂದಿದ್ದು, ರಥಸಪ್ತಮಿ ಜಾತ್ರೆಗೆ ತೆರಳಿದ್ದಳು.
ಪರಿಹಾರಕ್ಕೆ ಆಗ್ರಹ: ಬಾಲಕಿಯ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು ಎಂದು ನಾಗರಿಕ ವೇದಿಕೆಯವರು ಒತ್ತಾಯಿಸಿದರು.
ಅವಘಡ ಸಂಬಂಧ ಜಾಯಿಂಟ್ ವೀಲ್ ಮಾಲೀಕ ಮಂಡ್ಯ ತಾಲ್ಲೂಕು ಬೂದನೂರು ಗ್ರಾಮದವರಾದ ತಮಿಳುನಾಡು ಮೂಲದ ರಮೇಶ್, ಶ್ರೀರಂಗನಾಥಸ್ವಾಮಿ ದೇವಾಲಯದ ಇಒ ತಮ್ಮೇಗೌಡ ಮತ್ತು ಪುರಸಭೆ ಮುಖ್ಯಾಧಿಕಾರಿ ಸಂದೀಪ್ ವಿರುದ್ಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಂತ್ರವನ್ನು ವಶಪಡಿಸಿಕೊ ಳ್ಳಲಾಗಿದೆ. ಯಂತ್ರದ ಮಾಲೀಕ ರಮೇಶ್ ಅವರನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.