ADVERTISEMENT

ಮಂಡ್ಯ ವಿ.ವಿ. ಘಟಿಕೋತ್ಸವ ಸೆ.13ರಂದು

ಸ್ನಾತಕ ವಿಭಾಗದ 1,457 ಮತ್ತು ಸ್ನಾತಕೋತ್ತರ ವಿಭಾಗದ 645 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:20 IST
Last Updated 24 ಆಗಸ್ಟ್ 2024, 15:20 IST
ಮಂಡ್ಯ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಶುಕ್ರವಾರ ಘಟಿಕೋತ್ಸವ ಸಂಬಂಧ ನಡೆದ ಸಭೆಯಲ್ಲಿ ವಿವಿಯ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರೂ ಆದ ವಿಧಾನ ಪರಿಷತ್ತಿನ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿದರು. ವಿವಿ ಕುಲಪತಿ ಡಾ.ಪುಟ್ಟರಾಜು ಪಾಲ್ಗೊಂಡಿದ್ದರು  
ಮಂಡ್ಯ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಶುಕ್ರವಾರ ಘಟಿಕೋತ್ಸವ ಸಂಬಂಧ ನಡೆದ ಸಭೆಯಲ್ಲಿ ವಿವಿಯ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರೂ ಆದ ವಿಧಾನ ಪರಿಷತ್ತಿನ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿದರು. ವಿವಿ ಕುಲಪತಿ ಡಾ.ಪುಟ್ಟರಾಜು ಪಾಲ್ಗೊಂಡಿದ್ದರು     

ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದ ಮೊದಲ ಮತ್ತು ಎರಡನೇ ವಾರ್ಷಿಕ ಘಟಿಕೋತ್ಸವವನ್ನು ಸೆ.13ರಂದು ಆಯೋಜಿಸಲು ಶುಕ್ರವಾರ ನಡೆದ ಮಂಡ್ಯ ವಿಶ್ವವಿದ್ಯಾಲಯದ ಎರಡನೇ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಮಂಡ್ಯ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರೂ ಆದ ವಿಧಾನ ಪರಿಷತ್ತಿನ ಸದಸ್ಯ ಮಧು ಜಿ.ಮಾದೇಗೌಡ ಅವರು, ಮಂಡ್ಯ ವಿವಿ ಆಗಿ ರಚನೆಗೊಂಡ ನಂತರ‌ ನಡೆಯುತ್ತಿರುವ ಪ್ರಥಮ‌ ಘಟಿಕೋತ್ಸವ ಇದಾಗಿದ್ದು ಅರ್ಥಪೂರ್ಣವಾಗಿ, ಅಚ್ಚುಕಟ್ಟಾಗಿ ಮತ್ತು ವಿಜೃಂಭಣೆಯಿಂದ ಆಯೋಜಿಸಬೇಕು ಎಂದು ಸೂಚಿಸಿದರು.

ದಾನಿಗಳು ಸ್ಥಾಪಿಸಿರುವ ದತ್ತಿಗಳಿಂದ ಬಹುಮಾನಗಳನ್ನು ನೀಡುವುದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗಲಿದೆ. ಶೈಕ್ಷಣಿಕವಾಗಿಯೂ ನೆರವಾಗಲಿದೆ ಎಂದರು. ಸಾಕಷ್ಟು ದಾನಿಗಳು ದತ್ತಿ ನಿಧಿ ಸ್ಥಾಪಿಸಲು ಮುಂದೆ ಬರುತ್ತಾರೆ. ಅಂತಹವರ ನೆರವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

2,102 ವಿದ್ಯಾರ್ಥಿಗಳಿಗೆ ಪದವಿ:

ವಿವಿ ಕುಲಸಚಿವ (ಮೌಲ್ಯಮಾಪನ– ಪ್ರಭಾರ) ಯೋಗನರಸಿಂಹಚಾರಿ ಮಾತನಾಡಿ, 2019-22 ಮತ್ತು 2020-23ನೇ ಶೈಕ್ಷಣಿಕ ಸಾಲುಗಳ ಒಟ್ಟು 1,457 ಸ್ನಾತಕ ವಿದ್ಯಾರ್ಥಿಗಳು ಹಾಗೂ 2019-20, 2020-21 ಮತ್ತು 2021-22ನೇ ಶೈಕ್ಷಣಿಕ ಸಾಲುಗಳ ಒಟ್ಟು 645 ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2,102 ಅರ್ಹ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರಗಳನ್ನು ಪಡೆಯಲು ಅರ್ಹರಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಅಲ್ಲದೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರ‍್ಯಾಂಕ್‌ಗಳನ್ನು ಪ್ರದಾನ ಮಾಡಲು ಮೈಸೂರು ವಿ.ವಿ. ಅಳವಡಿಸಿಕೊಂಡಿರುವ ನಿಯಮಗಳನ್ನೇ ಮಂಡ್ಯ ವಿ.ವಿ.ಯಲ್ಲೂ ಅಳವಡಿಸಿಕೊಳ್ಳಲು ಹಾಗೂ ಸರ್ಕಾರಿ ಮಹಾವಿದ್ಯಾಲಯದ (ಸ್ವಾಯತ್ತ) ಎಲ್ಲಾ ದತ್ತಿಗಳನ್ನು ಮಂಡ್ಯ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡಿರುವುದರಿಂದ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನವಾಗಿ ಘಟಿಕೋತ್ಸವದಲ್ಲಿ ಪ್ರದಾನ ಮಾಡುವುದಕ್ಕೆ ಅನುಮೋದನೆ ಕೋರಿದರು. ಇದಕ್ಕೆ ಸಭೆ ಸರ್ವಾನುಮತದಿಂದ ಅನುಮೋದಿಸಿತು.

ಕ್ರೀಡಾಕೂಟ ಯೋಜನೆ

ವಿಶ್ವವಿದ್ಯಾಲಯದ ಕುಲಪತಿ ಡಾ.ಪುಟ್ಟರಾಜು ಮಾತನಾಡಿ, ಮಂಡ್ಯ ವಿವಿಯು ಸಂಯೋಜಿತ ವಿ.ವಿ. ಆಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಮೊದಲನೇ ವರ್ಷದ ವಿದ್ಯಾರ್ಥಿಗಳು ಮಾತ್ರ ಮಂಡ್ಯ ವಿ.ವಿ ವ್ಯಾಪ್ತಿಗೆ ಬರುತ್ತಾರೆ ಮತ್ತು 2024-25ನೇ ಶೈಕ್ಷಣಿಕ ಸಾಲಿನಿಂದ ಮೊದಲನೇ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳು ಬರುವುದರಿಂದ ಮಾಂಡವ್ಯ ವಲಯ ಕ್ರೀಡಾಕೂಟ ಆಯೋಜಿಸುವ ಸಂಬಂಧ ದೈಹಿಕ ಶಿಕ್ಷಣ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಲು ಸಭೆಯ ಅನುಮೋದನೆ ಕೋರಿದರು. ಇದಕ್ಕೆ ಸಭೆ ಒಪ್ಪಿತು.

ಅಲ್ಲದೆ, ಮಂಡ್ಯ ಜಿಲ್ಲೆಯ ಸಮಗ್ರ ಇತಿಹಾಸ, ಸಾಹಿತ್ಯ ಜಾನಪದ, ವಿದ್ವಾಂಸರು, ಸ್ವಾತಂತ್ರ್ಯ, ಕೃಷಿ, ನೀರಾವರಿ, ಸಾಮಾಜಿಕ, ಆರ್ಥಿಕ ಐತಿಹ್ಯ ಒಳಗೊಂಡ ‘ಮಂಡ್ಯ ವಿವಿ ಗೀತೆ’ ಹಾಗೂ ‘ವಿವಿ ಆವರಣ’ಕ್ಕೆ ಸೂಕ್ತ ಹೆಸರನ್ನು ಸೂಚಿಸಲು ನೀಡಿದ್ದ ಕರೆಗೆ ಉತ್ತಮ ಸ್ಪಂದನೆ ಬಂದಿದೆ. ಈ ಸಂಬಂಧ ವಿ.ವಿ. ಹಂತದಲ್ಲಿ ಸಮಿತಿ ರಚಿಸಿದ್ದು, ಅಂತಿಮಗೊಳಿಸುವ ಕೆಲಸ ನಡೆದಿದೆ ಎಂದು ಹೇಳಿದರು.

ಕುಲಸಚಿವ (ಆಡಳಿತ) ಡಾ.ಶಿವಚಿತ್ತಪ್ಪ, ಹಣಕಾಸು ಅಧಿಕಾರಿ ಡಾ.ಪಿ.ಮನೋಹರ್, ಸಿಂಡಿಕೇಟ್ ಸದಸ್ಯರಾದ ಡಾ.ಎಸ್.ಎಲ್. ಸುರೇಶ್, ಸಿ.ಜಯರಾಮು, ಕೆ.ಶಿವಶಂಕರ್, ಬಿ.ರಾಜಣ್ಣ, ಕೆ.ಟಿ. ಅಪ್ಪಾಜಪ್ಪ, ಎಂ.ಸಿ.ಸತೀಶ್ ಬಾಬು ನಾಗರಾಜು ಹಾಜರಿದ್ದರು.

ದತ್ತಿ ಬಹುಮಾನದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ವಿದ್ಯಾರ್ಥಿಗಳಿಗೆ ನಗದು ಬಹುಮಾನ; ಸಭೆ ಅನುಮೋದನೆ ವಿವಿ ಆವರಣಕ್ಕೆ ಹೆಸರು; ಉತ್ತಮ ಸ್ಪಂದನೆ 
‘ಹೊಸ ಕೋರ್ಸ್ ಆರಂಭಕ್ಕೆ ತಜ್ಞರ ಸಮಿತಿ ರಚಿಸಿ’
‘ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗಕ್ಕೆ ಅಣಿಗೊಳಿಸುವ ನಿಟ್ಟಿನಲ್ಲಿ ಮಂಡ್ಯ ವಿಶ್ವವಿದ್ಯಾಲಯದಲ್ಲಿ ತಂತ್ರಜ್ಞಾನ ಆಧಾರಿತ ಹೊಸ ಕೋರ್ಸ್‌ಗಳನ್ನು ಆರಂಭಿಸಬೇಕು. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ರಚಿಸಬೇಕು’ ಎಂದು ಮಂಡ್ಯ ವಿವಿ ವಿದ್ಯಾವಿಷಯಕ ಪರಿಷತ್ತಿನ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು. ಸಾಂಪ್ರದಾಯಿಕ ಶಿಕ್ಷಣಕ್ಕಷ್ಟೇ ಸೀಮಿತವಾದರೆ ವಿದ್ಯಾರ್ಥಿಗಳೂ ಆಸಕ್ತಿ ತೋರುವುದಿಲ್ಲ. ದಾಖಲಾತಿ ಕುಸಿದು ವಿವಿಗೂ ಹಿನ್ನಡೆ ಆಗಲಿದೆ. ಈಗಾಗಲೇ ಕೆಲವು ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಸಂಶೋಧನಾ ಚಟುವಟಿಕೆಗಳು ಕಷ್ಟ ಅನ್ನುವಂತಹ ಪರಿಸ್ಥಿತಿ ಇದೆ. ಹೀಗಾಗಿ ಹೊಸ ಕೋರ್ಸ್‌ಗಳ ಆರಂಭ ಆಗಬೇಕು ಎಂದು ಸಲಹೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.