ADVERTISEMENT

ದಲಿತರ ಜಮೀನು CM ಪಾಲು: ಮುಡಾ ಹಗರಣಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಿದ ಅಶೋಕ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 23:35 IST
Last Updated 7 ಆಗಸ್ಟ್ 2024, 23:35 IST
<div class="paragraphs"><p>ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿದ ದಾಖಲೆಯನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಪ್ರದರ್ಶಿಸಿದರು&nbsp;</p></div>

ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿದ ದಾಖಲೆಯನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಪ್ರದರ್ಶಿಸಿದರು 

   

ಮಂಡ್ಯ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ 14 ನಿವೇಶನ ನುಂಗಿಲ್ಲ, ಅವರ ಬೆಂಬಲಿಗರು 500ಕ್ಕೂ ಹೆಚ್ಚು ನಿವೇಶನ ನುಂಗಿದ್ದಾರೆ. 50:50 ಸ್ಕೀಮ್‌ನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ ಎಂಬುದಕ್ಕೆ ಮುಡಾ ಅಧ್ಯಕ್ಷ ಕೆ.ಮರಿಗೌಡನ ಪತ್ರವೇ ಸಾಕ್ಷಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದರು.

ಮೈಸೂರಿನ ಮುಡಾದಲ್ಲಿ 50;50 ಅನುಪಾತದಲ್ಲಿ ನಿವೇಶನಗಳ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಬುಧವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ‘ಭೂಸ್ವಾಧೀನವಾದ ಜಾಗದಲ್ಲೇ 526 ನಿವೇಶನಗಳಿದ್ದರೂ, ಬೇರೆ ಕಡೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸೈಟುಗಳನ್ನು ಸಿದ್ದರಾಮಯ್ಯ ಕುಟುಂಬಕ್ಕೆ ನೀಡಿದ್ದು ಏಕೆ? ಅವರ ಬೆಂಬಲಿಗರು ಹೇಗೆ 500 ಸೈಟು ನುಂಗಿದರು’ ಎಂದು ಪ್ರಶ್ನಿಸಿದರು. 

ADVERTISEMENT

‘ದಲಿತರಿಗೆ ನ್ಯಾಯಯುತವಾಗಿ ಸೇರಬೇಕಾದ ಜಮೀನನ್ನು ಸಿದ್ದರಾಮಯ್ಯ ಕುಟುಂಬ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದೆ. ಅವರು ತಪ್ಪಿತಸ್ಥರೆಂದು ತೋರಿಸಲು ನಮ್ಮಲ್ಲಿ ಅಧಿಕೃತ ದಾಖಲೆಗಳಿವೆ’ ಎಂದು ಪ್ರತಿಪಾದಿಸಿದರು. 

ಇಲಾಖೆ ಹಂತದಲ್ಲಿ ಲೋಪ:

‘ಹಗರಣಕ್ಕೆ ಸಂಬಂಧಿಸಿದ ಜಮೀನನ್ನು ನಿಂಗ ಬಿನ್‌ ಜವರ ಎಂಬವರು 1936ರಲ್ಲಿ ಹರಾಜಿನಲ್ಲಿ ಖರೀದಿಸಿದ್ದರು. 1968ರಲ್ಲಿ ನಿಂಗ ಅವರ ಮಕ್ಕಳಾದ ಮಲ್ಲಯ್ಯ ಮತ್ತು ದೇವರಾಜು ಅವರು ಮತ್ತೊಬ್ಬ ಸಹೋದರ ಮೈಲಾರನಿಗೆ ಭೂಮಿಯ ಹಕ್ಕನ್ನು ₹300ಕ್ಕೆ ವರ್ಗಾಯಿಸಿದ್ದರು. ಆದರೆ, ಆರ್‌ಟಿಸಿಯಲ್ಲಿ 1993ರವರೆಗೆ ನಿಂಗ ಹೆಸರಿನಲ್ಲಿಯೇ ಮುಂದುವರಿದಿದೆ. ಅದು ಇಲಾಖೆ ಹಂತದಲ್ಲಿ ಆಗಿರುವ ಲೋಪ’ ಎಂದು ದೂರಿದರು.

ಸತ್ಯ ಮರೆಮಾಚಿಸಿದ ಸಿಎಂ:

‘ತಂದೆ ನಿಂಗ ಹೆಸರಿನಲ್ಲಿಯೇ ಜಮೀನಿರುವುದು ಗೊತ್ತುಪಡಿಸಿಕೊಂಡ ಪುತ್ರ ದೇವರಾಜ, ಆರ್‌ಟಿಸಿ ಮಾಡಿಸಿಕೊಡುವ ನೆಪದಲ್ಲಿ ಸಹೋದರ ಮೈಲಾರಯ್ಯನ ಮಗ ಮಂಜುನಾಥಸ್ವಾಮಿ ಮತ್ತು ಪತ್ನಿ ಪುಟ್ಟಗೌರಮ್ಮ ಅವರಿಂದ ಖಾಲಿ ಪತ್ರಕ್ಕೆ ಸಹಿ ಮಾಡಿಸಿಕೊಂಡು 1992–93ರಲ್ಲಿ ತನ್ನ ಹೆಸರನ್ನು ಅಕ್ರಮವಾಗಿ ಸೇರಿಸಿಕೊಂಡಿದ್ದ. ಅದನ್ನು ಸಿದ್ದರಾಮಯ್ಯ ಮರೆಮಾಚಿಸಿದ್ದಾರೆ. 27 ಹಕ್ಕುದಾರರಿಗೆ ಸೇರಬೇಕಾದ ಜಮೀನನ್ನು ದೇವರಾಜ ಒಬ್ಬನಿಂದ ಸಿಎಂ ಹೇಗೆ ಸಹಿ ಮಾಡಿಸಿಕೊಂಡರು’ ಎಂದು ಪ್ರಶ್ನಿಸಿದರು. 

‘1992ರಲ್ಲಿ ಮುಡಾ ಸರ್ವೆ ನಂಬರ್‌ 464 ಸೇರಿದಂತೆ ಸುತ್ತಮುತ್ತಲ ಒಟ್ಟು 462 ಎಕರೆ ಭೂಮಿಯನ್ನು ದೇವನೂರು ಮೂರನೇ ಹಂತದ ಬಡಾವಣೆ ಉದ್ದೇಶಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಭೂಮಿಯ ಮೇಲೆ ಹಕ್ಕೇ ಇಲ್ಲದ ದೇವರಾಜ, ಜಮೀನು ಪಿತ್ರಾರ್ಜಿತವಾಗಿ ಬಂದಿರುವುದರಿಂದ ಕೃಷಿ ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಸಚಿವರಿಗೆ ಸುಳ್ಳು ಅರ್ಜಿ ನೀಡಿದ್ದ’ ಎಂದರು.

ಸಿದ್ದರಾಮಯ್ಯ ಕೈವಾಡ:

ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಪ್ರಸ್ತಾವಿತ ಭೂಮಿ ಯೋಜನೆಯ ಕೊನೆಯ ಭಾಗದಲ್ಲಿದೆ ಎಂದು ಸುಳ್ಳು ಮಾಹಿತಿ ನೀಡಿ, ಭೂಸ್ವಾಧೀನದಿಂದ ಕೈಬಿಡಬಹುದು ಎಂದು ವರದಿ ನೀಡಿದ್ದರು. 1998ರಲ್ಲಿ ಡಿನೋಟಿಫಿಕೇಶನ್‌ ಮಾಡಲಾಗಿತ್ತು. ದಲಿತ ಕುಟುಂಬಕ್ಕೆ ಸೇರಿದ ಸಾಮಾನ್ಯ ವ್ಯಕ್ತಿ ಡಿನೋಟಿಫಿಕೇಷನ್‌ ಮಾಡಿಸಲು ಸಾಧ್ಯವೇ? ಆಗ ಉಪಮುಖ್ಯಮಂತ್ರಿಯಾಗಿದ್ದವರು ಇದೇ ಸಿದ್ದರಾಮಯ್ಯ. ಅಲ್ಲಿಂದಲೇ ಅವರ ಕೈವಾಡ ಆರಂಭವಾಗಿದೆ’ ಎಂದು ಆರೋಪಿಸಿದರು. 

ಬಡಾವಣೆಯಾಗಿದ್ದ ಜಾಗ ಭೂ ಪರಿವರ್ತನೆ:

‘ದೇವರಾಜ ಮತ್ತು ಕುಟುಂಬಸ್ಥರು 3 ಎಕರೆ 16 ಗುಂಟೆ ಜಮೀನನನ್ನು 2004ರಲ್ಲಿ ಸಿದ್ದರಾಮಯ್ಯ ಅವರ ಪತ್ನಿಯ ಸಹೋದರ ಮಲ್ಲಿಕಾರ್ಜುನಸ್ವಾಮಿಗೆ ಮಾರಾಟ ಮಾಡಿದ್ದರು. ಸಿದ್ದರಾಮಯ್ಯ ಬಾಮೈದ ಅಕ್ರಮವಾಗಿ ಕ್ರಯ ಮಾಡಿಸಿಕೊಂಡಿದ್ದರು. 2001ರಲ್ಲೇ ಎಲ್‌ ಅಂಡ್‌ ಟಿ ಸಂಸ್ಥೆಯೊಂದಿಗೆ ಮುಡಾ ಒಪ್ಪಂದ ಮಾಡಿಕೊಂಡು ₹11.68 ಕೋಟಿಯಲ್ಲಿ ಹೊಸ ಬಡಾವಣೆ ಅಭಿವೃದ್ಧಿಪಡಿಸಲು ಟೆಂಡರ್‌ ಆಗಿತ್ತು. ಮಲ್ಲಿಕಾರ್ಜುನಸ್ವಾಮಿ ಖರೀದಿಸುವ ವೇಳೆಗೆ ಇದೇ ಜಮೀನಿನಲ್ಲಿನ 5 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಲೇಔಟ್‌ ಆಗಿದ್ದ ಜಾಗ ಹೇಗೆ 2005ರಲ್ಲಿ ಭೂಪರಿವರ್ತನೆ ಆಯಿತು? ಅಂದಿನ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರೂ ಕುರುಡರಂತೆ ಭೂ ಪರಿವರ್ತನೆ ಮಾಡಿಕೊಟ್ಟಿದ್ದರು’ ಎಂದು ಗಂಭೀರ ಆರೋಪ ಮಾಡಿದರು. 

ಪರಿಹಾರಕ್ಕೆ ಪತ್ರ ಬರೆದ ಪಾರ್ವತಿ:

‘2010ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಅವರ ಅಣ್ಣ ಅರಿಸಿನ ಕುಂಕುಮದ ಕೊಡುಗೆಯಾಗಿ ಜಮೀನು ನೀಡಿದ್ದರು. 2014ರಲ್ಲಿ ಪಾರ್ವತಿ ಅವರು ಮುಡಾಕ್ಕೆ ಪತ್ರ ಬರೆದು ನನಗೆ ಬಂದ ಜಮೀನಿನಲ್ಲಿ ನೀವು ಬಡಾವಣೆ ಮಾಡಿದ್ದೀರಾ. ಬದಲಿ ಜಾಗವನ್ನು ನನಗೆ ನೀಡಿ ಎಂದು ಕೇಳಿದ್ದರು. 2017ರಲ್ಲಿ ಮುಡಾದಲ್ಲಿ ಈ ವಿಷಯ ಚರ್ಚೆಗೆ ಬಂದು 50:50 ಯೋಜನೆಯಡಿ ಬದಲಿ ನಿವೇಶನ ನೀಡಲು ನಿರ್ಧಾರ ಕೈಗೊಳ್ಳಲಾಗಿತ್ತು’ ಎಂದರು. 

ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ, ನ್ಯಾಯಾಂಗ ತನಿಖೆ ಎದುರಿಸಬೇಕು. ಇಲ್ಲದಿದ್ದರೆ ಪ್ರಕರಣವನ್ನು ರಾಷ್ಟ್ರಪತಿವರೆಗೂ ಕೊಂಡೊಯ್ಯುತ್ತೇವೆ
ಆರ್‌.ಅಶೋಕ, ವಿರೋಧ ಪಕ್ಷದ ನಾಯಕ
ಕಾನೂನು ಓದಿದ ಸಿದ್ದರಾಮಯ್ಯಗೆ ತಿಳಿಯಲಿಲ್ಲವೇ?
‘ಮಾಲೀಕತ್ವದ ಗೊಂದಲ ಇದ್ದರೂ ಸಿದ್ದರಾಮಯ್ಯ ಭಾಮೈದ ಏಕೆ ಜಮೀನು ಖರೀದಿಸಿದರು? ಸ್ಥಳ ಪರಿಶೀಲನೆ ವೇಳೆ, ಬಡಾವಣೆ ಅಭಿವೃದ್ಧಿಯಾಗುತ್ತಿದೆ ಎಂಬುದು ಗೊತ್ತಿದ್ದರೂ ಜಿಲ್ಲಾಧಿಕಾರಿ ಏಕೆ ತಪ್ಪು ವರದಿ ನೀಡಿದರು? ಅವರ ಮೇಲೆ ಯಾರ ಒತ್ತಡವಿತ್ತು? 28 ವರ್ಷಗಳ ಹಿಂದೆಯೇ ಸತ್ತು ಹೋದ ನಿಂಗ ಎಂಬವನ ಹೆಸರಿನಲ್ಲಿ ಡಿನೋಟಿಫಿಕೇಷನ್‌ ಆಗಿದ್ದು ಹೇಗೆ? ಅರಿಸಿನ ಕುಂಕುಮಕ್ಕೆ ತೆಗೆದುಕೊಳ್ಳುವಾಗ ದಾಖಲೆ ನೋಡಲಿಲ್ಲವೇ? ಕಾನೂನು ಓದಿದ್ದೇನೆ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರಿಗೆ ಇದೆಲ್ಲಾ ಗೊತ್ತಾಗಲಿಲ್ಲವೇ’ ಎಂದು ಅಶೋಕ ಪ್ರಶ್ನಿಸಿದರು.
ಕೆಸರೆ ಜಮೀನಿಗೆ ಪಾರ್ವತಿ ಒಡತಿ!
ಮಂಡ್ಯ: ಮೈಸೂರು ತಾಲ್ಲೂಕಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರಲ್ಲಿ ಸ್ವಾಧೀನಪಡಿಸಿಕೊಂಡ 3.16 ಎಕರೆ ಜಮೀನಿಗೆ ಬದಲಾಗಿ ಮಾಲೀಕರಾದ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮುಡಾ ಒಟ್ಟು 38 ಸಾವಿರ ಚ.ಅಡಿ ವಿಸ್ತೀರ್ಣದ 14 ಬದಲಿ ನಿವೇಶನ ನೀಡಿದೆ. ಹೀಗಿದ್ದರೂ ಆ ಜಮೀನಿಗೆ ಇನ್ನೂ ಪಾರ್ವತಿ ಅವರೇ ಒಡತಿ! ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕಈ ಸಂಬಂಧ ದಾಖಲೆ ಬಿಡುಗಡೆ ಮಾಡಿದರು. ‘2001ರಲ್ಲಿ ಮುಡಾ ಇಲ್ಲಿ ಬಡಾವಣೆ ನಿರ್ಮಿಸಿದೆ. 2010ರಲ್ಲಿ ಜಮೀನನ್ನು ಪಾರ್ವತಿ ಅವರು ಖರೀದಿಸಿದ್ದು, 2014ರಲ್ಲಿ ಪರ್ಯಾಯ ನಿವೇಶನ ಕೋರಿದ್ದರು. 2022ರ ಜನವರಿ ಯಲ್ಲಿ ಅವರಿಗೆ ಮುಡಾ ಬದಲಿ ನಿವೇಶನಗಳನ್ನೂ ನೀಡಿದ್ದಾಗಿದೆ. ಆದರೆ, ಆರ್‌ಟಿಸಿ ದಾಖಲೆಗಳಲ್ಲಿ ಮಾತ್ರ ಇನ್ನೂ ಮೂಲ ಮಾಲೀಕರ ಹೆಸರೇ ಇದೆ. ಎಲ್ಲಿಯೂ ಜಮೀನು ಮುಡಾ ವಶದಲ್ಲಿದೆ ಎಂಬ ಉಲ್ಲೇಖವೇ ‌ಇಲ್ಲ‘ ಎಂದು ವಿವರಿಸಿದರು. ‘ಮುಡಾದಿಂದ ವಶಪಡಿಸಿಕೊಂಡ ಜಮೀನಿಗೆ ಶೇ 50:50 ಯೋಜನೆ ಅಡಿ ಬದಲಿ ನಿವೇಶನ ಕೋರಿ ಜಮೀನಿನ ಮಾಲೀಕರಾದ ಪಾರ್ವತಿ 2021ರ ಅಕ್ಟೋಬರ್ 25ರಂದು ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದರು. ಅದಕ್ಕೆ ಆಯುಕ್ತರು, ‘ಕೂಡಲೇ ಕಡತದಲ್ಲಿ ಮಂಡಿಸಿ’ ಎಂದು ಪತ್ರದ ಮೇಲೆ ಷರಾ ಬರೆದಿದ್ದರು. ‌‌ಅದೇ ಪತ್ರದಲ್ಲಿ ಪಾರ್ವತಿ ಅವರು ‘ 2001ರಲ್ಲಿಯೇ ಈ ಜಮೀನಿನಲ್ಲಿ ಮುಡಾ ನಿವೇಶನ, ರಸ್ತೆ, ಉದ್ಯಾನವನ್ನು ನಿರ್ಮಿಸಿ ಹಂಚಿಕೆ ಮಾಡಿದೆ’ ಎಂದು ಉಲ್ಲೇಖಿಸಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.