ಮದ್ದೂರು: ರಾಜ್ಯದ ಪ್ರಮುಖ ಎಳನೀರು ಮಾರುಕಟ್ಟೆ ಎಂದೇ ಹೆಸರಾದ ಮದ್ದೂರಿನ ಎಳನೀರು ಮಾರುಕಟ್ಟೆಯ ಒಡಲಲ್ಲಿ ಇರುವ ಲಕ್ಷಾಂತರ ತೆಂಗಿನಮರಗಳು ಬರದಿಂದ ತತ್ತರಿಸಿ, ನೀರಿಲ್ಲದೆ ಒಣಗುತ್ತಿವೆ.
ಹಲವಾರು ತಿಂಗಳಿನಿಂದಲೂ ಮಳೆ ಬಾರದೇ ಇಡೀ ರಾಜ್ಯವು ಪರಿತಪಿಸುತ್ತಿದೆ. ಜಿಲ್ಲೆಯ ಹಾಗೂ ತಾಲ್ಲೂಕಿನ ರೈತರೂ ಕೂಡಾ ಇರುವ ಬೆಳೆಗಳನ್ನು ಉಳಿಸಲು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ. ಮುಖ್ಯ ಬೆಳೆಗಳಾದ ಭತ್ತ, ಕಬ್ಬು ಸೇರಿದಂತೆ ಉಳಿಸಿಕೊಳ್ಳುವುದು ಸವಾಲಾಗಿದೆ. ಜಿಲ್ಲೆಯ ರೈತರಿಗೆ ಆರ್ಥಿಕ ಶಕ್ತಿ ತುಂಬಿದ್ದ ತೆಂಗಿನ ಮರಗಳು ದಿನಕಳೆದಂತೆ ನೀರಿಲ್ಲದೆ ಸೊರಗುತ್ತಿವೆ.
ಪ್ರತಿ ಬೇಸಿಗೆಯಲ್ಲೂ ಮದ್ದೂರಿನ ಎಳನೀರು ಮಾರುಕಟ್ಟೆಗೆ ವ್ಯಾಪಾರಕ್ಕಾಗಿ ಬರುವ ರೈತರು ಹಾಗೂ ವ್ಯಾಪಾರಸ್ಥರಿಂದ ಗಿಜಿಗಿಗುಡುತ್ತಿತ್ತು. ಮಾರ್ಚ್- ಜೂನ್ವರೆಗೂ ನಿತ್ಯ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿತ್ತು.
ಇಲ್ಲಿನ ಎಳನೀರು ಖರೀದಿಸಲು ಹೊರ ರಾಜ್ಯಗಳಾದ ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಹರಿಯಾಣದಿಂದಲೂ ರಾಜ್ಯಗಳಿಂದ ಲಾರಿಗಳಲ್ಲಿ ಬಂದು ಖರೀದಿಸುವಷ್ಟು ಬೇಡಿಕೆ ಇಲ್ಲಿನ ಎಳನೀರಿಗಿದೆ. ಇಲ್ಲಿನ ಸಾವಿರಾರು ಸ್ಥಳೀಯ ವ್ಯಾಪಾರಸ್ಥರು, ಕಾರ್ಮಿಕರು ಇದನ್ನು ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಜಿಲ್ಲೆಯ ಹಾಗೂ ತಾಲ್ಲೂಕಿನ ಲಕ್ಷಾಂತರ ರೈತರು ಆರ್ಥಿಕವಾಗಿ ತೆಂಗನ್ನು ಅವಲಂಬಿಸಿದ್ದಾರೆ.
ಭೀಕರ ಬರಗಾಲ: ರೈತರ ನಿರಂತರ ವರಮಾನದ ಮೂಲವಾಗಿದ್ದ ತೆಂಗಿನ ಮರಗಳು ಸಂಪೂರ್ಣವಾಗಿ ಒಣಗಿ ಹೋಗುತ್ತಿದ್ದು, ಸಂಘ ಹಾಗೂ ಬ್ಯಾಂಕ್ ಸಾಲದ ಕಂತು ಮರುಪಾವತಿ ಮಾಡಲು ರೈತರಿಗೆ ಅಸಾಧ್ಯವಾಗಿದೆ. ಜೊತೆಗೆ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಬೆಳೆದು ನಿಂತಿದ್ದ ಕಬ್ಬು, ಬಾಳೆ ಅಡಿಕೆಯು, ಒಣಗಿ ನಷ್ಟವಾಗಿದೆ.
ಒಣಗಿದ ತೆಂಗಿನ ಮರಗಳು ರೈತರ ಆದಾಯದ ಮೂಲಕ್ಕೆ ಕತ್ತರಿ ಗಿಡ ಉಳಿಸಲು ಟ್ಯಾಂಕರ್ ನೀರಿಗೆ ಮೊರೆ
ಪಶು ಸಾಕಾಣೆಯೂ ದುಬಾರಿ ಹೈನು ರಾಸುಗಳಿಗೆ ಮೇವಿನ ಕೊರತೆ ತೀವ್ರಗೊಂಡು ಹಾಲು ಉತ್ಪಾದನೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನೀರು ಇಲ್ಲದೇ ಹಸುಗಳಿಗೆ ಮೇವಿನ ಕೊರತೆ ಎದುರಾಗಿದೆ. ಇದೇ ರೀತಿ ಮುಂದುವರಿದರೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮೇವು ಖರೀದಿಸಿ ಹೈನುಗಾರಿಕೆ ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ.
ಕೈಗೆಟುಕುದ ಟ್ಯಾಂಕರ್ ನೀರು ಪ್ರತಿ ಟ್ಯಾಂಕರ್ ನೀರಿಗೆ ₹600ರಿಂದ ₹800ರವರೆಗೆ ಬಾಡಿಗೆ ನೀಡಿ ತೆಂಗಿನ ಮರಗಳನ್ನು ಉಳಿಸಿಕೊಳ್ಳುವ ಪರಿಸ್ಥಿತಿ ಇದೆ. ಈಗಾಗಲೇ ಲಕ್ಷಾಂತರ ತೆಂಗಿನ ಮರಗಳು ಒಣಗಿ ಹೊಗಿದ್ದು ಮೇ ತಿಂಗಳಲ್ಲಿ ಮಳೆ ಬರದಿದ್ದರೆ ಇನ್ನೂ ಹೆಚ್ಚು ತೆಂಗಿನ ಮರಗಳು ಒಣಗಿ ಹೋಗಿ ಎಳನೀರಿಗೂ ಕ್ಷಾಮ ಉಂಟಾಗಲಿದೆ.ರೋಗಿಗಳ ಬಳಕೆಗೂ ಎಳನೀರು ದೊರಕದ ಸ್ಥಿತಿ ನಿರ್ಮಾಣ ವಾಗಲಿದೆ. ನ.ಲಿ.ಕೃಷ್ಣ ಪ್ರಗತಿಪರ ರೈತ ನಗರಕೆರೆ ಮದ್ದೂರು ತಾಲ್ಲೂಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.