ಕೆ.ಆರ್.ಪೇಟೆ: ಪೆನ್ ಡ್ರೈವ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಪ್ರವಾಸಿಮಂದಿರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ‘ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಜೆಡಿಎಸ್ ಪಕ್ಷ ಎಂದೂ ಬೆಂಬಲಿಸುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ, ಆಶ್ಲೀಲ ಸಿ.ಡಿಗಳನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡಿ ರಾಜ್ಯದ ಮಹಿಳೆಯರ ಮಾನ ದೇಶ ವಿದೇಶಗಳಲ್ಲಿ ಹರಾಜು ಹಾಕಿದವರಿಗೂ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
‘ಎಲ್. ಆರ್.ಶಿವರಾಮೇಗೌಡರಿಗೆ ಜೆಡಿಎಸ್ ಪಕ್ಷ ಹಲವು ಬಾರಿ ರಾಜಕೀಯದಲ್ಲಿ ಪುನರ್ ಜನ್ಮನೀಡಿತು. ಆದರೆ, ಅವರು ಅದನ್ನು ಉಳಿಸಿಕೊಳ್ಳದೆ ದೇವೇಗೌಡರ ಕುಟುಂಬದ ವಿರುದ್ಧ ಷಡ್ಯಂತ್ರದಲ್ಲಿ ತೊಡಗಿದ್ದು ಜಿಲ್ಲೆಯ ಜನ ಈ ನಡವಳಿಕೆಗಳಿಂದ ಈಗಾಗಲೇ ಅವರನ್ನು ಕಸದಬುಟ್ಟಿಗೆ ಎಸೆದಿದ್ದಾರೆ. ಅವರಿಗೆ ಪಕ್ಷದ ದಿಕ್ಕಾರವಿದೆ’ ಎಂದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್ ಮಾತನಾಡಿ,‘ಪ್ರಕರಣವನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸದಿದ್ದರೆ ಜೆ.ಡಿ.ಎಸ್ ಪಕ್ಷ ತನ್ನ ಚಳವಳಿಯನ್ನು ಹೋಬಳಿ ಮತ್ತು ಗ್ರಾಮ ಪಂಚಾಯತಿ ಮಟ್ಟಕ್ಕೆ ತೆಗೆದುಕೊಂಡು ಹೋಗಲಿದೆ’ ಎಂದರು.
ಮಾನವ ಸರಪಳಿಯಿಂದ ವಾಹನ ಸಂಚಾರಕ್ಕೆ ಕೆಲಕಾಲ ಅಡ್ಡಿಯುಂಟಾಗಿತ್ತು. ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕಿರಾಂ, ಮನ್ ಮುಲ್ ನಿರ್ದೇಶಕ ಡಾಲು ರವಿ, ಎಂ. ಬಿ. ಹರೀಶ್, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಮುಖಂಡರಾದ ನಾಟನಹಳ್ಳಿ ಗಂಗಾಧರ್, ಮಲ್ಲೇನಹಳ್ಳಿ ಮೋಹನ್, ವಕೀಲ ಧನಂಜಯಕುಮಾರ್, ಅಗ್ರಹಾರ ಬಾಚಹಳ್ಳಿ ನಾಗೇಶ್, ಬಿ.ಎಂ.ಕಿರಣ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.