ಪಾಂಡವಪುರ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣ ತೊಣ್ಣೂರು ಕೆರೆಯಲ್ಲಿ ಮಂಗಳವಾರ ಈಜಲು ಹೋಗಿದ್ದ ತಾಲ್ಲೂಕಿನ ಕೋಡಾಲ ಗ್ರಾಮದ ಸಂತೋಷ್ ಕುಮಾರ್ ಅವರ ಪುತ್ರ ಪ್ರಜ್ವಲ್ (14) ನೀಡಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಈತ ಪಾಂಡವಪುರ ಪಟ್ಟಣದ ಬಡ್ಸ್ ಫೌಂಡೇಷನ್ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ.
ಪ್ರತಿ ವರ್ಷವೂ ಯುಗಾದಿ ಹಬ್ಬದ ದಿನ ಕೋಡಾಲ ಗ್ರಾಮದಲ್ಲಿ ಆಂಜನೇಯಸ್ವಾಮಿ ದೇವರಿಗೆ ಪೂಜೆ ಪುನಸ್ಕಾರ ಮಾಡಿ ಹೊತ್ತು ಮೆರೆಸುವುದು ಪದ್ಧತಿ. ಆಂಜನೇಯಸ್ವಾಮಿ ದೇವರ ಮೂರ್ತಿಯನ್ನು ತೊಳೆದು ಶುಚಿಗೊಳಿಸಲು ಕೋಡಾಲ ಗ್ರಾಮಸ್ಥರು ಪುರಾಣ ಪ್ರಸಿದ್ದ ತೊಣ್ಣೂರು ಕೆರೆಗೆ ಬಂದಿದ್ದಾರೆ.
ಆ ವೇಳೆ ಬಾಲಕ ಪ್ರಜ್ವಲ್ ಕೆರೆಗೆ ಇಳಿದು ಈಜಾಡಲು ಹೋಗಿದ್ದಾನೆ. ಈಜಾಡಾತ್ತಿದ್ದಾಗ ತಲೆಗೆ ಕಲ್ಲೊಂದು ತಗುಲಿ ಪೆಟ್ಟಾಗಿ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಹೋಗಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಬಂದ ತಹಶೀಲ್ದಾರ್ ಜಿ.ಎನ್.ಶ್ರೇಯಸ್, ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಪರಿಶೀಲನೆ ನಡೆಸಿದರು.
ಪಾಂಡವಪುರ ಅಗ್ನಿಶಾಮಕ ದಳದ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ಮಂಗಳೂರಿನ ಈಶ್ವರ ಮಲ್ಪೆಯ ಮುಳುಗು ತಜ್ಞರ ತಂಡವು ಹುಡುಕಾಟ ನಡೆಸಿ, ಬುಧವಾರ ಬೆಳಿಗ್ಗೆ ಬಾಲಕನ ದೇಹ ಪತ್ತೆ ಹಚ್ಚಿ ನೀರಿನಿಂದ ಹೊರತೆಗೆಯಲಾಯಿತು.
ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.