ADVERTISEMENT

ಶ್ರೀರಂಗಪಟ್ಟಣ: ಹೈದರ್‌ ಅಲಿಖಾನ್‌ ಉರುಸ್‌– ಗಮನ ಸೆಳೆದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 16:12 IST
Last Updated 6 ಜುಲೈ 2024, 16:12 IST
ನವಾಬ್‌ ಹೈದರ್‌ ಅಲಿಖಾನ್‌ ಅವರ 248ನೇ ಉರುಸ್‌ ನಿಮಿತ್ತ ಪವಿತ್ರ ಗಂಧವನ್ನು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಿಂದ ಹೈದರ್‌ ಅಲಿಕಾನ್‌ ಸಮಾಧಿ ಸ್ಥಳ ಗಂಜಾಂ ಬಳಿಯ ಗುಂಬಸ್‌ವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು
ನವಾಬ್‌ ಹೈದರ್‌ ಅಲಿಖಾನ್‌ ಅವರ 248ನೇ ಉರುಸ್‌ ನಿಮಿತ್ತ ಪವಿತ್ರ ಗಂಧವನ್ನು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಿಂದ ಹೈದರ್‌ ಅಲಿಕಾನ್‌ ಸಮಾಧಿ ಸ್ಥಳ ಗಂಜಾಂ ಬಳಿಯ ಗುಂಬಸ್‌ವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು   

ಶ್ರೀರಂಗಪಟ್ಟಣ: ನವಾಬ್‌ ಹೈದರ್‌ ಅಲಿಖಾನ್‌ ಅವರ 248ನೇ ಉರುಸ್‌ ಪಟ್ಟಣದಲ್ಲಿ ಶನಿವಾರ ಸಂಜೆ ಸಡಗರ, ಸಂಭ್ರಮದಿಂದ ನಡೆಯಿತು.

ಇಲ್ಲಿನ ಜಾಮಿಯಾ ಮಸೀದಿಯಿಂದ ಹೈದರ್‌ ಅಲಿಖಾನ್‌ ಸಮಾಧಿ ಸ್ಥಳ ಗಂಜಾಂ ಸಮೀಪದ ಗುಂಬಸ್‌ ವರೆಗೆ ಪವಿತ್ರ ಗಂಧವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಜಾಮಿಯಾ ಮಸೀದಿಯಲ್ಲಿ ಧಾರ್ಮಿಕ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಫಕೀರರು ತಮಟೆ ಬಡಿಯುತ್ತಾ ಉತ್ಸವದ ಜತೆ ಹೆಜ್ಜೆ ಹಾಕಿದರು. ಗಾಯಕರು ದಾರಿಯುದ್ದಕ್ಕೂ ಕವ್ವಾಲಿ ಹಾಡಿ ಗಮನ ಸೆಳೆದರು. ಯುವಕರು ಹೈದರ್‌ ಭಾವಚಿತ್ರವುಳ್ಳ ಬ್ಯಾನರ್‌ ಹಿಡಿದು ಸಾಗಿದರು.

ಪಟ್ಟಣದ ಪುರಸಭೆ ವೃತ್ತ, ಕುವೆಂಪು ವೃತ್ತ, ಸಾರ್ವಜನಿಕ ಆಸ್ಪತ್ರೆ, ಬೇಸಿಗೆ ಅರಮನೆ, ಅಬ್ಬೆದುಬ್ವಾ ಚರ್ಚ್‌ ಮಾರ್ಗವಾಗಿ ಮರವಣಿಗೆ ಗುಂಬಸ್‌ ತಲುಪಿತು.

ADVERTISEMENT

ಗುಂಬಸ್‌ನಲ್ಲಿ ಹೈದರ್ ಅಲಿಖಾನ್‌ ಅವರ ಸಮಾಧಿಗೆ ಪವಿತ್ರ ಗಂಧವನ್ನು ಲೇಪಿಸಿ ಪುಷ್ಪ ಚಾದರ ಹೊದಿಸಲಾಯಿತು. ಸಾಮೂಹಿಕ ಪ್ರಾರ್ಥನೆ ಮತ್ತು ಕುರಾನ್‌ ಪಠನ ನಡೆಯಿತು.

ಮೈಸೂರಿನಿಂದಲೂ ಪವಿತ್ರ ಗಂಧವನ್ನು ತಂದು ಹೈದರ್‌ ಅಲಿಖಾನ್‌ ಅವರ ಸಮಾಧಿಗೆ ಲೇಪಿಸಲಾಯಿತು. ಟಿಪ್ಪು ಸಮಾಧಿಗೂ ಪುಷ್ಪ ಚಾದರ ಹೊದಿಸಿ ಪ್ರಾರ್ಥಿಸಿದರು. ಸ್ಥಳೀಯರು ಮಾತ್ರವಲ್ಲದೆ ವಿವಿಧ ಜಿಲ್ಲೆಗಳಿಂದಲೂ ಮುಸ್ಲಿಂ ಬಾಂಧವರು ಆಗಮಿಸಿ ಹೈದರ್ ಅಲಿಖಾನ್‌ ಸಮಾಧಿ ಎದುರು ಪ್ರಾರ್ಥನೆ ಸಲ್ಲಿಸಿದರು. ಊಟದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.