ಮಂಡ್ಯ: ಜಿಲ್ಲೆಯ ಪಾಂಡವಪುರ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಲು ಅವಕಾಶ ನೀಡಬಾರದು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಶನಿವಾರ ಮನವಿ ನೀಡಿದರು.
ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಆಡಳಿತ ಕಚೇರಿ ಸಹಾಯಕಿ ರೋಹಿಣಿ ಅವರು ಜಿಲ್ಲಾಧಿಕಾರಿ ಕುಮಾರ ಅವರ ಪರವಾಗಿ ಮನವಿ ಸ್ವೀಕರಿಸಿದರು.
ಶತಮಾನಗಳ ಹಿಂದೆ ನಿರ್ಮಿಸಿದ ಅಣೆಕಟ್ಟೆ ಇಂದಿಗೂ ಸದೃಢವಾಗಿದೆ, ಜೊತೆಗೆ ಮಂಡ್ಯ ಜಿಲ್ಲೆಯ ಜೀವನಾಡಿಯಾಗಿದೆ, ಬೆಂಗಳೂರು ಸೇರಿದಂತೆ ಹಲವು ನಗರಗಳ ದಾಹ ತಣಿಸುತ್ತಿರುವುದನ್ನು ನಾವು ನೋಡಿದ್ದೇವೆ, ವೈವಿಧ್ಯತೆಗೆ ಹೆಸರಾಗಿರುವ ಕೆಆರ್ಎಸ್ ಅಣೆಕಟ್ಟಗೆ ಗಣಿಗಾರಿಕೆಯಿಂದ ಅಪಾಯ ಬಂದಿದೆ ಎಂದು ಆತಂಕ ಪಟ್ಟರು.
‘ಈ ಹಿಂದೆ ಮಂಡ್ಯ ಜಿಲ್ಲೆಯ ಬೇಬಿ ಬೆಟ್ಟ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ 2018 ಸೆಪ್ಟಂಬರ್ 25 ರಂದು ಬಾರಿ ಶಬ್ಧ ಉಂಟಾಗಿತ್ತು. ಇದರಿಂದ ಮಂಡ್ಯದ ಜನರು ಬೆಚ್ಚಿಬಿದ್ದಿದ್ದರು, ಇದರಿಂದ ಕೆಆರ್ಎಸ್ ಅಣೆಕಟ್ಟೆಯ ಸುರಕ್ಷತಾ ಸಮಿತಿಯವರು ನೈಸರ್ಗಿಕ ವಿಕೋಪ ತಡೆ ಸಮಿತಿ ತಜ್ಞರನ್ನು ಕರೆಯಿಸಿ ಪರಿಶೀಲನೆ ಮಾಡಲಾಗಿ, ಈ ಶಬ್ಧವು ಗಣಿಗಾರಿಕೆಯಿಂದಾಗಿರುವುದು ಎಂಬ ವರದಿ ನೀಡಿದ್ದರು, ಹಾಗಾಗಿ ಕೆಆರ್ಎಸ್ ಅಣೆಕಟ್ಟೆ ವ್ಯಾಪ್ತಿಯ 20 ಕಿ.ಮೀ.ನಲ್ಲಿ ಗಣಿಗಾರಿಕೆ ನಿಷೇಧ ಹೇರಿತ್ತು’ ಎಂದು ಆರೋಪಿಸಿದರು.
ಕೆಆರ್ಎಸ್ ಪಕ್ಷದ ಮಲ್ಲೇಶ್ ಹೆಬ್ಬಕವಾಡಿ ಮಾತನಾಡಿ, ರೈತರ ಜೀವನಾಡಿ ಕೆಆರ್ಎಸ್ ಅಣೆಕಟ್ಟೆ ಉಳಿಬೇಕಾದರೆ ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇದರಿಂದ ಅಕ್ರಮ ಗಣಿಗಾರಿಕೆ ಪಾಲುದಾದರರು ಮತ್ತು ಕ್ರಷರ್ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ತಪ್ಪು ಮಾಹಿತಿಯನ್ನು ನೀಡಿ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿದ್ದಾರೆ ಇದಕ್ಕೆ ಅವಕಾಶ ನೀಡದೇ ಪ್ರತಿಯಾಗಿ ಸರ್ಕಾರವು ನ್ಯಾಯಾಲಯದ ಗಮನಕ್ಕೆ ತಂದು ಅಣೆಕಟ್ಟೆ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕೆಆರ್ಎಸ್ ಪಕ್ಷದ ಜಿಲ್ಲಾಧ್ಯಕ್ಷ ಡಿ.ಜಿ. ನಾಗರಾಜ್, ಪ್ರಧಾನ ಕಾರ್ಯದರ್ಶಿ ಚಂದ್ರು ಕಿಲಾರ, ಕಾರ್ಯದರ್ಶಿ ಶಾಂತಿಪ್ರಸಾದ್, ಮುಖಂಡರಾದ ಯೋಗೇಶ್, ಶಶಿಧರ್ ಮಳವಳ್ಳಿ, ಮಾದೇಗೌಡ, ವಿಶ್ವನಾಥ, ಪ್ರಮೋದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.