ADVERTISEMENT

‘ಕಾಯಕ ತತ್ವ ಸರ್ವಕಾಲಕ್ಕೂ ಪ್ರಸ್ತುತ’

ಬಸವ ಜಯಂತಿ, ಕಾಯಕ ದಿನಾಚರಣೆ; ಕಾಯಕಶ್ರೀ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 29 ಮೇ 2024, 15:40 IST
Last Updated 29 ಮೇ 2024, 15:40 IST
<div class="paragraphs"><p>ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕ ಹಾಗೂ ಕದಳಿ ಮಹಿಳಾ ವೇದಿಕೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಎಂ.ಬಿ. ಮಹದೇವಪ್ಪ, ಜಯಮ್ಮ ಅವರಿಗೆ ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.</p></div>

ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕ ಹಾಗೂ ಕದಳಿ ಮಹಿಳಾ ವೇದಿಕೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಎಂ.ಬಿ. ಮಹದೇವಪ್ಪ, ಜಯಮ್ಮ ಅವರಿಗೆ ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.

   

– ಪ್ರಜಾವಾಣಿ ಚಿತ್ರ

ಮೈಸೂರು: ‘ಶರಣರ ಕಾಯಕ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ. ಕೇವಲ ಹಣ ಸಂಗ್ರಹವೇ ಉದ್ದೇಶವಾದರೆ ಅದು ಕಾಯಕ ಆಗಲಾರದು ಎಂಬುದು ಅವರ ಸಂದೇಶವಾಗಿತ್ತು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ. ಧರಣಿದೇವಿ ಮಾಲಗತ್ತಿ ಹೇಳಿದರು.

ADVERTISEMENT

ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕ ಹಾಗೂ ಕದಳಿ ಮಹಿಳಾ ವೇದಿಕೆಯು ಶಿವರಾತ್ರಿ ರಾಜೇಂದ್ರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಬಸವ ಜಯಂತಿ, ಕಾಯಕ ದಿನಾಚರಣೆ ಹಾಗೂ ಕಾಯಕಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ‘ಬಸವಣ್ಣ ಮತ್ತು ಕಾಯಕ’ ಕುರಿತು ಉಪನ್ಯಾಸ ನೀಡಿದರು.

ಕಾಯಕಕ್ಕೆ ದೈಹಿಕ ಶ್ರಮದ ಜೊತೆಗೆ ಪಾರಮಾರ್ಥಿಕ ಅರ್ಥ ಕೊಟ್ಟಿದ್ದು ಶರಣರು. ಕೇವಲ‌ ಲೌಕಿಕ ದುಡಿಮೆ ಮಾತ್ರವಲ್ಲದೇ ಅಲೌಕಿಕ ಕರ್ಮದ ಪರಿಭಾಷೆಯೂ ಇದರಲ್ಲಿ ಸೇರಿದೆ. ಕಾಯಕದ ಜೊತೆಗೆ ದಾಸೋಹಕ್ಕೂ ಶರಣರು ಮಹತ್ವ ಕೊಟ್ಟವರು.

ಕಾಯಕ ವಸ್ತು ನಿಷ್ಠವಲ್ಲ, ಗುಣನಿಷ್ಠವಾದುದು. ಕೇವಲ ಹಣ ಸಂಗ್ರಹವೇ ಉದ್ದೇಶವಾದರೆ ಅದು ಕಾಯಕ ಆಗಲಾರದು. ಆರ್ಥಿಕತೆಯಲ್ಲಿ ಉತ್ಪಾದನೆ, ಲಾಭ–ಉಳಿತಾಯಗಳ ವರ್ತುಲ‌ ಇದ್ದರೆ ಕಾಯಕದಲ್ಲಿ ಕೇವಲ ಉತ್ಪಾದನೆ ಮತ್ತು ವಿತರಣೆ ಅಷ್ಟೇ ಇದೆ. ಉಳಿತಾಯ, ಸಂಗ್ರಹ, ಹೂಡಿಕೆ, ಲಾಭ-ನಷ್ಟದ ಮಾತುಗಳು ಶರಣರ ಕಾಯಕ ತತ್ವದಲ್ಲಿ ಇಲ್ಲ. ಇದನ್ನೇ ಇಟ್ಟುಕೊಂಡು ಆದರ್ಶಮಯ ಸಮಾಜ ನಿರ್ಮಾಣ‌ ಮಾಡಿದ್ದು ಶರಣರು ಎಂದು ಬಣ್ಣಿಸಿದರು.

ಶರಣರ ತತ್ವದಲ್ಲಿ ಪ್ರತಿ ವ್ಯಕ್ತಿಗೂ ಕಾಯಕ ಕಡ್ಡಾಯ. ಕಾಯಕವಿಲ್ಲದೆ ದಾಸೋಹ ಮಾಡಲಾಗದು. ಕೇವಲ ಭಕ್ತಿ ಇದ್ದರೆ ಸಾಲದು. ಕಾಯಕದಿಂದ ಬಂದದ್ದು ಮಾತ್ರ ಲಿಂಗಕ್ಕೆ ಅರ್ಪಿತ ಎಂಬುದು ಶರಣರ ನಂಬಿಕೆ ಆಗಿತ್ತು. ಲಂಚ, ವಂಚನೆಗೆ ಅಲ್ಲಿ ಅವಕಾಶ‌ ಇಲ್ಲ. ವಾಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿದರೆ ಅದಕ್ಕೆ ಫಲವಿಲ್ಲ ಎಂದು ವಿವರಿಸಿದರು.

ಎಂ.ಬಿ. ಮಹದೇವಪ್ಪ, ಜಯಮ್ಮ ಅವರಿಗೆ ಕಾರ್ಯಕ್ರಮದಲ್ಲಿ ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಜಿ. ದಿನೇಶ್‌ ಅಧ್ಯಕ್ಷತೆ ವಹಿಸಿದ್ದರು.

ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ, ಕಾರ್ಯದರ್ಶಿ ಟಿ.ಎಸ್. ಕುಮಾರಸ್ವಾಮಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.