ಮಳವಳ್ಳಿ: ಪಟ್ಟಣದ ಅಶೋಕನಗರದಲ್ಲಿ ಕೆಂಚಣ್ಣ ಮತ್ತು ಕರಿಯಣ್ಣ ದೇವರ ಪಂಚಲೋಹದ ಹರಿಗೆ ಹಬ್ಬವು ಎರಡು ದಿನ ವಿಜೃಂಭಣೆಯಿಂದ ನಡೆಯಿತು.
ಶುಕ್ರವಾರ ಆರಂಭವಾದ ಕೆಂಚಣ್ಣ ಮತ್ತು ಕರಿಯಣ್ಣ ದೇವರ ಪಂಚಲೋಹದ ಹರಿಗೆ ಹಬ್ಬದ ಅಂಗವಾಗಿ ಪುಣ್ಯಾಹ, ನಾಂದಿ ನಕ್ಷತ್ರ, ಶಾಂತಿ ಹೋಮ ಹಾಗೂ ಸ್ವಾಮಿಯ ಕಣ್ಣು ತೆರೆಸುವ ಕಾರ್ಯಕ್ರಮವು ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಶನಿವಾರ ಬೆಳಿಗ್ಗೆ 6.20 ರಿಂದ 8.30ರವರೆಗಿನ ಮುಹೂರ್ತದಲ್ಲಿ ಪಟ್ಟಣದ ದೊಡ್ಡಕೆರೆ ಸಮೀಪದ ಮಲೆಮಹದೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ನೂತನ ಕೆಂಚಣ್ಣ ಮತ್ತು ಕರಿಯಣ್ಣ ಹರಿಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಲೆಮಹದೇಶ್ವರಸ್ವಾಮಿ ದೇವಸ್ಥಾನದ ಬಳಿ ಹೂ ಹೊಂಬಾಳೆ, ಮಣೆ ಸೇವೆ, ಹುಲಿವಾಹನ ಉತ್ಸವ, ಪಂಚಕಳಸದಿಂದ ಹೊಸನೀರು ತಂದು ನೂರಾರು ಮಂದಿ ಹರಿಗೆಗಳಿಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಿಕೊಂಡು ಮದ್ದೂರು- ಕೊಳ್ಳೇಗಾಲ ರಸ್ತೆಯ ಮೂಲಕ ಅಶೋನಗರದ ಕಾಲೊನಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಯುವಕ- ಯುವತಿಯರು ತಮಟೆಯ ಸದ್ದಿಗೆ ಕುಣಿದು ಕುಪ್ಪಳಿಸಿದರು. ನಂತರ ಶ್ರೀರಾಮ ಮಂದಿರದ ಒಳಗೆ ನೂತನ ಕೆಂಚಣ್ಣ ಮತ್ತು ಕರಿಯಣ್ಣ ಹರಿಗೆಯನ್ನು ಪ್ರವೇಶ ಮಾಡಲಾಯಿತು. ಅಶೋಕನಗರದ ಎಲ್ಲ ದಾಸಪ್ಪಂದಿರು, ಗುಡ್ಡಪ್ಪಂದಿರು, ಶಂಖ, ಜಾಗಟೆ ಸಮೇತರಾಗಿ ಉತ್ಸವದಲ್ಲಿ ಭಾಗಿಯಾಗಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
ಭಾನುವಾರ ಮಧ್ಯಾಹ್ನ 12ಗಂಟೆಗೆ ಅಶೋಕನಗರದ ಶ್ರೀರಾಮ ಮಂದಿರದ ಬಳಿ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಭಕ್ತರು ಹಾಗೂ ಸಾರ್ವಜನಿಕರು ಆಗಮಿಸುವಂತೆ ಮುಖಂಡರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.