ADVERTISEMENT

ಜಾನಪದ ಬೇರು ಮರೆಯದಿರಿ: ನಿರ್ಮಲಾನಂದ ನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 20:09 IST
Last Updated 24 ಸೆಪ್ಟೆಂಬರ್ 2024, 20:09 IST
   

ನಾಗಮಂಗಲ (ಮಂಡ್ಯ): ‘ಜಾನಪದವು ಮನುಷ್ಯನ ಬೇರು. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಹೊಸಚಿಗುರು. ಹೊಸಚಿಗುರನ್ನು ಆರಾಧಿಸುವ ಹೊತ್ತಿನಲ್ಲಿ ಬೇರನ್ನು ಮರೆತರೆ ಚಿಗುರು ಹೂವಾಗುವುದಿಲ್ಲ, ಹಣ್ಣಾಗುವುದೂ ಇಲ್ಲ. ಹೀಗಾಗಿ ಜಾನಪದವನ್ನು ಮರೆಯುವಂತಿಲ್ಲ’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. 

ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಮಂಗಳವಾರ ಬಾಲ
ಗಂಗಾಧರನಾಥ ಸ್ವಾಮೀಜಿಯ ವಾರ್ಷಿಕ ಪಟ್ಟಾಭಿಷೇಕ ಮತ್ತು ಗುರು ಸಂಸ್ಮರ ಣೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ 45ನೇ ಕಾಲಭೈರವೇಶ್ವರ ಜಾನಪದ ಕಲಾಮೇಳದಲ್ಲಿ ‘ಚುಂಚಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

‘ಓದು, ಗಳಿಕೆ, ಅಧಿಕಾರ ಎಲ್ಲವೂ ತಮಗಾಗಿ ಮಾತ್ರ ಎಂದುಕೊಂಡವರು ನಿಜವಾಗಿಯೂ ಬದುಕಲಿಲ್ಲ. ಸತ್ತ ನಂತರವೂ ಯಾರ ನೆನಪಿನಲ್ಲೂ ಉಳಿಯಲಿಲ್ಲ. ಜನಪದರನ್ನು ಮತ್ತು ಜಾನಪದ ಸಾಹಿತ್ಯವನ್ನು ಮರೆತರೆ ಯಾವುದೇ ಸಮಾಜವು ದೀರ್ಘಕಾಲ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಇಂದಿಗೂ ಜಾನಪದ ಗೀತೆಗಳನ್ನು ಕೇಳಿದರೆ ನೊಂದ ಮನಸ್ಸಿಗೆ ಸಾಂತ್ವನ ಸಿಗುತ್ತದೆ’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ‘ಆಧುನಿಕ ಜಗತ್ತಿನ ಎಲ್ಲ ಸೌಲಭ್ಯಗಳನ್ನು ಅನುಭವಿಸುತ್ತಿರುವ ನಗರವಾಸಿಗಳಾದ ನಾವು, ಅರಣ್ಯದಲ್ಲಿ ವಾಸಿಸುವ ಬುಡಕಟ್ಟು ಜನರಂತೆ ಸಂತೋಷದ ಜೀವನ ನಡೆಸಲು ಆಗುತ್ತಿಲ್ಲ‌. ಬದುಕಿರುವಾಗ ಒಳ್ಳೆಯ ಕೆಲಸವನ್ನು ಮಾಡಿದರೆ, ಭಗವಂತನ ಪಾದ ಸೇರುವಾಗ ನೆಮ್ಮದಿ, ಸಾರ್ಥಕತೆ ದೊರೆಯುತ್ತದೆ. ನಮಗೆ ಮೊದಲು ಬೇಕಾಗಿರುವುದು ಮಾನವೀಯತೆ’ ಎಂದರು. 

ಚುಂಚಶ್ರಿ ಪ್ರಶಸ್ತಿ ಪ್ರದಾನ: ಶಿಕ್ಷಣ
ಕ್ಷೇತ್ರದ ಸೇವೆಗಾಗಿ ಎಚ್‌.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಹೋಬಳಿಯ ಕೊತ್ತಲಗಾಲ ಗ್ರಾಮದ ಕೆ.ಪಿ.ಬಸವೇಗೌಡ, ಸಮಾಜ ಸೇವೆಗಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೊಳವಾರ ಗ್ರಾಮದ ಹಿರಿಯಣ್ಣ ಹೆಗಡೆ, ಸಾಹಿತ್ಯ ಮತ್ತು ಜಾನಪದ ಕ್ಷೇತ್ರದ ಸಾಧನೆಗಾಗಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹಿರೇಗೌಡನದೊಡ್ಡಿಯ ಸಾಹಿತಿ ರಾಮೇಗೌಡ ಹಾಗೂ ಜಾನಪದ ಕ್ಷೇತ್ರದ ಸೇವೆಗಾಗಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮಲ್ಲವ್ವ ಬಸಪ್ಪ ಮೇಗೇರಿ ಅವರಿಗೆ ₹50 ಸಾವಿರ ನಗದು, ಸ್ಮರಣಿಕೆಯೊಂದಿಗೆ ಈ ಸಾಲಿನ ‘ಚುಂಚಶ್ರೀ’ ಪ್ರಶಸ್ತಿಯನ್ನು ನೀಡಿ ಮಠದ ವತಿಯಿಂದ ಗೌರವಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.