ಬೆಳಕವಾಡಿ: ಗ್ರಾಮದ ಪೊಲೀಸ್ ಠಾಣೆಯ ಗೃಹ ರಕ್ಷಕ ದಳದ ಸಿಬ್ಬಂದಿ ಸಿದ್ಧ (36) ಎಂಬುವವರು ಮಧ್ಯಪ್ರದೇಶದ ಚುನಾವಣಾ ಬಂದೋಬಸ್ತ್ ಕಾರ್ಯಕ್ಕೆ ತೆರಳಿ, ಹಿಂತಿರುಗಿ ಬರುವಾಗ ಮಾರ್ಗಮಧ್ಯೆ ಅಸ್ವಸ್ಥರಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ನ.12ರಂದು ಮಧ್ಯಪ್ರದೇಶ ಚುನಾವಣಾ ಕಾರ್ಯಕ್ಕೆ ಮಂಡ್ಯ ಜಿಲ್ಲೆಯ ವಿವಿಧ ಠಾಣೆಯ ಗೃಹ ರಕ್ಷಕ ದಳದ ಸಿಬ್ಬಂದಿ ತೆರಳಿದ್ದರು. ಶುಕ್ರವಾರ ರಾತ್ರಿ ರೈಲಿನಲ್ಲಿ ವಾಪಸ್ ಬರುವ ವೇಳೆ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರಿಗೆ ತಾಯಿ, ಪತ್ನಿ, ಇಬ್ಬರು ಸಣ್ಣ ವಯಸ್ಸಿನ ಮಕ್ಕಳು ಇದ್ದಾರೆ. ಗ್ರಾಮದ ಹೊರವಲಯದ ಕಾವೇರಿ ನದಿ ತೀರದ ಸ್ಮಶಾನದಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಿತು.
ಗೃಹರಕ್ಷಕ ದಳದ ಮಂಡ್ಯ ಜಿಲ್ಲಾ ಕಮಾಂಡೆಂಟ್ ವಿನೋದ್ ಖನ್ನಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ‘ಸಿದ್ಧ ಅವರು ನ.12ರಂದು ಮಧ್ಯಪ್ರದೇಶದ ಚುನಾವಣಾ ಕಾರ್ಯಕ್ಕೆ ತೆರಳಿದ್ದರು. ಹಿಂತಿರುಗಿ ಬರುವಾಗ ರೈಲಿನಲ್ಲಿಕುಸಿದು ಬಿದ್ದರು, ಅವರನ್ನು ಬೆಂಗಳೂರಿನ ಕೆ.ಸಿ.ಜನರಲ್ ಅಸ್ಪತ್ರೆಗೆ ಕರೆದೊಯ್ದುದಾಗ ವೈದ್ಯರು ಪರೀಕ್ಷಿಸಿ, ರಕ್ತದೊತ್ತಡ ಕುಸಿತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ’ ಎಂದರು.
‘ಮೃತರ ಅಂತ್ಯಸಂಸ್ಕಾರಕ್ಕಾಗಿ ಈಗ ಇಲಾಖೆಯಿಂದ ₹ 15 ಸಾವಿರ ನೀಡಲಾಗಿದ್ದು, ಕುಟುಂಬಕ್ಕೆ ಇಲಾಖೆಯಿಂದ ದೊರೆಯುವ ಸೌಲಭ್ಯ ಕೊಡಿಸಲಾಗುವುದು’ ಎಂದು ತಿಳಿಸಿದರು. ಪೊಲೀಸ್ ಮತ್ತು ಗೃಹರಕ್ಷಕ ಇಲಾಖೆಗಳಿಂದ ಮೌನಾಚರಣೆ, ಮೃತ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.