ADVERTISEMENT

ಪಾಂಡವಪುರ: ಡಿ.7ರಂದು ಹಸಿಕರಗ, ಹೂವಿನ ಕರಗ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 13:38 IST
Last Updated 5 ಡಿಸೆಂಬರ್ 2023, 13:38 IST
<div class="paragraphs"><p>ಒರಳುಕಲ್ಲು ದೇವಮ್ಮನ ಹಸಿಕರಗ ಮಹೋತ್ಸವ</p></div>

ಒರಳುಕಲ್ಲು ದೇವಮ್ಮನ ಹಸಿಕರಗ ಮಹೋತ್ಸವ

   

ಪಾಂಡವಪುರ: ತಾಲ್ಲೂಕಿನ ಹರವು ಗ್ರಾಮದಲ್ಲಿ ಡಿ.7 ಮತ್ತು 8ರಂದು ಒರಳುಕಲ್ಲು ದೇವಮ್ಮನ ಹಸಿಕರಗ ಮಹೋತ್ಸವ ನಡೆಯಲಿದೆ.

ಹಸಿ ಕರಗವನ್ನು ದೇವರ ಗುಡ್ಡಪ್ಪ ಮಂಜುನಾಥ ಹೊರಲಿದ್ದಾರೆ. ಹೂವಿನ ಕರಗ ಹೊರಲು ಈಗಾಗಲೇ 60ಮಂದಿ ಸಿದ್ಧತೆ ನಡೆಸಲಿದ್ದಾರೆ.

ADVERTISEMENT

ಕರಗ ಹೊರುವವರು ಡಿ.7ರ ಬೆಳಿಗ್ಗಿನಿಂದ ಉಪವಾಸವಿದ್ದು, ಡಿ.8ರ ರಾತ್ರಿ ಹಸಿ ಕರಗ ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಾರೆ. ಹಸಿ ಕರಗ ಹೊರುವ ಗುಡ್ಡಪ್ಪ ಗುರುವಾರ ಮುಂಜಾನೆ ಪೂಜಾ ವಿಧಿ–ವಿಧಾನಗಳನ್ನು ಪೂರೈಸಿ ನಿಯಮಗಳಂತೆ ಉಪವಾಸವಿದ್ದು, ಶುಕ್ರವಾರ ರಾತ್ರಿ ಹಸಿ ಕರಗ ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಾರೆ.

ಗುರುವಾರ ಹೂವಿನ ಕರಗದ ಮೆರವಣಿಗೆ ಹೋಗುವಾಗ ಪಾಂಡವಪುರ ಟೌನ್ ಹಾರೋಹಳ್ಳಿಗೆ ತೆರಳಿ ಕುಂಬಾರನಿಗೆ ಹಸಿ ಕರಗ ಸಿದ್ದಪಡಿಸಲು ಹೇಳುತ್ತಾರೆ. ಶುಕ್ರವಾರ ಬೆಳಿಗ್ಗೆ ಮಣ್ಣಿನ 8 ಕೆ.ಜಿ.ತೂಕವಿರುವ ಕರಗ ಸಿದ್ದಪಡಿಸಲಾಗುತ್ತದೆ. ಅದನ್ನು ಕೆರೆತೊಣ್ಣೂರು ಕೆರೆಗೆ ತಂದು ಹೂವು ಹೊಂಬಾಳೆಯಿಂದ ಅಲಂಕರಿಸಿ ಪೂಜಾ ಕಾರ್ಯ ನೆರವೇರಿಸಿ ಗುಡ್ಡಪ್ಪ ಕರಗ ಹೊತ್ತು ಹರವು ದೇವಸ್ಥಾನಕ್ಕೆ ಬಂದು ಮೆರವಣಿಗೆ ಹೊರಡುತ್ತಾರೆ. ಈ ವೇಳೆ ಹರಕೆ ಹೊತ್ತ ಭಕ್ತರು ಬಾಯಿಗೆ ಬೀಗ ಹಾಕಿಸಿಕೊಂಡು ಭಕ್ತಿಭಾವ ತೋರುತ್ತಾರೆ.

‘ಎಂದಿನಂತೆ ಕರಗ ಮಹೋತ್ಸವದಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ದೇವಸ್ಥಾನದಲ್ಲಿ ನಡೆಯುತ್ತದೆ. ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಗುಡ್ಡಪ್ಪ ಮಂಜಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.