ವಿರಾಜಪೇಟೆ: ಪಟ್ಟಣದ ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ 12ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಸೂಪರ್ 5 ಫುಟ್ಬಾಲ್ ಟೂರ್ನಿಯಲ್ಲಿ ವಿರಾಜಪೇಟೆಯ ಸಂತ ಫಿಲೋಮಿನಾ ತಂಡ ಪ್ರಶಸ್ತಿ ಪಡೆದುಕೊಂಡಿತು.
ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ನಡೆದ ಟೂರ್ನಿಯ ಅಂತಿಮ ಪಂದ್ಯದಲ್ಲಿ ಸಂತ ಫಿಲೋಮಿನಾ ತಂಡ 2-0 ಗೋಲುಗಳಿಂದ ಒಂಟಿಯಂಗಡಿಯ ಸಿ.ವಿ ಯುನೈಟೆಡ್ ತಂಡವನ್ನು ಮಣಿಸಿ ಪ್ರಶಸ್ತಿ ಪಡೆದುಕೊಂಡಿತು.
ಇದಕ್ಕೂ ಮೊದಲು ನಡೆದ ಸೆಮಿಫೈನಲ್ಸ್ನಲ್ಲಿ ಸೆಂಟ್ ಫಿಲೋಮಿನಾ ತಂಡ ಏಕೈಕ ಗೋಲಿನಿಂದ ಕಲ್ಲುಬಾಣೆ ತಂಡವನ್ನು ಮಣಿಸಿತ್ತು. ಎರಡನೇ ಸೆಮಿಫೈನಲ್ಸ್ನಲ್ಲಿ ಒಂಟಿಯಂಗಡಿಯ ಸಿ.ವಿ. ಯುನೈಟೆಡ್ ತಂಡ ವಿರಾಜಪೇಟೆಯ ನವಜ್ಯೋತಿ ತಂಡವನ್ನು ಏಕೈಕ ಗೋಲಿನಿಂದ ಮಣಿಸಿ ಫೈನಲ್ಗೆ ಅರ್ಹತೆ ಪಡೆದುಕೊಂಡಿತು.
ಟೂರ್ನಿ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ನವಜ್ಯೋತಿ ತಂಡದ ರವಿ, ಉತ್ತಮ ಗೋಲು ಪ್ರಶಸ್ತಿಯನ್ನು ಸಿ.ವಿ ಯುನೈಟೆಡ್ ತಂಡದ ರತೀಶ್, ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರನಾಗಿ ಸಜೀರ್, ಉತ್ತಮ ಡಿಫೆಂಡರ್ ಪ್ರಶಸ್ತಿಯನ್ನು ನವಜ್ಯೋತಿ ತಂಡದ ಸೀನಾ ನವ ಜ್ಯೋತಿ ಅವರು ಪಡೆದುಕೊಂಡರು.
ಪ್ರಶಸ್ತಿ ಪಡೆದ ಸಂತ ಫಿಲೋಮಿನಾ ತಂಡವು ಆಕರ್ಷಕ ಟ್ರೋಫಿ ಹಾಗೂ ₹55,555 ನಗದು ಮತ್ತು ದ್ವಿತೀಯ ಸ್ಥಾನ ಪಡೆದ ತಂಡ ಆಕರ್ಷಕ ಟ್ರೋಫಿ ಹಾಗೂ ₹33,333 ನಗದು ಬಹುಮಾನ ಪಡೆದುಕೊಂಡಿತು.
ದೈಹಿಕ ಶಿಕ್ಷಕರಾದ ಎಚ್.ಆರ್. ಸಂತೋಷ್ ಕುಮಾರ್, ಜೀತನ್ ಜೆ.ಕೆ ಹಾಗೂ ಆಶ್ವನ್ ಎ.ಎಂ. ಟೂರ್ನಿಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸಮಾರೋಪ ಸಮಾರಂಭ: ಸಮಾರೋಪದಲ್ಲಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ, ‘ಪ್ರತಿಯೊಬ್ಬರು ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಗ್ರಾಮೀಣ ಮತ್ತು ಹೋಬಳಿ ಮಟ್ಟದಲ್ಲಿ ಕ್ರೀಡೆಗಾಗಿ ಮೈದಾನಗಳನ್ನು ಅಭಿವೃದ್ಧಿಗೊಳಿಸಲು ಕ್ರಿಯಾ ಯೋಜನೆ ತಯಾರಿಸಲಾಗುತ್ತದೆ. ಇದರಿಂದ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ’ ಎಂದು ಭರವಸೆ ನೀಡಿದರು.
ಕೆ.ನಿಡುಗಣೆ ಗ್ರಾಮ ಪಂಚಾಯಿತಿಯ ಸದಸ್ಯ ಜಾನ್ಸನ್ ಪಿಂಟೋ, ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ಅಧ್ಯಕ್ಷ ಫ್ರಾನ್ಸಿಸ್ ಲೋಬೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂತ ಅನ್ನಮ್ಮ ದೇವಾಲಯದ ಸಹಾಯಕ ಧರ್ಮಗುರು ಚಾರ್ಲ್ಸ್, ಉದ್ಯಮಿಗಳಾದ ಮಾರ್ಟಿನ್ ಬರ್ನಾಡ್, ಜಾನ್ಸನ್ ಚಾಂಡಿ, ನಿವೃತ್ತ ಶಿಕ್ಷಕ ಆಲ್ಬರ್ಟ್ ಡಿಸೋಜಾ, ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ಪದಾಧಿಕಾರಿಗಳು ಮತ್ತು ಕ್ರೀಡಾಸಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.