ADVERTISEMENT

ಮೈಸೂರು: ‘ನುಡಿ ಬಾಗಿಲ ಹಾಯ್ಡು’ ಕೃತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 16:12 IST
Last Updated 15 ಜೂನ್ 2024, 16:12 IST
ಐಡಿಯಲ್‌ ಜಾವಾ ಶಾಲೆ ಸಭಾಂಗಣದಲ್ಲಿ ಶನಿವಾರ ರಾಮು ಅವರ ‘ನುಡಿ ಬಾಗಿಲ ಹಾಯ್ಡು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಓ.ಎಲ್‌. ನಾಗಭೂಷಣಸ್ವಾಮಿ, ರಹಮತ್‌ ತರೀಕೆರೆ, ರಾಜೇಂದ್ರ ಚೆನ್ನಿ, ಜ.ನಾ. ತೇಜಶ್ರೀ, ಕೆ. ಅಕ್ಷತಾ, ಚ. ಸರ್ವಮಂಗಳಾ, ಕೃಪಾಕರ ಹಾಗೂ ಸೇನಾನಿ ಪಾಲ್ಗೊಂಡರು –ಪ್ರಜಾವಾಣಿ ಚಿತ್ರ
ಐಡಿಯಲ್‌ ಜಾವಾ ಶಾಲೆ ಸಭಾಂಗಣದಲ್ಲಿ ಶನಿವಾರ ರಾಮು ಅವರ ‘ನುಡಿ ಬಾಗಿಲ ಹಾಯ್ಡು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಓ.ಎಲ್‌. ನಾಗಭೂಷಣಸ್ವಾಮಿ, ರಹಮತ್‌ ತರೀಕೆರೆ, ರಾಜೇಂದ್ರ ಚೆನ್ನಿ, ಜ.ನಾ. ತೇಜಶ್ರೀ, ಕೆ. ಅಕ್ಷತಾ, ಚ. ಸರ್ವಮಂಗಳಾ, ಕೃಪಾಕರ ಹಾಗೂ ಸೇನಾನಿ ಪಾಲ್ಗೊಂಡರು –ಪ್ರಜಾವಾಣಿ ಚಿತ್ರ   

ಮೈಸೂರು: ಜೆಎಲ್‌ಬಿ ರಸ್ತೆಯ ಐಡಿಯಲ್‌ ಜಾವಾ ಶಾಲೆ ಸಭಾಂಗಣ ಶನಿವಾರ ವಿಭಿನ್ನ ಬಗೆಯ ಕೃತಿ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾಯಿತು. ಕಳೆದ ವರ್ಷ ನಿಧನರಾದ ‘ಹಾಡುಪಾಡು’ ರಾಮು ಅವರ ‘ ನುಡಿ ಬಾಗಿಲ ಹಾಯ್ಡು’ ಕೃತಿ ಅನಾವರಣಗೊಳಿಸಿದ ಅವರ ಒಡನಾಡಿಗಳು, ಮಾತಿಗಿಂತ ಹೆಚ್ಚಾಗಿ ಕವಿತೆ ವಾಚನದ ಮೂಲಕವೇ ರಾಮುಗೆ ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಒಬ್ಬೊಬ್ಬ ಅತಿಥಿಯೂ ರಾಮು ಅವರ ಅಷ್ಟೂ ಕವಿತೆಗಳ ಪೈಕಿ ತಮ್ಮಿಷ್ಟದ 1–2 ಪದ್ಯ ಓದಿದರು. ಜೊತೆಗೆ ರಾಮು ತಮಗೆ ಯಾಕೆಲ್ಲ ಇಷ್ಟವಾಗಿದ್ದರು ಎಂಬುದನ್ನು ನೆನೆದರು.

ಕವಯತ್ರಿ ಚ. ಸರ್ವಮಂಗಳಾ ‘ರಾಮು ಅವರಿಗೆ ಎಲ್ಲವನ್ಮೂ ಮುಚ್ಚಿಟ್ಟು ಹೇಳುವ ಅಭ್ಯಾಸ ಹೆಚ್ಚು.‌ ಆತ್ಮ ಸಂಗಾತದ ಕವಿತೆಗಳೇ ಇಲ್ಲಿ ಹೆಚ್ಚು’ ಎಂದು ಬಣ್ಣಿಸಿದರು.

ADVERTISEMENT

ಲೇಖಕಿ ಜ.ನಾ. ತೇಜಶ್ರೀ ‘ರಾಮು ಕವಿತೆಗಳಲ್ಲಿ ಅನ್ಯ ಭಾಷೆಗಳ ಪದ ಬಳಕೆ ಹೆಚ್ಚು ಮತ್ತು ಅವು ಸಹಜ ಎಂಬಂತೆ ಕವಿತೆಯಲ್ಲಿ ಸೇರಿಕೊಳ್ಳುತ್ತವೆ. ರಾಮು ಬದುಕು ಕೂಡ ನೂರಾರು ನುಡಿಗಳನ್ನು ಮುರಿದ ಸೋಜಿಗ’ ಎಂದರು.

ಲೇಖಕ ರಾಜೇಂದ್ರ ಚೆನ್ನಿ, ‘ರಾಮು ಪದ್ಯಗಳು ಶ್ರದ್ಧೆಯ ಕಾವ್ಯ. ಅವರು ಬೇಂದ್ರೆ ಅವರ ವಾರಸುದಾರರಂತೆ ಕಾಣುತ್ತಾರೆ. ಇಡೀ ಕೃತಿಯಲ್ಲಿ ತಾಯ್ತನ ಹಾಸುಹೊಕ್ಕಾಗಿದೆ’ ಎಂದು ನುಡಿದರು.

ಲೇಖಕ ರಹಮತ್‌ ತರೀಕೆರೆ, ‘ಕಣ್ಣು ಮಂಜಾಗುವವರೆಗೂ ಓದಿದ್ದ ರಾಮು, ಲೇಖಕರ ಪ್ರೇಮಿ ಆಗಿದ್ದರು. ಕಿರಿಯ ಬರಹಗಾರರನ್ನು ಬೆಳೆಸುವ ತಾಯ್ತನ ಅವರಲ್ಲಿತ್ತು. ರಾಮು ಮನೆ ಅನುಭವ ಮಂಟಪದಂತೆ ಇತ್ತು. ರಾಮು ಮತ್ತು ರಾಜೀವ್‌ ತಾರಾನಾಥರು ಕನ್ನಡದ ಎರಡು ವಿಶಿಷ್ಟ ಪ್ರತಿಭೆಗಳು’ ಎಂದರು.

ವಿಮರ್ಶಕ ಓ.ಎಲ್‌. ನಾಗಭೂಷಣಸ್ವಾಮಿ, ವನ್ಯಜೀವಿ ತಜ್ಞ ಸೇನಾನಿ, ರಾಮು ಜೊತೆಗಿನ ನೆನಪು ತೆರದಿಟ್ಟರು. ವನ್ಯಜೀವಿ ತಜ್ಞ ಕೃಪಾಕರ, ಪ್ರಕಾಶಕಿ ಕೆ. ಅಕ್ಷತಾ ಪಾಲ್ಗೊಂಡರು.

ಕೃತಿ ಪರಿಚಯ ಕೃತಿ; ನುಡಿಯ ಬಾಗಿಲ ಹಾಯ್ಡು

ಪ್ರಕಾಶಕರು; ಅಹರ್ನಿಶಿ ಪ್ರಕಾಶನ

ಪುಟ; 215

ಬೆಲೆ: ₹216

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.