ADVERTISEMENT

ಭಾರತೀನಗರ | ‘ಪಠ್ಯ ಪುಸ್ತಕಗಳೇ ಮೊಬೈಲ್‌ಗಳಾಗಲಿ’

ಭಾವಿಪದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 28 ಮೇ 2024, 14:47 IST
Last Updated 28 ಮೇ 2024, 14:47 IST
ಭಾರತೀನಗರದಲ್ಲಿ ಭಾರತ ವಿಕಾಸ ಪರಿಷತ್ ವತಿಯಿಂದ ಎಸ್ಎಸ್ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಿ.ಎ. ಕೆರೆ ಹೋಬಳಿಯ 23 ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು
ಭಾರತೀನಗರದಲ್ಲಿ ಭಾರತ ವಿಕಾಸ ಪರಿಷತ್ ವತಿಯಿಂದ ಎಸ್ಎಸ್ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಿ.ಎ. ಕೆರೆ ಹೋಬಳಿಯ 23 ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು   

ಭಾರತೀನಗರ: ‘ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದಲೇ ತುಂಬಿ ಹೋಗಿರುವ ಮೊಬೈಲ್‌ಗಳನ್ನು ದೂರವಿರಿಸಿ ಪಠ್ಯ ಪುಸ್ತಕಗಳನ್ನೇ ತಮ್ಮ ಮೊಬೈಲ್‌ಗಳನ್ನಾಗಿಸಿಕೊಂಡು ಸಮಯವಿದ್ದಾಗಲೆಲ್ಲ ಅಭ್ಯಾಸ ಮಾಡಬೇಕು’ ಎಂದು ಉಪನ್ಯಾಸಕ ಬಿ.ಕುಮಾರ್‌ ಹೇಳಿದರು.

ಇಲ್ಲಿಯ ಪ್ರಶಾಂತ್‌ ಪ್ಲಾಜಾದ ಸಭಾಂಗಣದಲ್ಲಿ ಭಾರತ ವಿಕಾಸ ಪರಿಷತ್‌ನ ಬೌದ್ಧಯನ ಶಾಖೆ ವತಿಯಿಂದ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ ಪ್ರೇರಣಾ ನುಡಿಗಳನ್ನಾಡಿದರು.

‘ಮೊಬೈಲ್‌ಗಳನ್ನು ಸಂಪೂರ್ಣವಾಗಿ ಬಳಸಬೇಡಿ ಎಂದು ಹೇಳುವುದಿಲ್ಲ. ಬದಲಾಗಿ ವಿದ್ಯಾಭ್ಯಾಸಕ್ಕೆ ಅಗತ್ಯವಾದ ವಿಷಯಗಳನ್ನು ಹೆಕ್ಕಿ ತೆಗೆಯಲು ಇದೂ ಕೂಡ ಒಂದು ಉತ್ತಮ ಮಾಧ್ಯಮ. ಎಸ್‌ಎಸ್‌ಎಲ್‌ಸಿ ನಂತರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ದೃಷ್ಟಿಯಿಂದ ಹಲವಾರು ದಾರಿಗಳಿವೆ. ಅವುಗಳನ್ನು ಕ್ರಮಿಸಬೇಕಾದರೆ ಕಠಿಣ ಪರಿಶ್ರಮದ ಅಭ್ಯಾಸ ಅಗತ್ಯ’ ಎಂದು ತಿಳಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಭಾರತ ವಿಕಾಸ ಪರಿಷತ್‌ನ ಅಧ್ಯಕ್ಷ ಎಸ್‌.ಶಿವಮಾದೇಗೌಡ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಉತ್ತಮ ಸಾಧನೆಗೆ, ಸಂಯಮ, ಶಿಸ್ತು, ಗುರಿ ಅಗತ್ಯವಾಗಿದೆ. ಇವೆಲ್ಲವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವರು ಎತ್ತರ ಸ್ಥಾನಕ್ಕೆ ಏರಬಲ್ಲರು’ ಎಂದು ಹೇಳಿದರು.

ಭಾವಿಪ ಮಾಜಿ ಸಂಸ್ಥಾಪಕ ಅಧ್ಯಕ್ಷ ಎಂ.ಮಾಯಪ್ಪ ಪ್ರಾಸ್ತಾವಿಕವಾಗಿ ಮಾಡಿದರು. ಸ್ನೇಹ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಿ.ದಾಸೇಗೌಡ, ಭಾವಿಪ ಕಾರ್ಯದರ್ಶಿ ಕೆ.ಎಸ್‌.ಶಿವರಾಜು, ಖಜಾಂಚಿ ಗಾಯತ್ರಿ, ಮೆಡಿಕಲ್ಸ್‌ ಬಾಬು, ಶಿಕ್ಷಕಿ ಸುಶೀಲಮ್ಮ, ರಮೇಶ್‌, ವೈ.ಬಿ.ಶ್ರೀಕಂಠಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.