ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಂಗಾಲ್ಕೊಪ್ಪಲು ಗ್ರಾಮದ ಆಲೆಮನೆಗೆ ಕೇರಳದಿಂದ ತ್ಯಾಜ್ಯ ತುಂಬಿಕೊಂಡು ಬಂದಿದ್ದ ಲಾರಿಯನ್ನು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.
ಕೇರಳ ನೋಂದಣಿ ಸಂಖ್ಯೆ (ಕೆ.ಎಲ್– 14, ಕೆ– 0094) ಇರುವ ಲಾರಿಯನ್ನು ಪಟ್ಟಣ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳಾದ ಕೆ. ಚಂದನ್, ರವಿ, ಚಂದ್ರು, ಮಹೇಶ್ ಇತರರ ತಂಡ ಲಾರಿಯನ್ನು ಕೆಂಗಾಲ್ಕೊಪ್ಪಲು ಬಳಿ ತಡೆದು ಶೋಧಿಸಿದಾಗ ಅದರಲ್ಲಿ ತ್ಯಾಜ್ಯ ಇರುವುದು ತಿಳಿದು ಬಂದಿದೆ. ಆಸ್ಪತ್ರೆ ಮತ್ತು ಗುಜರಿಗಳ ತ್ಯಾಜ್ಯವನ್ನು ಇಲ್ಲಿಗೆ ತಂದು ವಿಂಗಡಿಸಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕೇರಳದಿಂದ ತರುವ ಟಯರ್ ಇತರ ರಬ್ಬರ್ ವಸ್ತುಗಳನ್ನು ತಾಲ್ಲೂಕಿನ ವಿವಿಧೆಡೆ ಆಲೆಮನೆಗಳಲ್ಲಿ ಉರುವಲಾಗಿ ಬಳಸುತ್ತಿದ್ದು ಪರಿಸರಕ್ಕೆ ಹಾನಿಯಾಗುತ್ತಿದೆ. ಅದನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಕೆ. ಚಂದನ್ ಒತ್ತಾಯಿಸಿದರು.
ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಕೆಂಗಾಲ್ಕೊಪ್ಪಲು ಬಳಿ ಕೇರಳದಿಂದ ತ್ಯಾಜ್ಯ ತುಂಬಿಕೊಂಡಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪರಿಸರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವರು ನೀಡುವ ದೂರು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.