ADVERTISEMENT

ಮಳವಳ್ಳಿ: ಬಸ್‌ ನಿರ್ವಾಹಕ ಕೆಲಸ ಬಿಟ್ಟು ಎರೆಹುಳು ಗೊಬ್ಬರದ ಮಹತ್ವ ಸಾರಿದ ಶಿವಣ್ಣ

ಟಿ.ಕೆ.ಲಿಂಗರಾಜು
Published 2 ಮೇ 2024, 5:22 IST
Last Updated 2 ಮೇ 2024, 5:22 IST
ಮಳವಳ್ಳಿ ತಾಲ್ಲೂಕಿನ ಮಿಕ್ಕೆರೆ ಗ್ರಾಮದ ರೈತ ಶಿವಣ್ಣ ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ತೊಡಗಿರುವುದು
ಮಳವಳ್ಳಿ ತಾಲ್ಲೂಕಿನ ಮಿಕ್ಕೆರೆ ಗ್ರಾಮದ ರೈತ ಶಿವಣ್ಣ ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ತೊಡಗಿರುವುದು   

ಮಳವಳ್ಳಿ: ಮೂರು ದಶಕದ ಹಿಂದೆ ಅರೆ ಸರ್ಕಾರಿ ನೌಕರಿ ಸಿಕ್ಕರೂ ಕೃಷಿ ಬಗೆಗಿನ ಆಸಕ್ತಿಯಿಂದಾಗಿ ಕೆಲಸ ಬಿಡುವಂತೆ ಮಾಡಿತು. ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಮಾರಾಟದ ಮೂಲಕ ನೈಸರ್ಗಿಕ ಕೃಷಿ ಅಳವಡಿಸಿಕೊಂಡಿರುವ ತಾಲ್ಲೂಕಿನ ಮಿಕ್ಕೆರೆ ಗ್ರಾಮದ ಶಿವಣ್ಣ ಮಾದರಿ ರೈತ ಎನಿಸಿಕೊಂಡಿದ್ದಾರೆ.

ಐಟಿಐ ವ್ಯಾಸಂಗ ಮಾಡಿದ ಅವರು 1995-99ರವರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು. ಶಿವಣ್ಣ ಅವರ ಮನಸ್ಸು ಕೃಷಿಯತ್ತ ಒಲವು ಹೊಂದಿತ್ತು. ಕೆಲಸ ಬಿಟ್ಟು ಊರಿಗೆ ಬಂದು ಹೈನುಗಾರಿಕೆ ಪ್ರಾರಂಭಿಸಿ ಜೆರ್ಸಿ ಹಸುಗಳ ಡೇರಿ ನಡೆಸುತ್ತಿದ್ದರು. ಅವರಿಗೆ ಐಒಬಿ ಬ್ಯಾಂಕ್‌ನ ಅಧಿಕಾರಿಗಳು ಆರ್ಥಿಕ ನೆರವು ನೀಡಿ ಪ್ರೋತ್ಸಾಹ ನೀಡಿದ್ದರು. ಒಂದೊಂದೇ ಮೆಟ್ಟಿಲೇರಿದ ಅವರು ಕೃಷಿ ಕಾಯಕದಲ್ಲಿ ಯಶಸ್ವಿಯಾದರು.

ಮೈಸೂರು ಆಕಾಶವಾಣಿಯಲ್ಲಿ ಶಿವಣ್ಣ ಅವರು ಸಂದರ್ಶನಕ್ಕೆ ತೆರಳಿದ್ದ ವೇಳೆ ಧಾರವಾಡದ ರೈತರೊಬ್ಬರ ಯಶೋಗಾಥೆ ಬಗ್ಗೆ ತಿಳಿದುಕೊಂಡರು. 2015ರಲ್ಲಿ ಹಲವಾರು ನೈಸರ್ಗಿಕ ಕೃಷಿ ಕಾರ್ಯಾಗಾರಗಳಲ್ಲಿ ಭಾಗವಹಿಸಿ ದೇಸಿ ಹಸು, ವಿದೇಶಿ ಹಸುಗಳ ನಡುವಿನ ವ್ಯತ್ಯಾಸ ತಿಳಿದುಕೊಂಡು ದೇಸಿ ತಳಿಗಳಾದ ಹಳ್ಳಿಕಾರ್, ಮಲೆನಾಡು ಗಿಡ್ಡ, ಗಿರ್ ತಳಿಯ ಹಸುಗಳನ್ನು ಸಾಕಿದರು.

ADVERTISEMENT

ತಮ್ಮ 20 ಗುಂಟೆಯ ಜಮೀನಿನ ಜತೆ 3 ಎಕರೆ ಜಮೀನನ್ನು ಗುತ್ತಿಗೆ ಪಡೆದ ಅವರು ಎರೆಹುಳು ಗೊಬ್ಬರ, ಜೀವಾಮೃತ, ಘನ ಜೀವಾಮೃತ ತಯಾರಿಸಿ ಮಾರಾಟ ಮಾಡುವ ಕಾಯಕ ಆರಂಭಿಸಿದರು. ನಂತರ ದಿನಗಳಲ್ಲಿ ದೊಡ್ಡ ಮಟ್ಟದ ಎರೆಹುಳು ಘಟಕ ಸ್ಥಾಪಿಸಿ ಪ್ರಸ್ತುತ ಪ್ರತಿ ತಿಂಗಳು 10 ಟನ್‌ಗೂ ಅಧಿಕ ಎರೆಹುಳು ಗೊಬ್ಬರ ಮಾರಾಟ ಮಾಡುತ್ತಾರೆ.

ಇದರಿಂದ ಪ್ರತಿ ವರ್ಷ ಸುಮಾರು ₹ 6 ಲಕ್ಷ  ಆದಾಯ ಗಳಿಸುತ್ತಿದ್ದಾರೆ. ಇವರಿಗೆ ಪತ್ನಿ  ಹೇಮಲತಾ ಅವರೂ ಬೆನ್ನೆಲುಬಾಗಿ ನಿಂತಿದ್ದಾರೆ. ಜೀವವೈವಿಧ್ಯ ಹೆಚ್ಚಿಸಲು ಕತ್ತೆ, ಬಾತು ಕೋಳಿ, ಮೇಕೆ ಮರಿ, ಜೇನು ಸಾಕಣೆಯನ್ನು ಆರಂಭಿಸಿದ್ದಾರೆ. ಕತ್ತೆ ಹಾಲಿಗಂತೂ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ದೂರದ ಊರುಗಳಿಂದ ಮಕ್ಕಳಿಗೆ ಕತ್ತೆ ಹಾಲು ಕುಡಿಸಲು ಜನ ಇವರ ತೋಟಕ್ಕೆ ಬರುತ್ತಾರೆ. ರೇಷ್ಮೆ ಕೃಷಿಗೂ ಆದ್ಯತೆ ನೀಡಿದ್ದಾರೆ.

ಮತ್ತೊಂದೆಡೆ ವಿಷಮುಕ್ತವಾಗಿ ರಾಜಮುಡಿ, ಸೇಲಂ ಸಣ್ಣ ಸೇರಿದಂತೆ ಹಲವು ದೇಸಿ ತಳಿಯ ಭತ್ತ ಬೆಳೆದು ಶೇಖರಿಸಿ ಅಕ್ಕಿ ಮಾಡಿಸಿ ಬೆಂಗಳೂರು, ಮೈಸೂರಿನಲ್ಲಿ ಮಾರಾಟ ಮಾಡುವ ಶಿವಣ್ಣ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಕೃಷಿಯಲ್ಲೂ ಆಸಕ್ತಿ ಮೂಡಿಸಿದ್ದಾರೆ. ಇವರ ಎರೆಹುಳು ಗೊಬ್ಬರ ತಯಾರಿಕಾ ಘಟಕಕ್ಕೆ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ.

ಶಿವಣ್ಣ ಅವರು ಬೇರೆ ಬೇರೆ ರಾಜ್ಯಗಳ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿದ್ದ ಇವರನ್ನು ಮೈಸೂರಿನ ಸುತ್ತೂರು ಮಠ ಸೇರಿದಂತೆ ಹಲವು ಸಂಸ್ಥೆಗಳು ಗೌರವಿಸಿವೆ.

ಮಳವಳ್ಳಿ ತಾಲ್ಲೂಕಿನ ಮಿಕ್ಕೆರೆ ಗ್ರಾಮದ ರೈತ ಶಿವಣ್ಣ ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ತೊಡಗಿರುವುದು.
ಮಳವಳ್ಳಿ ತಾಲ್ಲೂಕಿನ ಮಿಕ್ಕೆರೆ ಗ್ರಾಮದ ರೈತ ಶಿವಣ್ಣ ಎರೆಹುಳು ಗೊಬ್ಬರ ತಯಾರಿಕಾ ಘಟಕಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿ ವಿಕ್ಷೀಸುತ್ತಿರುವುದು.
ನೈಸರ್ಗಿಕ ಕೃಷಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎರೆಹುಳು ಗೊಬ್ಬರ ತಯಾರಿಸಿ ರೈತರಿಗೆ ಮಾರಾಟ ಮಾಡುತ್ತಿರುವೆ. ಉಚಿತ ತರಬೇತಿಯ ನೀಡುವೆ. ನಾನು ತಯಾರಿಸುವ ಘನಾಮೃತಕ್ಕೂ ಬೇಡಿಕೆ ಹೆಚ್ಚಿದೆ
- ಶಿವಣ್ಣ ಮಿಕ್ಕೆರೆ ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.