ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್ಎಸ್ ಅಣೆಕಟ್ಟೆಯಿಂದ ನದಿಗೆ ನೀರು ಹರಿಯುವ ಇಳಿಜಾರಿನಲ್ಲಿ, ನಗುವನ ತೋಟದ ತಡೆಗೋಡೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.
ಜಲಾಶಯದ 103 ಅಡಿ ಎತ್ತರದ ಗೇಟ್ಗಳ ಮೂಲಕ ಮೂರು ದಿನಗಳ ಹಿಂದೆ ನದಿಗೆ ನೀರನ್ನು ಹರಿಸಿದಾಗ ಸುಮಾರು 10 ಅಡಿ ಎತ್ತರ ಇರುವ ರಕ್ಷಣಾ ಗೋಡೆ 10 ಮೀಟರ್ ಉದ್ದದಷ್ಟು ಕುಸಿದಿದೆ. ನದಿಗೆ ನೀರು ಹರಿಸಲು ಇರುವ ಎರಡು ಇಳಿಜಾರುಗಳ ನಡುವಿನ ತೋಟಗಾರಿಕೆ ಇಲಾಖೆಗೆ ಸೇರಿದ ನಡುಗಡ್ಡೆಯ ತಡೆಗೋಡೆಯ ಕಲ್ಲುಗಳು ಜಾರಿ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.
‘ಕೆಆರ್ಎಸ್ ಅಣೆಕಟ್ಟೆಯ ಕೆಳಗೆ ನಡುಗಡ್ಡೆಯಲ್ಲಿರುವ ನಗುವನ ತೋಟವು 37 ಎಕರೆ ವಿಸ್ತೀರ್ಣ ಇದ್ದು, ಇದರ ಒಂದು ಪಾರ್ಶ್ವದ ರಕ್ಷಣಾ ಗೋಡೆ ಮೂರು ದಿನಗಳ ಹಿಂದೆಯೇ ಕುಸಿದಿದೆ. ಈ ತಡೆಗೋಡೆಯನ್ನು ಪುನರ್ ನಿರ್ಮಿಸುವಂತೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಪತ್ರ ಬರೆಯಲಾಗಿದೆ’ ಎಂದು ಕೆ.ಆರ್.ಎಸ್ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸೌಮ್ಯಾ ತಿಳಿಸಿದ್ದಾರೆ.
‘ಜಲಾಶಯದಿಂದ 103 ಅಡಿ ಎತ್ತರದ ಗೇಟ್ಗಳಿಂದ 52 ಸಾವಿರ ಕ್ಯುಸೆಕ್ ನೀರನ್ನು ನದಿಗೆ ನೀರು ಹರಿಸಿದಾಗ ನಡುಗಡ್ಡೆಯ ತಡೆಗೋಡೆ ಕೊಚ್ಚಿಕೊಂಡು ಹೋಗಿದೆ. ಅದರಿಂದ ಅಣಕಟ್ಟೆಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ. ಪ್ರವಾಹ ಪರಿಸ್ಥಿತಿ ನಿಂತು ಹೋದ ಬಳಿಕ ಕುಸಿದಿರುವ ನಗುವನ ತೋಟದ ಗೋಡೆಯನ್ನು ಪುನರ್ ನಿರ್ಮಾಣ ಮಾಡಲಾಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.