ನಾಗಮಂಗಲ: ಮಳೆಯಿಂದ ತೆಂಗಿನ ಮರದ ಗರಿಯು ವಿದ್ಯುತ್ ತಂತಿಗೆ ಸಿಲುಕಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಕಾರಣ ಗರಿಯನ್ನು ತೆರವುಗೊಳಿಸಲು ಹೋಗಿದ್ದ ಲೈನ್ ಮ್ಯಾನ್ ಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ತಾಲ್ಲೂಕಿನ ಬೆಳ್ಳೂರು ಟೌನ್ ವ್ಯಾಪ್ತಿಯ ಭೈರವೇಶ್ವರ ಬಡಾವಣೆಯ ತೋಟದ ಮಾಲೀಕ ಎಂಎಲ್ಎ ಮೂಡ್ಲಿ ಎಂಬುವರ ತೋಟದಲ್ಲಿ ಬುಧವಾರ ಬೆಳಿಗ್ಗೆ 9.30ರ ಸುಮಾರಿನಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ತುರುವೇಕೆರೆ ತಾಲ್ಲೂಕಿನ ಸೂಳೆಕೆರೆ ಗ್ರಾಮದ ನಿವಾಸಿಯಾಗಿದ್ದ ಶಂಕರಪ್ಪ ಎಂಬುವರ ಮಗ ಅಭಿಷೇಕ್ (28) ವಿದ್ಯುತ್ ತಗುಲಿ ಸಾವನ್ನಪ್ಪಿದ ಲೈನ್ ಮ್ಯಾನ್. ಮೃತ ಅಭಿಷೇಕ್ ತಾಲ್ಲೂಕಿನ ಬೆಳ್ಳೂರು ಟೌನ್ ನ ಉಮರ್ ನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ ಕೆಲಸ ಮಾಡುತ್ತಿದ್ದು, ಮಂಗಳವಾರ ರಾತ್ರಿ ಸುರಿದ ಮಳೆಗೆ ವಿದ್ಯುತ್ ಸ್ಥಗಿತವಾಗಿದ್ದ ಹಿನ್ನೆಲೆಯಲ್ಲಿ ಸರಿಪಡಿಸಲು ಹೋಗಿದ್ದಾಗ ಘಟನೆ ಸಂಭವಿಸಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಬೆಳ್ಳೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮೃತ ದೇಹವನ್ನು ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಂತರ ಮೃತ ದೇಹವನ್ನು ಕಟುಂಬಸ್ಥರಿಗೆ ವರ್ಗಾಯಿಸಲಾಗಿದೆ. ಘಟನೆಯ ಸಂಬಂಧ ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.