ADVERTISEMENT

ನುಡಿದಂತೆ ನಡೆದ ಸರ್ಕಾರ ನಮ್ಮದು: ಬಿಜೆಪಿಯವರಿಗೆ ಹೊಟ್ಟೆಕಿಚ್ಚು; ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 13:03 IST
Last Updated 30 ಆಗಸ್ಟ್ 2024, 13:03 IST
<div class="paragraphs"><p>ಮಧು ಬಂಗಾರಪ್ಪ</p></div>

ಮಧು ಬಂಗಾರಪ್ಪ

   

ಮಂಡ್ಯ: ‘ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆಯುತ್ತಿರುವುದರಿಂದ ಬಿಜೆಪಿಯವರಿಗೆ ಹೊಟ್ಟೆಕಿಚ್ಚು. ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ ಮತ್ತು ಕಮಿಷನ್‌ ಬಗ್ಗೆ ಚಿಂತೆ ಮಾಡುವುದೇ ಇವರ ಕೆಲಸ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹರಿಹಾಯ್ದರು.

ನಗರದಲ್ಲಿ ಶುಕ್ರವಾರ ‘ಜಿಲ್ಲಾ ಮಟ್ಟದ ವಿಜ್ಞಾನ ತರಂಗ ಸ್ಪರ್ಧೆ’ ಉದ್ಘಾಟಿಸಿಲು ಬಂದ ಸಂದರ್ಭ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ ಮುಂತಾದವರು ಹಿಂದುಳಿದ ವರ್ಗಕ್ಕೆ ಹಲವಾರು ಯೋಜನೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ’ ಎಂದರು.

ADVERTISEMENT

ರಾಜಭವನವನ್ನು ಬಿಜೆಪಿ ದುರುಪಯೋಗ ಪಡಿಸಿಕೊಂಡಿರುವುದು ಎದ್ದು ಕಾಣುತ್ತದೆ. 12 ವರ್ಷಗಳ ಹಿಂದೆ ತುಕ್ಕು ಹಿಡಿದಿರುವ ಮುಡಾ ಪ್ರಕರಣಕ್ಕೆ ಜೀವ ಕೊಡುವುದರಲ್ಲಿ ಅರ್ಥವಿಲ್ಲ. ಸಿದ್ದರಾಮಯ್ಯ ಜೊತೆ ಶಾಸಕರು ಮತ್ತು ರಾಜ್ಯದ ಜನತೆ ಇದ್ದಾರೆ ಎಂದರು.

ಕುಮಾರಸ್ವಾಮಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಕುಮಾರಸ್ವಾಮಿಗೆ ಉತ್ತರ ಕೊಡೋಕೆ ನಾನು ಇಲ್ಲಿಗೆ ಬಂದಿಲ್ಲ’ ಎಂದು ಸಚಿವರು ಗರಂ ಆದರು.

ವಾರಕ್ಕೆ 6 ಮೊಟ್ಟೆ: ‘ಹಿಂದಿನ ಸರ್ಕಾರ ಶಾಲಾ ಕೊಠಡಿಗಳ ದುರಸ್ತಿಗೆ ನಿರ್ಲಕ್ಷ್ಯ ತೋರಿದೆ. ಈಗ ನಮ್ಮ ಸರ್ಕಾರ ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಂಡಿದೆ. ಶಿಕ್ಷಕರ ಕೊರತೆ ಇತ್ತು. ನಾವು 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಈಗಾಗಲೇ ಮಕ್ಕಳಿಗೆ ಬೆಳಿಗ್ಗೆ ಹಾಲು, ರಾಗಿ ಮಾಲ್ಟ್‌ ಕೊಡುತ್ತಿದ್ದೇವೆ. ಮುಂದಿನ ತಿಂಗಳಿಂದ ಸರ್ಕಾರ ಮತ್ತು ಅನುದಾನಿತ ಶಾಲೆಗಳಲ್ಲಿ ವಾರಕ್ಕೆ ತಲಾ ವಿದ್ಯಾರ್ಥಿಗೆ 6 ಮೊಟ್ಟೆ ವಿತರಣೆ ಮಾಡಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.