ಹುಣಸೂರು: ‘ನಗರದ ಪ್ರಮುಖ ವೃತ್ತಗಳಲ್ಲಿ ‘ಕೃತಕ ಬುದ್ಧಿ ಮತ್ತೆ ಕ್ಯಾಮೆರಾ’ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಅಳವಡಿಸಿದ್ದು ಕಾನೂನು ಉಲ್ಲಂಘಿಸಿ ವಾಹನ ಚಲಾಯಿಸುವವರಿಗೆ ದಂಡ ವಿಧಿಸಿದ ನೋಟಿಸ್ ಮನೆಗೆ ಬರುತ್ತಿದೆ ಎಚ್ಚರವಹಿಸಿ’ ಎಂದು ಡಿವೈಎಸ್ಪಿ ಗೋಪಾಲಕೃಷ್ಣ ಹೇಳಿದರು.
ನಗರದ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಕಟ್ಟೆಮಳಲವಾಡಿ ಗ್ರಾಮದ ವರಗೆ 6.ಕಿ.ಮಿ. ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
‘ರಸ್ತೆ ಸುರಕ್ಷತಾ ಕಾನೂನು ಪ್ರತಿಯೊಬ್ಬರೂ ಪಾಲಿಸುವುದರಿಂದ ವೈಯಕ್ತಿಕ ಲಾಭ ಹಾಗೂ ಸಾಮಾಜಿಕ ಜವಾಬ್ದಾರಿ ನಿರ್ವಹಣೆಗೆ ಒತ್ತು ನೀಡಿದಂತಾಗಲಿದೆ’ ಎಂದರು.
‘ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಹಾಕುವುದರಿಂದ ರಸ್ತೆಯಲ್ಲಿ ಎದುರಾಗುವ ಆಕಸ್ಮಿಕ ಅವಘಡದಿಂದ ಜೀವ ಉಳಿಸಿಕೊಳ್ಳಲು ಸಹಕಾರಿ ಆಗಲಿದೆ. ಹುಣಸೂರು ನಗರದಲ್ಲಿ ಬಹುತೇಕ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸದೆ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಇದರಿಂದ ಜೀವ ಹಾನಿ ಆಗುವ ಸಂಖ್ಯೆ ಹೆಚ್ಚಾಗಿದೆ’ ಎಂದು ವಿಷಾದಿಸಿದರು.
‘ಹುಣಸೂರು ನಗರದಲ್ಲಿ ಅಪ್ರಾಪ್ತರು ವಾಹನ ಓಡಿಸುವುದು, ಲೈಸೆನ್ಸ್ ಇಲ್ಲದವರು, ಶಬ್ದ ಮಾಲಿನ್ಯ ಉಂಟುಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಾಗೃತಿ ಅಭಿಯಾನದ ಮೂಲಕ ನಾಗರಿಕರಿಗೆ ಅರಿವು ಮೂಡಿಸುವ ಪ್ರಯತ್ನ ನಡೆದಿದೆ’ ಎಂದರು.
ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ಮುನಿಯಪ್ಪ ಮಾತನಾಡಿ,‘ದ್ವಿಚಕ್ರ ವಾಹನದಲ್ಲಿ ನಿಗಧಿಗಿಂತಲೂ ಹೆಚ್ಚು ಜನರು ಪ್ರಯಾಣಿಸುವುದು, ಸೀಟ್ ಬೆಲ್ಟ್ ಹಾಕದಿರುವುದು ಅಪಘಾತಗಳಿಗೆ ಕಾರಣ. ಈ ಎಲ್ಲವನ್ನು ಸಾರ್ವಜನಿಕರು ಗಮನದಲಿಟ್ಟು ವಾಹನ ಬಳಸುವುದರಿಂದ ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.