ಮದ್ದೂರು: ‘ಎಚ್.ಡಿ.ಕುಮಾರಸ್ವಾಮಿ ಲೋಕಸಭಾ ಸದಸ್ಯರು ಹಾಗೂ ಕೇಂದ್ರದಲ್ಲಿ ಮಂತ್ರಿಯಾದ ಮಾತ್ರಕ್ಕೆ ಮಂಡ್ಯದ ಒಡೆಯರಾಗುವುದಕ್ಕೆ ಆಗುವುದಿಲ್ಲ’ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಪಟ್ಟಣದ ಲಕ್ಷ್ಮಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಲೋಕಸಭಾ ಚುನಾವಣೆ ಆತ್ಮಾವಲೋಕನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಚುನಾವಣೆ ಎಂದ ಮೇಲೆ ಸೋಲು ಗೆಲುವು ಇದ್ದೇ ಇರುತ್ತದೆ. ಇನ್ನೂ ನಾಲ್ಕು ವರ್ಷ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇರುತ್ತಾರೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುತ್ತದೆ. ಈ ಸೋಲಿಗೆ ಮುಂದಿನ ಚುನಾವಣೆಗಳಲ್ಲೇ ಉತ್ತರ ನೀಡಬೇಕಿದೆ’ ಎಂದರು.
‘ಮಂಡ್ಯ ಜಿಲ್ಲೆಯಲ್ಲಿ ಶಂಕರೇಗೌಡ, ಎಸ್.ಎಂ.ಕೃಷ್ಣ, ಅಂಬರೀಷ್ ಸೇರಿ ಹಲವು ದೊಡ್ಡ ವ್ಯಕ್ತಿಗಳು ಗೆಲುವು ಹಾಗೂ ಸೋಲನ್ನು ಕಂಡಿದ್ದಾರೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಯಾರೂ ಎದೆಗುಂದಬೇಕಿಲ್ಲ’ ಎಂದರು.
‘ಉತ್ತರ ಭಾರತದಲ್ಲಿ ಮೋದಿ ಅಲೆ ಏನೂ ಕೆಲಸ ಮಾಡಿಲ್ಲ, ಆದರೆ, ಕರ್ನಾಟಕ ಸೇರಿ ದಕ್ಷಿಣ ಭಾರತದ ಕೆಲವು ಕಡೆ ಎನ್ ಡಿಎ ಹೆಚ್ಚು ಸ್ಥಾನ ಗಳಿಸಿದೆ ಅಷ್ಟೇ, ಅಂತೆಯೇ ರಾಮನಗರದಲ್ಲಿ ಮಂಡ್ಯದಂತೆಯೇ ಡಿ.ಕೆ.ಸುರೇಶ್ ರನ್ನು ಸೋಲಿಸಿರುವುದು ಬೇಸರ ತಂದಿದೆ’ ಎಂದರು.
‘ಕೆಲವರು ಜೆಡಿಎಸ್ ಕಾರ್ಯಕರ್ತರು ಲೋಕಸಭಾ ಚುನಾವಣೆಯಲ್ಲಿ ಹೆಚ್.ಡಿ.ಕೆ ಗೆಲುವು ಸಾಧಿಸಿದ ಬಳಿಕ ದಬ್ಬಾಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಆದರೆ, ಆ ರೀತಿಯದ್ದು ಏನೂ ನಡೆಯುವುದಿಲ್ಲ. ಅಂತಹವರಿಗೆ ಉತ್ತರ ಕೊಡಿ’ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಕಾಂಗ್ರೆಸ್ ಕಾರ್ಯಕರ್ತರು, ನೀರು ಕೊಡಿಸಲಿಲ್ಲ ಅದಕ್ಕೆ ಸರಿಯಾಗಿ ವೋಟ್ ಬರಲಿಲ್ಲ, ಅತಿಯಾದ ಆತ್ಮವಿಶ್ವಾಸ, ಸ್ಟಾರ್ ಚಂದ್ರು ಯಾರಿಗೂ ಗೊತ್ತಿರಲಿಲ್ಲ. ಯಾರಿಗಾದರೂ ಸ್ಥಳೀಯರಿಗೆ ಕೊಟ್ಟಿದ್ದರೆ ಇಷ್ಟೊಂದು ಹೀನಾಯ ಸೋಲು ಬರುತ್ತಿರಲಿಲ್ಲ, ಜೆಡಿಎಸ್ನಿಂದ ಪ್ರಬಲ ಅಭ್ಯರ್ಥಿಯಾಗಿ ಹೆಚ್. ಡಿ ಕುಮಾರಸ್ವಾಮಿ ಅಭ್ಯರ್ಥಿಯಾಗಿದ್ದು ಅಂತೆಯೇ ಜಿಲ್ಲೆಯಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿರುವ ಕಾರಣ ಎಂಬ ಅಭಿಪ್ರಾಯಗಳನ್ನು ಸಭೆಯಲ್ಲಿ ಹಂಚಿಕೊಂಡರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಕಂಠಿ ಸುರೇಶ್, ರಾಜೀವ್, ಮನ್ ಮುಲ್ ನಿರ್ದೇಶಕ ಹರೀಶ್, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಗೊರವನಹಳ್ಳಿ ರಾಘವ್, ನಿಡಘಟ್ಟ ಪ್ರಕಾಶ್, ಶಂಕರೇಗೌಡ, ಮನ್ಸೂರ್ ಅಲಿ ಖಾನ್ ಹಾಜರಿದ್ದರು.
ಕಾರ್ಯಕರ್ತರು ಎದೆಗುಂದದಂತೆ ಇರಲು ಸಲಹೆ ಸ್ಥಳೀಯರಿಗೆ ಟಿಕೆಟ್ ಕೊಡಬೇಕಾಗಿತ್ತು ಎಂಬ ಅಭಿಪ್ರಾಯ ಮಂಡನೆ ಬೆಳೆಗಳಿಗೆ ನೀರು ಕೊಡಿಸಿದ್ದರೆ ಕಾಂಗ್ರೆಸ್ ಗೆಲ್ಲುತ್ತಿತ್ತು ಎಂದ ಸಭಿಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.