ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ | ರಸ್ತೆ, ದ್ವಾರಗಳಿಗೆ ದೀಪಾಲಂಕಾರ ಮಾಡಿ: ಜಿಲ್ಲಾಧಿಕಾರಿ

ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಜಾಗೃತಿ ಮೂಡಿಸಿ:

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 14:03 IST
Last Updated 23 ಆಗಸ್ಟ್ 2024, 14:03 IST
ಮಂಡ್ಯ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ವಿವಿಧ ಸಮಿತಿಗಳ ಸಭೆಯು ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ನಡೆಯಿತು. ಸಿ.ಡಿ.ಗಂಗಾಧರ್‌, ಸುನಂದಾ ಜಯರಾಂ, ಮೀರಾ ಶಿವಲಿಂಗಯ್ಯ ಇದ್ದಾರೆ
ಮಂಡ್ಯ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ವಿವಿಧ ಸಮಿತಿಗಳ ಸಭೆಯು ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ನಡೆಯಿತು. ಸಿ.ಡಿ.ಗಂಗಾಧರ್‌, ಸುನಂದಾ ಜಯರಾಂ, ಮೀರಾ ಶಿವಲಿಂಗಯ್ಯ ಇದ್ದಾರೆ   

ಮಂಡ್ಯ: ನಗರದ ಎಲ್ಲಾ ರಸ್ತೆಗಳು ಹಾಗೂ ಮುಖ್ಯ ದ್ವಾರಗಳಿಗೂ ವಿದ್ಯುತ್ ಅಲಂಕಾರ ಮಾಡಬೇಕು. ಅದಕ್ಕೆ ಸಂಬಂಧಿಸಿದ ಯೋಜನೆಗಳನ್ನು ನಗರ ಅಲಂಕಾರ ಮತ್ತು ವಿದ್ಯುತ್ ವ್ಯವಸ್ಥೆ ಸಮಿತಿಯವರು ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು. 

ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ- 2024ಕ್ಕೆ ಸಂಬಂಧಿಸಿದಂತೆ ವಿವಿಧ ಸಮಿತಿಗಳ ಸಭೆ ನಡೆಸಿ ಮಾತನಾಡಿದರು.

ಸ್ವಚ್ಛತಾ ಸಮಿತಿ ಹಾಗೂ ನಗರ ಅಲಂಕಾರ ಸಮಿತಿಯನ್ನು ಒಳಗೊಂಡಂತೆ ಒಂದು ಉಪ ಸಮಿತಿಯನ್ನು ರಚಿಸಲಾಗುವುದು. ಎರಡು ಸಮಿತಿಯು ಸಹ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ADVERTISEMENT

ಈಗಲೇ ಕೊಠಡಿ ಕಾಯ್ದಿರಿಸಿ: ವಸತಿ ಸಮಿತಿಯು ಸಮ್ಮೇಳನಕ್ಕೆ ಬರುವ ಗಣ್ಯರಿಗೆ, ಗೋಷ್ಠಿಗೆ ಬರುವವರಿಗೆ, ನೋಂದಣಿ ಸಮಿತಿಯಲ್ಲಿ ನೋಂದಣಿ ಮಾಡಿಸುವವರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಆದಕಾರಣ ಜಿಲ್ಲೆಯಲ್ಲಿರುವ ಹೋಟೆಲ್, ಸಮುದಾಯ ಭವನ, ವಿಶ್ವವಿದ್ಯಾನಿಲಯ, ಹಾಸ್ಟೆಲ್, ಹೋಮ್ ಸ್ಟೇ, ರೆಸಾರ್ಟ್, ವಸತಿ ಕಲ್ಪಿಸಲು ಪತ್ರ ವ್ಯವಹಾರ ನಡೆಸಿ ಈಗಲೇ ಬುಕ್ ಮಾಡುವ ಕಾರ್ಯವಾಗಬೇಕು ಎಂದರು. 

ಮದ್ದೂರು, ಶ್ರೀರಂಗಪಟ್ಟಣ ತಾಲ್ಲೂಕು ಹಾಗೂ ಮೈಸೂರು ಜಿಲ್ಲೆಯಲ್ಲಿ ಇರುವ ಹೋಟೆಲ್, ರೆಸಾರ್ಟ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಬೇಕು. ಜೊತೆಗೆ ಅಲ್ಲಿ ಮೂಲಸೌಕರ್ಯಗಳ ಬಗ್ಗೆಯೂ ಗಮನಹರಿಸಬೇಕು ಎಂದರು.

ವಾಹನ ವ್ಯವಸ್ಥೆ: ವಸತಿ ವ್ಯವಸ್ಥೆ ಇರುವ ಸ್ಥಳದಿಂದ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲು ವಾಹನದ ವ್ಯವಸ್ಥೆ ಮಾಡಲಾಗುವುದು. ವಸತಿ ಸಮಿತಿಯು ನಿಮ್ಮ ಹಂತದಲ್ಲಿ ಕೂಡಲೇ ಸಭೆ ನಡೆಸಿ ಕ್ರಿಯಾಯೋಜನೆಯನ್ನು ಸಲ್ಲಿಸಬೇಕು ಎಂದರು.

ಮಹಿಳೆಯರ ಬಗ್ಗೆ ಕಾಳಜಿವಹಿಸಿ: ಸಮ್ಮೇಳನಕ್ಕೆ ಬರುವ ಮಹಿಳಾ ಗಣ್ಯರು ಸೇರಿದಂತೆ ಪ್ರತಿಯೊಬ್ಬ ಮಹಿಳೆಯರಿಗೂ ವಿಶೇಷ ಕಾಳಜಿ ವಹಿಸಿ ಅವರಿಗೆ ಬೇಕಾದಂತಹ ಮೂಲಸೌಕರ್ಯ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು. ಮಹಿಳೆಯರಿಗೆ ಗೌರವ ಹಾಗೂ ರಕ್ಷಣೆಯನ್ನು ನೀಡುವಲ್ಲಿ ಹೆಚ್ಚು ಕಾಳಜಿ ವಹಿಸಿ ಸೂಕ್ತ ವ್ಯವಸ್ಥೆ ನೀಡಲಾಗುವುದು ಎಂದರು.

ಕನ್ನಡ ರಥಯಾತ್ರೆ: ಕನ್ನಡ ರಥ ಯಾತ್ರೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಅದಕ್ಕೆ ಸಂಬಂಧಿಸಿದಂತೆ ರೂಟ್ ಮ್ಯಾಪ್ ಹಾಗೂ ವೇಳಾಪಟ್ಟಿಯನ್ನು ಕನ್ನಡ ಜ್ಯೋತಿ ರಥ ನಿರ್ವಹಣಾ ಸಮಿತಿಯು ತಯಾರಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಪರ್ಕದಲ್ಲಿದ್ದುಕೊಂಡು ಯೋಜನೆಯನ್ನು ರೂಪಿಸಿ ತುರ್ತಾಗಿ ನೀಡಬೇಕು. ವಾಡಿಕೆ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಭುವನೇಶ್ವರಿ ದೇವಾಲಯವು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಇದ್ದು, ಅಲ್ಲಿಂದಲ್ಲಿಯೇ ಕನ್ನಡ ಜ್ಯೋತಿ ರಥಯಾತ್ರೆ ಪ್ರಾರಂಭವಾಗಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಆಹಾರ ಸಮಿತಿಯ ಉಪಾಧ್ಯಕ್ಷ ಸಿ.ಡಿ. ಗಂಗಾಧರ್, ಮಹಿಳಾ ಸಮಿತಿಯ ಅಧ್ಯಕ್ಷೆ ಸುನಂದಾ ಜಯರಾಮ್, ಉಪಾಧ್ಯಕ್ಷೆ ಸೌಭಾಗ್ಯ ಮಹದೇವು, ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಕಾರ್ಯದರ್ಶಿ ಹರ್ಷ, ವಸತಿ ಸಮಿತಿ ಹಾಗೂ ನಗರ ಅಲಂಕಾರ ಮತ್ತು ವಿದ್ಯುತ್ ವ್ಯವಸ್ಥೆ ಸಮಿತಿಯ ಎಂ.ಟಿ. ರಾಜೇಂದ್ರ ಪಾಲ್ಗೊಂಡಿದ್ದರು.

‘ವೈವಿಧ್ಯಮಯ ಮಳಿಗೆಗಳಿಗೆ ಒತ್ತು ನೀಡಿ’

ವಸ್ತುಪ್ರದರ್ಶನ ಸಮಿತಿಗೆ ಸಂಬಂಧಿಸಿದಂತೆ ಎಷ್ಟು ಮಳಿಗೆ ಹಾಕಬಹುದು ಎಂದು ಯೋಜನೆ ರೂಪಿಸಿಕೊಳ್ಳಿ. ಒಂದೇ ರೀತಿಯ ಮಳಿಗೆಗಳನ್ನು ಹಾಕುವ ಬದಲು ವಿವಿಧ ರೀತಿಯ ವೈವಿಧ್ಯಮಯ ಮಳಿಗೆಗಳನ್ನು ಏರ್ಪಡಿಸಿ. ಆಹಾರ ಮಳಿಗೆ ಜೊತೆಗೆ ಇಲಾಖೆಗಳಿಂದ ಸಂಬಂಧಿಸಿದ ಮಳಿಗೆಗಳನ್ನು ತೆರೆದು ಜಾಗೃತಿ ಮೂಡಿಸುವ ಕೆಲಸವಾಗಬೇಕು. ಬೇರೆ ಬೇರೆ ಜಿಲ್ಲೆಗಳಿಗೂ ಮಳಿಗೆ ನೀಡಲು ಅವಕಾಶ ಕಲ್ಪಿಸಲಾಗುವುದು. ಮಳಿಗೆಗಳನ್ನು ವಿನೂತನ ಹಾಗೂ ಪರಿಣಾಮಕಾರಿಯಾಗಿ ಏರ್ಪಡಿಸುವ ಸಂಬಂಧ ಈಗಿನಿಂದಲೇ ಚರ್ಚಿಸಿ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.