ಬೆಳಕವಾಡಿ: ಪೂರಿಗಾಲಿ ಗ್ರಾಮದಲ್ಲಿ ಫೆ.11ರಂದು ನಡೆಯಲಿರುವ ಕೊಂಡೋತ್ಸವಕ್ಕೆ ಸಂಪ್ರದಾಯದಂತೆ ಸೌದೆ ತೆಗೆದುಕೊಂಡು ಹೋಗಲು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ತಮ್ಮ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ ಸೋಮವಾರ ಸಂಜೆ ಪೂಜೆ ಸಲ್ಲಿಸಿದರು.
ನಂತರ ಗ್ರಾಮದ ಪಾತಾಳೇಶ್ವರ ದೇವಸ್ಥಾನ ಆವರಣದ ಕೊಂಡದ ಸ್ಥಳದಲ್ಲಿ ಸೌದೆಯನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯಿತು. ಇದಕ್ಕೂ ಮುನ್ನ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ಮಂಗಳ ವಾದ್ಯಗಳೊಂದಿಗೆ ಹೊರಟು ಗ್ರಾಮದ ನಡುಕೇರಿ ಅಮ್ಮ ದೇವಸ್ಥಾನದಲ್ಲಿ ಸಾಗಿ ಪೂಜೆ ಸಲ್ಲಿಸಲಾಯಿತು. ಶಾಸಕರು ಈಡುಗಾಯಿ ಒಡೆದರು.
ನಂತರ ಮೆರವಣಿಗೆ ಪ್ರಮುಖ ಮುಖ್ಯರಸ್ತೆಯಲ್ಲಿ ಸಾಗಿ ಪಾತಾಳೇಶ್ವರ ದೇವಸ್ಥಾನ ಮುಂಭಾಗ ಬಂದಾಗ ಆರ್ಚಕರು ಪೂಜೆ, ಮಂಗಳಾರತಿ ಮಾಡಿ ಬರ ಮಾಡಿಕೊಂಡರು.
ಹದಿನೈದು ಏರು ಕಗ್ಗಲಿ, ಗುಬ್ಬಿ ಸೌದೆಯನ್ನು ದೇವಸ್ಥಾನದ ಆವರಣದಲ್ಲಿ ಕೊಂಡ ನಡೆಯುವ ಸ್ಥಳದಲ್ಲಿ ಇರಿಸಲಾಯಿತು. ನಂತರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕುಟುಂಬಸ್ಥರೊಂದಿಗೆ ಪಾತಾಳೇಶ್ವರ ದೇವಸ್ಥಾನ ತೆರಳಿ ದೇವರ ದರ್ಶನ ಪಡೆದರು.
ಶಾಸಕರ ತಾಯಿ ಮಹದೇವಮ್ಮ, ತಂದೆ ಮಲ್ಲಣ್ಣ, ಪತ್ನಿ ಶಶಿಕಲಾ, ಪುತ್ರಿಯರಾದ ಸಂಜನಾ, ಮೇಘನಾ, ಪುತ್ರ ಯುವರಾಜ್, ಹಾಗೂ ಗ್ರಾಮಸ್ಥರು, ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.