ADVERTISEMENT

ರಾಸಾಯನಿಕ ಬಳಕೆಯಿಂದ ಕೃಷಿ ಭೂಮಿ ಹಾಳು: ಶಾಸಕ ಪಿ.ರವಿಕುಮಾರ್

ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನ ಕುರಿತು ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 13:52 IST
Last Updated 18 ಡಿಸೆಂಬರ್ 2023, 13:52 IST
ಕಾರ್ಯಾಗಾರವನ್ನು ಶಾಸಕ ಪಿ. ರವಿಕುಮಾರ್ ಉದ್ಘಾಟಿಸಿದರು. ಮಹೇಶ್‌ಚಂದ್ರ ಗುರು, ಮಂಜುನಾಥ್‌, ಎಂವಿಎನ್‌ ರಾವ್‌, ಶಬಿನ್‌ ತಾಜ್‌ ಜೊತೆಗಿದ್ದರು
ಕಾರ್ಯಾಗಾರವನ್ನು ಶಾಸಕ ಪಿ. ರವಿಕುಮಾರ್ ಉದ್ಘಾಟಿಸಿದರು. ಮಹೇಶ್‌ಚಂದ್ರ ಗುರು, ಮಂಜುನಾಥ್‌, ಎಂವಿಎನ್‌ ರಾವ್‌, ಶಬಿನ್‌ ತಾಜ್‌ ಜೊತೆಗಿದ್ದರು   

ಮಂಡ್ಯ: ‘ರಾಸಾಯನಿಕಗಳ ಅತಿಯಾದ ಬಳಕೆಯಿಂದ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ’ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ನಗರದ ಹರಿಪ್ರಿಯ ಹೋಟೆಲ್‌ನಲ್ಲಿ ಸೋಮವಾರ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ವಿಶ್ವ ಯುವಕ ಕೇಂದ್ರವು ಆಯೋಜಿಸಿದ್ದ ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಸುಮಾರು 8 ಲಕ್ಷ ಹೆಕ್ಟೇರ್ ಭೂಮಿ ಫಲವತ್ತತೆ ಕಳೆದುಕೊಂಡಿದೆ‌. ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆಯಿಂದ ಕೃಷಿ ಮೇಲೆ ದೀರ್ಘಕಾಲದ ಪ್ರತಿಕೂಲ ಪರಿಣಾಮಗಳಾಗುತ್ತಿವೆ. ಇದರಿಂದ ನಾವು ತಿನ್ನುವ ಆಹಾರದಲ್ಲಿ ವಿಷವನ್ನು ಸೇವಿಸುತ್ತಿದ್ದೇವೆ’ ಎಂದು ವಿವರಿಸಿದರು.

ADVERTISEMENT

‘ನಾಡಿನಿಂದ ಕಾಡು ನಾಶವಾಗುತ್ತಿದೆ. ಇದರಿಂದ ತಾಪಮಾನ ಹೆಚ್ಚುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಗಿಡ ನೆಡಬೇಕ. ಇದರಿಂದ, ತಾಪಮಾನ ಕಡಿಮೆಯಾಗುತ್ತದೆ. ಪರಿಸರದ ಅಭಿವೃದ್ಧಿ ಆಗುತ್ತದೆ’ ಎಂದರು.

ವಿಕಸನ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರ ಮಹೇಶ್ ಚಂದ್ರಗುರು ಮಾತನಾಡಿ, ‘ಹವಾಮಾನ ವೈಪರೀತ್ಯ ಮತ್ತು ಜಾಗತಿಕ ಸಮಸ್ಯೆಯಿಂದ ಜೀವ ವೈವಿಧ್ಯತೆ ಸಂಕಷ್ಟಕ್ಕೆ ಒಳಗಾಗಿದೆ. ಈ ಎಲ್ಲವನ್ನು ಕುರಿತು ಕಾರ್ಯಾಗಾರದಲ್ಲಿ ಇಂದಿನ ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡಲಾಗುವುದು. ಮುಂದಿನ ಐದು ವರ್ಷದಲ್ಲಿ ಹೇಗೆ ನಾವು ನಮ್ಮ ರಾಜ್ಯವನ್ನು ಜಾಗತಿಕ ಸಮಸ್ಯೆಯಿಂದ ಕಾಪಾಡುವುದು ಎಂದು ವಿವರಿಸಲಾಗುವುದು’ ಎಂದರು.

ಕಾರ್ಯಾಕ್ರಮಾಧಿಕಾರಿ ಮಂಜುನಾಥ್, ಕೋಲಾರ ಜಿಲ್ಲೆಯ ಗ್ರಾಮ ವಿಕಾಸ ಸಂಸ್ಥೆಯ ನಿರ್ದೇಶಕ ಎಂ.ವಿ.ಎನ್.ರಾವ್, ವಿಕಸನ ಸಂಸ್ಥೆಯ ಆಡಳಿತ ಉಪಾಧ್ಯಕ್ಷ ಶಬಿನ್ ತಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.