ADVERTISEMENT

ಶ್ರೀರಂಗಪಟ್ಟಣ | ಚಿಕ್ಕಅಂಕನಹಳ್ಳಿಯಲ್ಲಿ ಮಳೆರಾಯನ ಹಬ್ಬ, ಕತ್ತೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 14:27 IST
Last Updated 29 ಏಪ್ರಿಲ್ 2024, 14:27 IST
ಶ್ರೀರಂಗಪಟ್ಟಣ ತಾಲ್ಲೂಕಿನ ಚಿಕ್ಕ ಅಂಕನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಸೋಮವಾರ ಕತ್ತೆ ಮೆರವಣಿಗೆ ಮಾಡಿ ಮಳೆರಾಯನ ಹಬ್ಬ ಆಚರಿಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಚಿಕ್ಕ ಅಂಕನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಸೋಮವಾರ ಕತ್ತೆ ಮೆರವಣಿಗೆ ಮಾಡಿ ಮಳೆರಾಯನ ಹಬ್ಬ ಆಚರಿಸಿದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಚಿಕ್ಕಅಂಕನಹಳ್ಳಿ ಗ್ರಾಮದಲ್ಲಿ ಸೋಮವಾರ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಮಳೆರಾಯನ ಹಬ್ಬವನ್ನು ಆಚರಿಸಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣನ ಉತ್ಸವದ ಜತೆಗೆ ಕತ್ತೆಯ ಮೆರವಣಿಗೆ ನಡೆಯಿತು. ಬಸವನ ಮೂರ್ತಿಯನ್ನು ಬಗೆ ಬಗೆಯ ಸೊಪ್ಪು ಹೂವುಗಳಿಂದ ಅಲಂಕರಿಸಲಾಗಿತ್ತು. ಬಸವನ ಮೂರ್ತಿ ಮತ್ತು ಕತ್ತೆಗೆ ಮಾರ್ಗದ ಉದ್ದಕ್ಕೂ ಪೂಜೆ, ಪುನಸ್ಕಾರಗಳು ನಡೆದವು. ‘ಉಯ್ಯೋ ಉಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ. ಬಾರೋ ಬಾರೋ ಮಳೆರಾಯ ಬಾಳೆ ತೋಟಕೆ ನೀರಿಲ್ಲ....’ ಎಂದು ಹಾಡಿದರು.

ಬಸವನ ಉತ್ಸವ ಮೂರ್ತಿ ಹೊತ್ತವರು ಮತ್ತು ಮೆರವಣಿಗೆಯ ಜತೆ ಸಾಗಿದ ಯುವಕರಿಗೆ ಪ್ರತಿ ಮನೆಯಿಂದ ಒಂದೊಂದು ಬಿಂದಿಗೆ ನೀರು ಸುರಿಯಲಾಯಿತು. ತಮಟೆಯ ಸದ್ದಿಗೆ ಕೆಲವರು ಕುಣಿದು ಕುಪ್ಪಳಿಸಿದರು. ಮೆರವಣಿಗೆ ಮುಗಿದ ಬಳಿಕ ಊರಿನ ಹೊರಗೆ ಮರದ ಬುಡದಲ್ಲಿ ದೇವರನ್ನು ವಿಸರ್ಜಿಸಿದರು.

ADVERTISEMENT

ಊರಿನ ಮನೆಗಳಲ್ಲಿ ಸಂಗ್ರಹಿಸಿದ್ದ ಅಕ್ಕಿ, ಕಾಯಿ, ಬೇಳೆ, ಸಾಂಬಾರು ಪುಡಿ, ತರಕಾರಿಯಿಂದ ಅಡುಗೆ ಸಿದ್ದಪಡಿಸಿ ಸಾಮೂಹಿಕವಾಗಿ ಊಟ ಮಾಡಿದರು.

ಮುಖಂಡ ಸತೀಶ್‌, ಯಜಮಾನ್‌ ಧರ್ಮಣ್ಣ, ವಿಜಯಕುಮಾರ್‌, ಗಿರೀಶ್‌ಕುಮಾರ್‌, ಸಿ.ಕೆ. ಶಂಕರ್‌, ನಿಂಗೇಗೌಡ, ಸಿ.ಆರ್‌. ಶಂಕರ್‌, ಮಂಜು, ಕುಮಾರ   ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.