ಸಂತೇಬಾಚಹಳ್ಳಿ: ಹೋಬಳಿಯ ಬಿಲ್ಲೇನಹಳ್ಳಿ ಗ್ರಾಮದ ಸುಪ್ರಸಿದ್ದ ದೇವಾಲಯವಾದ ಗವಿರಂಗನಾಥನಿಗೆ ರಕ್ಷಣೆ ಇಲ್ಲದಂತಾಗಿದೆ.
ಈ ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ದೇವಾಲಯಕ್ಕೆ ಪ್ರತಿ ವರ್ಷವೂ ಗೊಲ್ಕ, ಅಂಗಡಿ ಮುಂಗಟ್ಟು, ಕಿವಿ ಚುಚ್ಚುವುದು, ಮುಡಿ, ವಿವಿಧ ಸುಂಕ ಹರಾಜುನಿಂದ ವರ್ಷಕ್ಕೆ ₹27 ಲಕ್ಷಕ್ಕೂ ಅಧಿಕ ಆದಾಯವಿದೆ. ಪ್ರತಿವರ್ಷ ಹುಂಡಿ ಹಣ ಹರಾಜು ನಡೆಯುತ್ತಿತ್ತು. ಆದರೆ ಸದ್ಯ ಹರಾಜುದಾರರು ಆಸಕ್ತಿ ತೋರದ ಕಾರಣ ಮುಜರಾಯಿ ಇಲಾಖೆ ಹುಂಡಿ ನಿಭಾಯಿಸುತ್ತಿದೆ. 2023ರಲ್ಲಿ ₹21 ಲಕ್ಷ ಹಣ ಹರಿದು ಬಂದಿದೆ. ಇಷ್ಟೆಲ್ಲ ಆದಾಯ ಇದ್ದಾಗ್ಯೂ ಮುಜುರಾಯಿ ಇಲಾಖೆ ಅಧಿಕಾರಿಗಳು ದೇವಾಲಯದ ಅಭಿವೃದ್ಧಿಗೆ ಆಸಕ್ತಿ ತೋರುತ್ತಿಲ್ಲ ಎನ್ನುವುದು ಸ್ಥಳೀಯರ ದೂರು.
ಗವಿರಂಗನಾಥ ಸ್ವಾಮಿ ದೇವಾಲಯದ ಬಳಿ ಇರುವ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಬಿದ್ದು ವರ್ಷವೇ ಕಳೆದಿದೆ. ಇಂದಿಗೂ ಶೌಚಾಲಯ ಸಾರ್ವಜನಿಕರ ಬಳಕೆಗೆ ಲಭ್ಯವಿಲ್ಲ.
ದೇವಾಲಯದಲ್ಲಿ ಸಿಸಿಟಿವಿ ಕ್ಯಾಮೆರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ದೇವಾಲಯದ ಮುಂಭಾಗದಲ್ಲಿ ಇರುವ ಉದ್ಯಾನ ನಿರ್ವಹಣೆ ಇಲ್ಲದೇ ಸೊರಗಿದೆ. ದೇವಾಲಯದ ಹಾಗೂ ಸಮುದಾಯ ಭವನದ ಸುತ್ತಲಿನ ವಾತಾವರಣ ಗಬ್ಬೆದ್ದು ನಾರುತ್ತಿದೆ. ಕಸ ವಿಲೇವಾರಿಗೆ ಆದ್ಯತೆ ನೀಡಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಹ ಗಮನ ನೀಡುತ್ತಿಲ್ಲ ಎಂಬುದು ಜನರ ದೂರು. ಆದಾಯ ಮಾತ್ರ ಮುಜರಾಯಿ ಇಲಾಖೆ ಪಾಲಾಗುತ್ತಿದ್ದು, ನಿರ್ವಹಣೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಗವಿರಂಗನಾಥ ಬ್ರಹ್ಮ ರಥೋತ್ಸವವು ಜ. 16 ರಂದು ನಡೆಯಲಿದ್ದು ಸ್ವಚ್ಛತೆ ಕುಡಿಯುವ ನೀರು ಸೇರಿದಂತೆ ಸಕಲ ಸಿದ್ಧತೆ ನಡೆದಿದೆ. ಸ್ವಚ್ಛತೆ ಸಂಬಂಧ ಸ್ಥಳೀಯ ಗ್ರಾ.ಪಂ.ಗೆ ನಿರ್ದೇಶನ ನೀಡಲಾಗುವುದು- ನಿಸರ್ಗ ಪ್ರಿಯಾ ತಹಶೀಲ್ದಾರ್ ಕೆ.ಆರ್. ಪೇಟೆ
ಜಾತ್ರೆ ವೇಳೆಗೆ ದೇವಾಲಯದ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕೆಲಸ ಮಾಡುತ್ತೇವೆ. ಭಕ್ತರಿಗೆ ಯಾವುದೇ ರೀತಿಯಲ್ಲೂ ಮೂಲ ಸೌಕರ್ಯಗಳ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ- ಎಚ್.ಟಿ. ಮಂಜು ಶಾಸಕ ಕೆ.ಆರ್. ಪೇಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.