ಮಳವಳ್ಳಿ: ‘ತಾಲ್ಲೂಕಿನ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಮಾರು ₹135 ಕೋಟಿ ವೆಚ್ಚದಲ್ಲಿ ಕಿರುಗಾವಲು ಭಾಗದ ನಾಲೆಗಳ ಆಧುನೀಕರಣಕ್ಕೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು’ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಹಂಗ್ರಾಪುರ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾಲಾ ಆಧುನೀಕರಣ, ₹150 ಕೋಟಿ ವೆಚ್ಚದ ಜಲಧಾರೆ ಯೋಜನೆಯು ಸದ್ಯದಲ್ಲಿಯೇ ಆರಂಭವಾಗಲಿದೆ. ಕುಸಿದಿರುವ ಗ್ರಾಮದ ರಸ್ತೆ ಸೇತುವೆ ಕಾಮಗಾರಿಗೆ ಮುಂದಿನ ವಾರದಲ್ಲಿ ಚಾಲನೆ ನೀಡಲಾಗುವುದು’ ಎಂದು ಹೇಳಿದರು.
‘ಈಗಾಗಲೇ ವಿಶೇಷ ಕಾಲೇಜು ಮಂಜೂರಿನ ಜೊತೆಗೆ ವಿಜ್ಞಾನ ವಿಷಯಗಳನ್ನು ಪ್ರಾರಂಭಿಸಲಾಗುತ್ತಿದೆ. 8 ಕೆಪಿಎಸ್ ಶಾಲೆಗಳ ಮಂಜೂರಾತಿ, 180 ಅತಿಥಿ ಶಿಕ್ಷಕರನ್ನು ನೇಮಕ, ಸಿಎಸ್ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿ ಮಾಡಿಸಲಾಗುತ್ತಿದೆ’ ಎಂದು ಹೇಳಿದರು.
ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು.
ತೋಟಗಾರಿಕೆ ಇಲಾಖೆಯಿಂದ ರಾಗಿಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 500ಕ್ಕೂ ಅಧಿಕ ರೈತರಿಗೆ ತೆಂಗು ಅಭಿವೃದ್ಧಿ ಮಂಡಳಿಯಿಂದ ಪ್ರತಿ ಎಕರೆಗೆ ₹7ಸಾವಿರ ಸಹಾಯ ಧನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ರೈತರಿಗೆ ತೆಂಗಿನ ಸಸಿ ಹಾಗೂ ಶಾಲಾ ಮಕ್ಕಳಿಗೆ ನೋಟ್ ಬುಕ್ ಗಳನ್ನು ವಿತರಿಸಲಾಯಿತು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಚಂದ್ರಕಲಾ ಪ್ರಭು ಅಧ್ಯಕ್ಷತೆ ವಹಿಸಿದರು.
ಮುಖಂಡ ಆರ್.ಎನ್.ವಿಶ್ವಾಸ್, ಗ್ರಾ.ಪಂ.ಅಧ್ಯಕ್ಷ ಬಿ.ಕೆ.ರವಿ, ಉಪಾಧ್ಯಕ್ಷೆ ನಾಗಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ.ದೇವರಾಜು, ಗ್ರಾ.ಪಂ.ಸದಸ್ಯರಾದ ಪ್ರಭು, ಮಂಗಳಮ್ಮ, ರೂಪರಾಣಿ, ಪ್ರಕಾಶ್, ಮಹದೇವಮ್ಮ, ಮಹೇಶ್, ಮನ್ಮುಲ್ ತಾಲ್ಲೂಕು ಪ್ರಭಾರ ಮುಖ್ಯಸ್ಥ ಮಧುಶಂಕರ್, ಮುಖಂಡರಾದ ಚಂದ್ರು, ಯಶೋಧಾ, ವಸಂತಮ್ಮ ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.