ಮದ್ದೂರು: ‘ಎಚ್. ಡಿ ಕುಮಾರಸ್ವಾಮಿಯವರೇ ಗೆಲ್ಲೋದಿಲ್ಲ, ಇನ್ನು ಅವರ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹೇಗೆ ಗೆಲ್ತಾರೆ’ ಎಂದು ಶಾಸಕ ಉದಯ್ ವ್ಯಂಗ್ಯವಾಡಿದರು.
ಪಟ್ಟಣದ ಶಿವಪುರದಲ್ಲಿರುವ ಪಶು ಇಲಾಖೆಯ ಆವರಣದಲ್ಲಿ ಶನಿವಾರ ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಿದ ಸಂದರ್ಭ ‘ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಜೆಡಿಎಸ್– ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ’ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
‘ಅವರಲ್ಲದಿದ್ದರೆ ಅಮಿತ್ ಶಾ ಬೇಕಾದರೂ ಬಂದು ಸ್ಪರ್ಧಿಸಲಿ, ನಮಗೆ ಚಿಂತೆಯಿಲ್ಲ. ಏಕೆಂದರೆ 5 ಗ್ಯಾರಂಟಿಗಳನ್ನು ಸರ್ಕಾರ ಜಾರಿಗೆ ತಂದಿದೆ. ಜನತೆ ಒಪ್ಪಿಕೊಂಡಿದ್ದಾರೆ. ಅವರ ಆಶೀರ್ವಾದ ಕಾಂಗ್ರೆಸ್ ಪರವಾಗಿದೆ’ ಎಂದರು. ಮೂವರು ಡಿಸಿಎಂ ಬಗ್ಗೆ ಮಾತುಗಳು ಪಕ್ಷದ ಒಳಗೇ ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಆಕಾoಕ್ಷಿಗಳು ಇರುತ್ತಾರೆ, ಅದರಲ್ಲೇನು ತಪ್ಪು? ನನಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಆದರೆ, ಹೈ ಕಮಾಂಡ್ ನಿರ್ಧಾರವೇ ಮುಖ್ಯವಲ್ಲವೇ? ಎಂದರು. ಮಂಡ್ಯ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕಾಂಗ್ರೆಸ್ ಪಕ್ಷ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ತಾಲ್ಲೂಕಿನ ಮಲ್ಲನಕುಪ್ಪೆ ಗ್ರಾಮದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಇಲ್ಲ, ಪಶು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ, ಸರ್ಕಾರದ ಗಮನಕ್ಕೆ ತಂದು ಕ್ರಮವಹಿಸಲಾಗುವುದು ಎಂದರು. ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಉದಯ್ ಶಂಕರ್ (ಪ್ರಭಾರ), ಪುರಸಭಾ ಸದಸ್ಯೆ ಸರ್ವಮಂಗಳ, ಇಲಾಖೆಯ ಸಿಬ್ಬಂದಿ ಉಮೇಶ್, ಶ್ರೀನಿವಾಸ್ ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.