ADVERTISEMENT

ಕೃಷಿ, ರೇಷ್ಮೆ, ತೋಟಗಾರಿಕೆ ಕೋರ್ಸ್‌: ಸಲಹೆ

ನಾಗನಹಳ್ಳಿ ಸಾವಯವ ಕೃಷಿ ಕೇಂದ್ರದಲ್ಲಿ ವಿಶ್ವ ಆಹಾರ ದಿನಾಚರಣೆ, ಕ್ಷೇತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 17:04 IST
Last Updated 18 ಅಕ್ಟೋಬರ್ 2024, 17:04 IST
ಮೈಸೂರು ತಾಲ್ಲೂಕು ನಾಗನಹಳ್ಳಿ ಸಾವಯವ ಕೃಷಿ ಕೇಂದ್ರದಲ್ಲಿ ವಿವಿಧ ಬೆಳೆಗಳ ಕ್ಷೇತ್ರೋತ್ಸವ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ವಸ್ತುಪ್ರದರ್ಶನವನ್ನು ಗಣ್ಯರು ವೀಕ್ಷಿಸಿದರು
ಮೈಸೂರು ತಾಲ್ಲೂಕು ನಾಗನಹಳ್ಳಿ ಸಾವಯವ ಕೃಷಿ ಕೇಂದ್ರದಲ್ಲಿ ವಿವಿಧ ಬೆಳೆಗಳ ಕ್ಷೇತ್ರೋತ್ಸವ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ವಸ್ತುಪ್ರದರ್ಶನವನ್ನು ಗಣ್ಯರು ವೀಕ್ಷಿಸಿದರು   

ಮೈಸೂರು: ‘ರೈತರ ಮಕ್ಕಳು ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಹಾಗೂ ಮೀನುಗಾರಿಕೆ ಪದವಿ ಓದಬೇಕು. ಈ ಎಲ್ಲ ಕೋರ್ಸ್‌ಗಳಿಗೂ ಸರ್ಕಾರಿ ಕಾಲೇಜುಗಳು ಇರುವುದರಿಂದ ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ಮುಗಿಯುತ್ತದೆ. ನಂತರ ಉದ್ಯೋಗ ಅವಕಾಶಗಳೂ ದೊರೆಯುತ್ತವೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಎಚ್.ಎಸ್. ಶಿವರಾಮು ಸಲಹೆ ನೀಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕದಿಂದ ತಾಲ್ಲೂಕಿನ ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರದ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಆಹಾರ ದಿನಾಚರಣೆ ಹಾಗೂ ಸಾವಯವ ಕೃಷಿ ಬೆಳೆಗಳ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಂಗಳೂರು ಕೃಷಿ ವಿವಿಯು ತನ್ನ ವಲಯ ಹಾಗೂ ಪ್ರಾದೇಶಿಕ ಕೇಂದ್ರಗಳ ಮೂಲಕ ದಕ್ಷಿಣ ಕರ್ನಾಟಕದ 10 ಜಿಲ್ಲೆಗಳ ರೈತರಿಗೆ ತಾಂತ್ರಿಕ ಮಾಹಿತಿ ಒದಗಿಸುತ್ತಿದೆ. ನಾಗನಹಳ್ಳಿ ಕೇಂದ್ರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶದ 145 ವಿವಿಗಳಲ್ಲಿ ಬೆಂಗಳೂರು ಕೃಷಿ ವಿವಿಯು 11ನೇ ಸ್ಥಾನದಲ್ಲಿದೆ. ಇದನ್ನು 10ರೊಳಗೆ ತರಲು ಶ್ರಮಿಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಪ್ರಯೋಜನ ಪಡೆಯಿರಿ: ‘ನ.14ರಿಂದ 17ರವರೆಗೆ ಬೆಂಗಳೂರು ಕೃಷಿ ವಿವಿಯಲ್ಲಿ, ನ.26ರಿಂದ 27ರವರೆಗೆ ಮಂಡ್ಯದ ವಿ.ಸಿ. ಫಾರಂನಲ್ಲಿ ಕೃಷಿ  ಮೇಳ ನಡೆಯಲಿದೆ. ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳ ರೈತರು ಹೆಚ್ಚಾಗಿ ಭಾಗವಹಿಸಿ, ಪ್ರಯೋಜನ ಪಡೆಯಬೇಕು’ ಎಂದು ಕೋರಿದರು.

ನಾಗನಹಳ್ಳಿ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಸಿ. ರಾಮಚಂದ್ರ ಮಾತನಾಡಿ, ‘ಆರೋಗ್ಯಕರ ಮಣ್ಣು, ಆಹಾರ ಹಾಗೂ ಆರೋಗ್ಯಕರ ಜನ ಬಹಳ ಮುಖ್ಯವಾಗುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕೇಂದ್ರದಲ್ಲಿ 2005ರಿಂದ ಸಾವಯವ ಕೃಷಿಯ ಮೂಲಕವೇ ಎಲ್ಲಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಹೈನುಗಾರಿಕೆ, ಮೀನುಗಾರಿಕೆ, ಕೋಳಿ, ಕುರಿ, ಮೇಕೆ ಸಾಕಾಣಿಕೆ ಮಾಡಲಾಗುತ್ತದೆ. ಇದನ್ನು ಕ್ಷೇತ್ರೋತ್ಸವದ ಮೂಲಕ ರೈತರಿಗೆ ತಿಳಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ ಉಪ ನಿರ್ದೇಶಕ ರಾಜು ಮಾತನಾಡಿ, ‘ದೇಶದಲ್ಲಿ ಹಸಿರುಕ್ರಾಂತಿಯ ನಂತರ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ. ಆಹಾರ ಭದ್ರತೆ ಇದೆ. ಆದರೆ, ಪೌಷ್ಟಿಕ ಆಹಾರ ಉತ್ಪಾದನೆ, ಸೇವನೆ ಕಡೆ ಗಮನ ಕೊಡಬೇಕು’ ಎಂದು ಸಲಹೆ ನೀಡಿದರು.

‘ರೈತರು ಏಕ ಬೆಳೆ ಬದಲಿಗೆ ಬಹು ಬೆಳೆ ಪದ್ಧತಿ ಅನುಸರಿಸಬೇಕು. ಹೈನುಗಾರಿಕೆ ಕೈಗೊಳ್ಳಬೇಕು. ಆಗ ಆರ್ಥಿಕವಾಗಿ ಸಬಲರಾಗಬಹುದು’ ಎಂದು ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಂಡ್ಯ ವಿ.ಸಿ. ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಎನ್‌. ಶಿವಕುಮಾರ್‌ ಮಾತನಾಡಿದರು.

ಸಹಾಯಕ ಕೃಷಿ ನಿರ್ದೇಶಕಿ ಮಮತಾ, ಒಡಿಪಿ ಸಂಸ್ಥೆಯ ಜಾನ್‌ ಮುಖ್ಯ ಅತಿಥಿಗಳಾಗಿದ್ದರು. ಶೇಖರ್‌, ಸುರೇಶ್‌, ಚನ್ನಬಸಪ್ಪ, ದಿನೇಶ್‌ ಪಾಲ್ಗೊಂಡಿದ್ದರು.

ಕೃಷಿ ತಾಂತ್ರಿಕತೆಗಳ ಲಾಭ ಪಡೆದು ರೈತರು ಆರ್ಥಿಕವಾಗಿ ಮುಂದೆ ಬರಬೇಕು
ಎಚ್.ಎಸ್. ಶಿವರಾಮು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ

ರೈತರಿಂದ ರೈತರಿಗಾಗಿ ಕಾರ್ಯಕ್ರಮ

‘ರೈತರಿಂದ ರೈತರಿಗಾಗಿ’ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ನಂಜನಗೂಡು ತಾಲ್ಲೂಕು ಮುದ್ದಹಳ್ಳಿಯ ಚಿಕ್ಕಸ್ವಾಮಿ ಹುಣಸೂರು ತಾಲ್ಲೂಕು ಧರ್ಮಾಪುರದ ಬಿ.ಅಖಿಲ್‌ ಅನಿಸಿಕೆ ಹಂಚಿಕೊಂಡರು. ರೈತ– ವಿಜ್ಞಾನಿಗಳ ಚರ್ಚೆಯಲ್ಲಿ ‘ಹವಾಮಾನ ವೈಪರೀತ್ಯದಲ್ಲಿ ರೈತರು ಅನುಸರಿಸಬೇಕಾದ ಬೇಸಾಯ ಕ್ರಮ’ ಕುರಿತು ತಾಂತ್ರಿಕ ಅಧಿಕಾರಿ ಜಿ.ವಿ. ಸುಮಂತ್‌ ಕುಮಾರ್‌ ‘ತೋಟಗಾರಿಕೆ ಬೆಳೆಯಲ್ಲಿ ಸಾವಯವ ಕೃಷಿ’ ಬಗ್ಗೆ ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ರಾಹುಲ್‌ ದಾಸ್‌ ‘ಸಾವಯವ ಕೃಷಿಯಲ್ಲಿ ಸಸ್ಯ ಸಂರಕ್ಷಣೆ’ ಕುರಿತು ಸಸ್ಯ ರೋಗವಿಜ್ಞಾನ ಸಹ ಪ್ರಾಧ್ಯಾಪಕ ಎನ್‌. ಉಮಾಶಂಕರ್‌ ‘ಸಾವಯವ ಕೃಷಿಯಲ್ಲಿ ಕೀಟ ನಿರ್ವಹಣೆ’ ಬಗ್ಗೆ ಸಸ್ಯ ಸಂರಕ್ಷಣೆ ಸಹಾಯಕ ಪ್ರಾಧ್ಯಾಪಕಿ ಆರ್‌.ಎನ್‌. ಪುಷ್ಪಾ ಮಾರ್ಗದರ್ಶನ ನೀಡಿದರು.

Cut-off box - ಫಲವತ್ತತೆ ಕಾಪಾಡಿ... ಸುತ್ತೂರು ಜೆಎಎಸ್ಎಸ್‌ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಮುಖ್ಯಸ್ಥ ಜ್ಞಾನೇಶ್‌ ‘ಮುಂದಿನ ಹತ್ತು ವರ್ಷಗಳಲ್ಲಿ ಕೃಷಿ ಕ್ಷೇತ್ರಕ್ಕೆ ಮತ್ತೆ ಹಿಂದಿನ ಪ್ರಾಮುಖ್ಯತೆ ಸಿಗಲಿದೆ. ಆದ್ದರಿಂದ ಯಾವುದೇ ರೈತರು ಕೂಡ ಭೂಮಿಯನ್ನು ಮಾರಾಟ ಮಾಡಬಾರದು. ಬಹು ಬೆಳೆ ಬೆಳೆಯಬೇಕು. ಭೂಮಿಯ ಫಲವತ್ತತೆ ಕಾಪಾಡಬೇಕು. ಕಳೆ ಮತ್ತು ಕೀಟನಾಶಕ ಕಡಿಮೆ ಮಾಡಬೇಕು’ ಎಂದು ತಿಳಿಸಿದರು. ಸುತ್ತೂರು ಕೆವಿಕೆ ವಿಜ್ಞಾನಿ ದೀಪಕ್‌ ಮಾತನಾಡಿ ‘ಗಾಳಿ ನೀರಿನಂತೆ ಜನರಿಗೆ ಸಮತೋಲಿತ ಆಹಾರ ಸೇವನೆಯೂ ಮುಖ್ಯ. ಅನ್ನವನ್ನಷ್ಟೆ ತಿಂದರೆ ಪ್ರಯೋಜನವಾಗದು. ಆಹಾರದಲ್ಲಿ ವೈವಿಧ್ಯತೆ ಇರಬೇಕು. ಹಣ್ಣು ತರಕಾರಿ ಸೊಪ್ಪು ಮಾಂಸಾಹಾರಿಗಳಾದರೆ ಮೊಟ್ಟೆ ಮಾಂಸವನ್ನು ಕೂಡ ಸೇವಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.