ಶ್ರೀರಂಗಪಟ್ಟಣ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಬಂಧುವನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ತಂದೆ ಮತ್ತು ಮಗನಿಗೆ ಪಟ್ಟಣದ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಆಜೀವ ಜೈಲು ಶಿಕ್ಷೆ ಮತ್ತು ತಲಾ ರೂ.50 ಸಾವಿರ ದಂಡ ವಿಧಿಸಿದೆ.
ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ, ಪಂಡವಪುರ ತಾಲ್ಲೂಕಿನ ಸೀತಾಪುರ ಗ್ರಾಮದ ಮರಿದೇವೇಗೌಡ ಮತ್ತು ಆತನ ಮಗ ಸೂರ್ಯ ಶಿಕ್ಷೆಗೆ ಗುರಿಯಾಗಿದ್ದಾರೆ. ನ್ಯಾಯಾಧೀಶರಾದ ಪಿ. ಗೋಪಾಲಕೃಷ್ಣ ರೈ ಆರೋಪಿಗಳಿಗೆ ಶಿಕ್ಷೆ ಮತ್ತು ದಂಡ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.
ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮರಿದೇವೇಗೌಡ ಅವರ ಕಿರಿಯ ಮಗ
ಚಂದ್ರ ಎಂಬಾತ ಕೃತ್ಯ ನಡೆದಾಗ ಅಪ್ರಾಪ್ತನಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾಗಿರುವುದರಿಂದ ಮಂಡ್ಯದ ಬಾಲ ನ್ಯಾಯ ಮಂಡಳಿಯಲ್ಲಿ ವಿಚಾರಣೆ ನಡೆಯುತ್ತಿದೆ.
ಮರಿದೇವೇಗೌಡ ಮತ್ತು ಆತನ ಇಬ್ಬರು ಮಕ್ಕಳು ಮರಿದೇವೇಗೌಡ ಅವರ ಸಹೋದರ ಕೃಷ್ಣೇಗೌಡ ಎಂಬಾತನನ್ನು ಸೀತಾಪುರ ಸಮೀಪದ ಅರಳಕುಪ್ಪೆ ಗ್ರಾಮದ ವೃತ್ತದಲ್ಲಿ 11 ತಿಂಗಳ ಹಿಂದೆ ಕೊಲೆ ಮಾಡಿದ್ದರು. ಪ್ರಕರಣ ನಡೆದ 24 ತಾಸುಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದ ಗ್ರಾಮಾಂತರ ಠಾಣೆ ಸಿಪಿಐ ಬಿ.ಜಿ. ಕುಮಾರ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಂ.ಕೆ. ಪ್ರಫುಲ್ಲಾ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.