ಮದ್ದೂರು: ‘ಜನನಿ ಹಾಗೂ ಜನ್ಮಭೂಮಿಗಳೆರಡು ಸ್ವರ್ಗಕ್ಕೆ ಸಮಾನವೆಂದು ಪುರಾಣದಲ್ಲೇ ಉಲ್ಲೇಖವಿದೆ. ತವರಿನ ಅಕ್ಕರೆಯಿಂದಾಗಿ ಸನ್ಮಾನಕ್ಕೆ ಒಪ್ಪಿದೆ’ ಎಂದು ಕೇಂದ್ರ ವಲಯ ಐಜಿಪಿ ಬಿ.ಆರ್.ರವಿಕಾಂತೇಗೌಡ ತಿಳಿಸಿದರು.
ಪಟ್ಟಣದ ಪೂರ್ಣಪ್ರಜ್ಞ ಶಾಲೆಯ ಆವರಣದಲ್ಲಿ ಚುಂಚಶ್ರೀ ಗೆಳೆಯರ ಬಳಗ ಹಾಗೂ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದಿಂದ ನಡೆದ ಬಾಲಗಂಗಾಧರನಾಥ ಸ್ವಾಮೀಜಿ ಅವರ 79 ನೇ ಜಯಂತ್ಯುತ್ಸವ ಹಾಗೂ ‘ಬಿಜಿಎಸ್ ಸೇವಾರತ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಬಿಜಿಎಸ್ ಸ್ವಾಮೀಜಿ ಅವರು ಎಲ್ಲಾ ಸಮುದಾಯದವರ ಬಡವ, ರೈತರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಕಾಯಕ ಮಾಡಿದವರು. ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾದ ನಂತರ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು’ ಎಂದರು.
‘ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕೆಂದರೆ ಪ್ರಾಮಾಣಿಕತೆ, ಸೂಕ್ಷ್ಮತೆ ಬೇಕು. ಜನರ ವಿಶ್ವಾಸ ಗಳಿಸುವುದು ಮುಖ್ಯ’ ಎಂದರು.
ಶಾಸಕ ಉದಯ್ ಮಾತನಾಡಿದರು.
ಹಿರಿಯ ಸಾಹಿತಿ ಜಯಪ್ರಕಾಶ್ ಗೌಡ ಮಾತನಾಡಿ, ‘ರವಿಕಾಂತೇಗೌಡ ಅವರು ಎಸ್ಸೆಸ್ಸೆಲ್ಸಿವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದವರು ಅವರ ತಂದೆ ಡಾ. ಬೆಸಗರಹಳ್ಳಿ ರಾಮಣ್ಣ ಅವರೊಂದಿಗೆ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದರು.ಓದಿನ ಹಂತದಲ್ಲಿಯೇ ಕೈ ಬರಹದ ಪತ್ರಿಕೆ ಹೊರ ತರುತ್ತಿದ್ದರು’ ಎಂದು ನೆನಪಿಸಿಕೊಂಡರು.
ನಿವೃತ್ತ ಐಎಎಸ್ ಅಧಿಕಾರಿ ತಿಮ್ಮೇಗೌಡ, ನಿವೃತ್ತ ಪ್ರಾಂಶುಪಾಲ ಕೃಷ್ಣ, ಬಿಇಒ ಕಾಳೀರಯ್ಯ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ದೇಶಹಳ್ಳಿ ಶಿವಪ್ಪ, ಮೋಹನ್ ಕುಮಾರ್, ಪೂರ್ಣಪ್ರಜ್ಞಾ ಶಾಲೆಯ ಅಧ್ಯಕ್ಷೆ ಕಸ್ತೂರಿ, ಕಾರ್ಯದರ್ಶಿ ಅನಂತೇಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.