ADVERTISEMENT

ಮಂಡ್ಯ| ಜಿಲ್ಲೆಯಾದ್ಯಂತ 32 ಭತ್ತ ಖರೀದಿ ಕೇಂದ್ರ ಸ್ಥಾಪನೆ: ಡಿಸಿ

ನ.15ರಿಂದ ಹೆಸರು ನೋಂದಣಿ ಆರಂಭ, ಡಿ.1ರಿಂದ ಮಾರ್ಚ್‌ 24ರವರೆಗೆ ಖರೀದಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2023, 14:31 IST
Last Updated 6 ನವೆಂಬರ್ 2023, 14:31 IST
ಜಿಲ್ಲಾಧಿಕಾರಿ ಕುಮಾರ ಅವರ ಅಧ್ಯಕ್ಷತೆಯಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪನೆ ಸಂಬಂಧ ಸೋಮವಾರ ಜಿಲ್ಲಾ ಸಮನ್ವಯ ಸಮಿತಿ ಸಭೆ ನಡೆಯಿತು
ಜಿಲ್ಲಾಧಿಕಾರಿ ಕುಮಾರ ಅವರ ಅಧ್ಯಕ್ಷತೆಯಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪನೆ ಸಂಬಂಧ ಸೋಮವಾರ ಜಿಲ್ಲಾ ಸಮನ್ವಯ ಸಮಿತಿ ಸಭೆ ನಡೆಯಿತು   

ಮಂಡ್ಯ: ‘ಬೆಂಬಲ ಬೆಲೆ ಯೋಜನೆಯಡಿ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತ ಖರೀದಿಗೆ ಸಿದ್ಧತೆ ನಡೆಸಲಾಗುತ್ತಿದ್ದು ಜಿಲ್ಲೆಯಾದ್ಯಂತ 32 ಖರೀದಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ರೈತರು ನ.15ರಿಂದ ಹೆಸರು ನೋಂದಣಿ ಮಾಡಿಸಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಂಡ್ಯ ತಾಲ್ಲೂಕಿನಲ್ಲಿ 6 ಖರೀದಿ ಕೇಂದ್ರ, ಮದ್ದೂರು 6, ಮಳವಳ್ಳಿ 4, ಕೆ.ಆರ್.ಪೇಟೆ 6, ಪಾಂಡವಪುರ 4, ಶ್ರೀರಂಗಪಟ್ಟಣ 4 ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ 2 ಸೇರಿದಂತೆ ಒಟ್ಟು 32 ನೊಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಖರೀದಿ ಕೇಂದ್ರದಲ್ಲಿ ಭತ್ತ ಮಾರಾಟ ಮಾಡಲು ಇಚ್ಛಿಸುವವರು ನ.15ರಿಂದ ಅಗತ್ಯ ದಾಖಲೆ ಸಲ್ಲಿಸಿ ಹೆಸರು ನೋಂದಣಿ ಮಾಡಿಸಬೇಕು’ ಎಂದರು.

ADVERTISEMENT

‘ಮುಂಗಾರು ಹಂಗಾಮಿನ ಭತ್ತ ಕಟಾವು ಅವಧಿಗೆ ಸರಿಯಾಗಿ ಖರೀದಿ ಕೇಂದ್ರಗಳು ಸ್ಥಾಪನೆಯಾಗಬೇಕು. ಬೆಂಬಲ ಬೆಲೆ ಯೋಜನೆ ಸರಿಯಾಗಿ ರೈತರಿಗೆ ತಲುಪಬೇಕು. ಖರೀದಿ ಕೇಂದ್ರಗಳಿಗೆ ಬಂದ ರೈತರಿಗೆ ಅವಶ್ಯವಿರುವ ಎಲ್ಲಾ ಮೂಲ ಸೌಲಭ್ಯ ಒದಗಿಸಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ನೀರು, ನೆರಳು ಸೇರಿದಂತೆ ವಿವಿಧ ಸೌಲಭ್ಯ ನೀಡಬೇಕು. ಕೇಂದ್ರಕ್ಕೆ ಬರುವ ರೈತರೊಂದಿಗೆ ಸಿಬ್ಬಂದಿ ಸೌಜನ್ಯಯುತವಾಗಿ ವರ್ತಿಸಬೇಕು’ ಎಂದು ಸೂಚಿಸಿದರು.

‘ಖರೀದಿ ಕೇಂದ್ರಕ್ಕೆ ಭತ್ತ ಮಾರಾಟ ಮಾಡಲು ಫ್ರೂಟ್‌ ಐಡಿ ಹಾಗೂ ಆಧಾರ್ ಕಾರ್ಡ್ ಜೋಡಣೆ ಆಗಿರಬೇಕು. ಜೋಡಣೆ ಆಗದ ರೈತರು ಕೂಡಲೇ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಐಡಿ ಜೋಡಣೆ ಮಾಡಿಸಬೇಕು. ಎನ್‌ಪಿಸಿಐ ಆ್ಯಕ್ಟೀವ್‌ ಇರುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಹಾಗೂ ಆಧಾರ್ ಕಾರ್ಡ್ ಪ್ರತಿ ಹಾಜರುಪಡಿಸಿ ಹೆಸರು ನೋಂದಣಿ ಮಾಡಿಕೊಳ್ಳಬೇಕು’ ಎಂದರು.

ಡಿ.1ರಿಂದ ಭತ್ತ ಖರೀದಿ: ‘ಹೆಸರು ನೋಂದಣಿ ಮಾಡಿಕೊಂಡ ರೈತರಿಂದ ಡಿ.1 ರಿಂದ 2024 ಮಾರ್ಚ್ 31ರವರೆಗೆ ಭತ್ತ ಖರೀದಿ ಮಾಡಲಾಗುವುದು. ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ಗೆ ₹ 2,183, ಉತ್ತಮ ಗುಣಮಟ್ಟದ ಎ ಗ್ರೇಡ್‌ ಭತ್ತ ಕ್ವಿಂಟಲ್‌ಗೆ ₹ 2,203 ನಿಗದಿ ಮಾಡಲಾಗಿದೆ. ಪ್ರತಿ ಎಕರೆಗೆ ಕನಿಷ್ಠ 25 ಕ್ವಿಂಟಲ್ ಗರಿಷ್ಠ 40 ಕ್ವಿಂಟಾಲ್ ಖರೀದಿ ಮಾಡಲಾಗುವುದು’ ಎಂದರು.

‘ಭತ್ತದ ಗುಣಮಟ್ಟವನ್ನು ಪರಿಶೀಲಿಸಲು ಅವಶ್ಯವಿರುವ ಗ್ರೇಡರ್‌ಗಳನ್ನು ನೇಮಕ ಮಾಡಿ ಅವರಿಗೆ ತರಬೇತಿ ನೀಡಬೇಕು. ರೈತರು ತರುವ ಭತ್ತವನ್ನು ಪಾರದರ್ಶಕವಾಗಿ ಪರಿಶೀಲನೆ ನಡೆಸಿ ಗ್ರೇಡಿಂಗ್‌ ನೀಡಬೇಕು’ ಎಂದರು.

ಆಹಾರ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ್ ಮಾತನಾಡಿ ‘ಕಳೆದ ಸಾಲಿನಲ್ಲಿ 17,642 ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದರು. 3,068 ರೈತರು 80,617 ಕ್ವಿಂಟಲ್ ಭತ್ತ ಖರೀದಿ ಮಾಡಲಾಗಿತ್ತು. ಜಿಲ್ಲೆಯಲ್ಲಿ 7.45 ಲಕ್ಷ ಕ್ವಿಂಟಲ್ ಭತ್ತ ದಾಸ್ತಾನು ಸಾಮರ್ಥ್ಯದ 9 ಗೋದಾಮುಗಳಿವೆ’ ಎಂದು ಮಾಹಿತಿ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೆಶಕ ವಿ.ಎಸ್‌.ಅಶೋಕ್‌, ಎಪಿಎಂಸಿ ಉಪನಿರ್ದೇಶಕ ಶ್ರೀನಿವಾಸ್ ಇದ್ದರು.

Highlights - ಫ್ರೂಟ್‌ ಐಡಿ ಜೋಡಣೆ ಮಾಡಿಸಲು ಸೂಚನೆ ಗ್ರೇಡ್‌ ಪರಿಶೀಲನೆಗೆ ಗ್ರೇಡರ್‌ಗಳ ನೇಮಕಾತಿ ಖರೀದಿ ಕೇಂದ್ರದಲ್ಲಿ ರೈತರಿಗೆ ಮೂಲ ಸೌಲಭ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.