ಭಾರತೀನಗರ: ‘ಜಿಲ್ಲೆಯ ಜನರು ಆಶೀರ್ವಾದ ಮಾಡಿದ್ದರಿಂದಲೇ ತಂದೆ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕೇಂದ್ರ ಸರ್ಕಾರ ದೊಡ್ಡ ಜವಾಬ್ದಾರಿ ನೀಡಿದ್ದು, ಜಿಲ್ಲೆಗೆ ಅವರು ಬರಲು ಆಗದ ಸಮಯದಲ್ಲಿ ಆ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಸಮೀಪದ ಬೊಮ್ಮನಹಳ್ಳಿಯಲ್ಲಿ ನಿರ್ಮಿಸಿರುವ ಲಕ್ಷ್ಮೀ ದೇವಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
‘ಕುಮಾರಸ್ವಾಮಿ ಅವರಿಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯನ್ನು ನೀಡಿರುವುದರಿಂದ ಬೆಂಗಳೂರಿಗೆ ವಾರಕ್ಕೆರಡು ದಿನ ಮಾತ್ರ ಬರುತ್ತಾರೆ. ಅವರು ಈ ದಿನ ಮಂತ್ರಿಯಾಗಲು ಮಂಡ್ಯ ಜಿಲ್ಲೆಯ ಜನರೇ ಕಾರಣ. ಹಾಗಾಗಿ ಜನರ ಕಷ್ಟ–ಸುಖ ಆಲಿಸುವ ಜವಾಬ್ದಾರಿ ನನ್ನದು. ಜಿಲ್ಲೆಯ ಯಾವುದೇ ಗ್ರಾಮದವರಾದರೂ ಸರಿ ನಮ್ಮ ಮುಖಂಡರ ಮೂಲಕ ನನಗೆ ವಿಚಾರ ತಿಳಿಸಿದರೆ ತಕ್ಷಣದಲ್ಲೇ ಸ್ಪಂದಿಸುತ್ತೇನೆ’ ಎಂದು ಭರವಸೆ ನೀಡಿದರು.
‘ಜಿಲ್ಲೆಯಲ್ಲಿ ಮದ್ದೂರು ತಾಲ್ಲೂಕಿನ ಜನತೆಯೇ ಹೆಚ್ಚು ಮತಗಳನ್ನು ನೀಡಿದ್ದು, ಎಲ್ಲಾ ತಾಲ್ಲೂಕುಗಳಲ್ಲಿಯೂ ಲೀಡ್ ಕೊಟ್ಟಿದ್ದೀರಿ. ನಿಮ್ಮ ಋಣ ಮರೆಯಲಾರದಂತಹದು. ಯಾವುದೇ ಸಮಾರಂಭವಾದರೂ ಕುಮಾರಸ್ವಾಮಿ ಅವರನ್ನು ಕಾಯದೆ ನನಗೆ ತಿಳಿಸಿದಲ್ಲಿ ನಾನು ಎಲ್ಲಾ ಕರ್ಯಕ್ರಮಗಳಲ್ಲೂ ಭಾಗವಹಿಸುತ್ತೇನೆ’ ಎಂದು ಹೇಳಿದರು.
ಗುರುವಾರ ರಾತ್ರಿಯಿಂದಲೇ ದೇವಾಲಯದಲ್ಲಿ ವಿವಿಧ ಹೋಮ, ಹವನ ಸೇರಿದಂತೆ ವಿಶೇಷ ಪೂಜೆಗಳು ನಡೆದವು. ಹೊನ್ನಾಯ್ಕನಹಳ್ಳಿಮಠದ ಬಸವ, ಕಾರ್ಕಹಳ್ಳಿ ಬಸವೇಶ್ವರಸ್ವಾಮಿ ಬಸವ, ಆಲಭುಜನಹಳ್ಳಿ ಬಸವೇಶ್ವರಸ್ವಾಮಿ ಬಸವ, ತಿಮ್ಮಪ್ಪನ ವಾಹನ, ಹರಿಗೆಗಳು ಸೇರಿದಂತೆ ಗ್ರಾಮದ ವಿವಿಧ ದೇವರುಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ಮಾಜಿ ಶಾಸಕರಾದ ಡಿ.ಸಿ. ತಮ್ಮಣ್ಣ, ಕೆ.ಅನ್ನದಾನಿ, ಮುಖಂಡರಾದ ಮಾದನಾಯ್ಕನಹಳ್ಳಿ ರಾಜಣ್ಣ, ಕೂಳಗೆರೆ ಶೇಖರ್ ಕೂಡ ಪೂಜೆ ಸಲ್ಲಿಸಿದರು.
ಮುಖಂಡರಾದ ಹನುಮಂತೇಗೌಡ, ಕೆ.ಟಿ. ಸುರೇಶ್, ಅಣ್ಣೂರು ವಿನು, ಶ್ರೀನಿವಾಸ್, ಯೋಗ, ಬಿ.ಟಿ.ಉಮೇಶ್, ಶ್ರೀಕಂಠೇಗೌಡ, ವಿಜಿ, ಟಿ.ಜೆ. ವೆಂಕಟೇಶ್, ನಂಜುಂಡೇಗೌಡ, ಮೋಹನ, ಚಂದು, ಮುತ್ತುರಾಜು, ನಂಜೇಗೌಡ, ಜಗದೀಶ್, ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.