ADVERTISEMENT

ವ್ಯಾಪಾರೀಕರಣವಾದ ವೈದ್ಯಕೀಯ ವೃತ್ತಿ: ಡಾ.ಡಿ.ತಿಮ್ಮಯ್ಯ ವಿಷಾದ

ಡಾ.ಅರಕಲಗೂಡು ನೀಲಕಂಠಮೂರ್ತಿ ಅವರ ಪುಸ್ತಕಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 7:52 IST
Last Updated 21 ಅಕ್ಟೋಬರ್ 2024, 7:52 IST
ಡಾ.ಅರಕಲಗೂಡು ನೀಲಕಂಠಮೂರ್ತಿ ಅವರ ಮೂರು ಕೃತಿಗಳನ್ನು ವಿಧಾನಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಬಿಡುಗಡೆ ಮಾಡಿದರು. ಡಾ.ಕೆ.ಎಸ್.ಉಮಾಶಂಕರ್‌, ಅಂಶಿ ಪ್ರಸನ್ನಕುಮಾರ್‌, ಡಾ.ಎಂ.ಜಿ.ಆರ್‌.ಅರಸು, ಎಚ್‌ಎಂಟಿ ಲಿಂಗರಾಜೇ ಅರಸು, ಡಾ.ಜೆ.ಪ್ರಸನ್ನಕುಮಾರ್‌, ಕಮಲಾ ನೀಲಕಂಠಮೂರ್ತಿ ಪಾಲ್ಗೊಂಡಿದ್ದರು- ಪ್ರಜಾವಾಣಿ ಚಿತ್ರ
ಡಾ.ಅರಕಲಗೂಡು ನೀಲಕಂಠಮೂರ್ತಿ ಅವರ ಮೂರು ಕೃತಿಗಳನ್ನು ವಿಧಾನಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಬಿಡುಗಡೆ ಮಾಡಿದರು. ಡಾ.ಕೆ.ಎಸ್.ಉಮಾಶಂಕರ್‌, ಅಂಶಿ ಪ್ರಸನ್ನಕುಮಾರ್‌, ಡಾ.ಎಂ.ಜಿ.ಆರ್‌.ಅರಸು, ಎಚ್‌ಎಂಟಿ ಲಿಂಗರಾಜೇ ಅರಸು, ಡಾ.ಜೆ.ಪ್ರಸನ್ನಕುಮಾರ್‌, ಕಮಲಾ ನೀಲಕಂಠಮೂರ್ತಿ ಪಾಲ್ಗೊಂಡಿದ್ದರು- ಪ್ರಜಾವಾಣಿ ಚಿತ್ರ   

ಮೈಸೂರು: ‘ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೃತ್ತಿ ವ್ಯಾಪಾರೀಕರಣವಾಗಿದೆ. ಹೀಗಿದ್ದಾಗ್ಯೂ ಅಲ್ಲಲ್ಲಿ ಕೆಲವರು ಮಾನವೀಯ ಮೌಲ್ಯ ಉಳಿಸಿಕೊಂಡು ಸೇವೆ ನೀಡುತ್ತಿದ್ದಾರೆ’ ಎಂದು ವಿಧಾನಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.

ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್‌ ಟ್ರಸ್ಟ್ ಮತ್ತು ವೈದ್ಯವಾರ್ತಾ ಪ್ರಕಾಶನವು ನಗರದ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಅರಕಲಗೂಡು ನೀಲಕಂಠಮೂರ್ತಿ ಅವರ ‘ಸಮಯದ ನೀರು ಮತ್ತೆ ಹರಿಯುವ ಹೊತ್ತು’, ‘ಹೆಣ್ಣೊಬ್ಬಳು ಗರ್ಭಕೋಶಗಳೆರಡು’, ‘ಮುಖದಿಂದೆದ್ದು ಎತ್ತಲೋ ನಡೆದ ಕಣ್ಣು’ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮನುಷ್ಯನ ದೇಹರಚನೆ ನಿಗೂಢ ಪ್ರಕ್ರಿಯೆ. ಅದರಲ್ಲೂ ಮಹಿಳೆಯರು ದೇಹರಚನೆ ಸಂಕೀರ್ಣವಾಗಿರುತ್ತದೆ. ಮಹಿಳೆ ಮಗುವಿಗೆ ಜನ್ಮ ನೀಡಬೇಕಾಗುತ್ತದೆ. ಹೀಗಿರುವಾಗ ಅಪರೂಪದ ಎರಡು ಗರ್ಭಕೋಶವಿರುವ ಪ್ರಕರಣದ ಬಗ್ಗೆ ಬರೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಆಗಬೇಕು’ ಎಂದು ಅಭಿ‍ಪ್ರಾಯಪಟ್ಟರು.

ADVERTISEMENT

ಕೃತಿಗಳನ್ನು ‍ಪರಿಚಯಿಸಿದ ಮೈಸೂರು ವೈದ್ಯಕೀಯ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಜೆ.ಪ್ರಸನ್ನಕುಮಾರ್‌, ‘ಕ್ಲಿಷ್ಟಕರವಾದ ವೈದ್ಯಕೀಯ ವಿಷಯಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ಈ ಕೃತಿಗಳಲ್ಲಿ ನೀಡಲಾಗಿದೆ. ದ್ವಿಗರ್ಭಾಶಯ ಶೇ 0.3ರಷ್ಟು ಮಹಿಳೆಯರಲ್ಲಿ ಮಾತ್ರವೇ ಕಂಡುಬರುವ ಜನ್ಮಜಾತ ವೈಕಲ್ಯ. ಇದರ ಲಕ್ಷಣ ಮತ್ತು ಕಾರಣಗಳನ್ನು, ರೋಗ ಪರೀಕ್ಷೆ ಮತ್ತು ಚಿಕಿತ್ಸಾ ವಿಧಾನಗಳನ್ನು ಅತ್ಯಂತ ಕುತೂಹಲಕಾರಿಯಾಗಿ ಬರೆದಿದ್ದಾರೆ. ಇದು ವೈದ್ಯರ ಹಾಗೂ ಓದಿದವರ ಜ್ಞಾನ ಹೆಚ್ಚಿಸುತ್ತದೆ’ ಎಂದು ತಿಳಿಸಿದರು.

‘ಕೊಬ್ಬಿನ ಕಥೆ, ಅತಿಕ್ರಿಯಾಶೀಲ ಮೂತ್ರಕೋಶ, ಬೆಲ್ಸ್‌ ಪಾಲ್ಸಿ, ಬೆವರು, ಗುದರೋಗಗಳು, ಮೂತ್ರಪಿಂಡದ ಕಲ್ಲುಗಳು, ಅತಿನಿದ್ರಾರೋಗ, ನಿದ್ರಾಭಂಗ, ಶ್ವಾಸಸ್ತಂಭನ, ಸಿಕಲ್‌ಸೆಲ್‌ ಅನೀಮಿಯಾ ಕುರಿತೂ ಅರ್ಥವೂರ್ಣವಾಗಿ ಬರೆದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತ‍ಪಡಿಸಿದರು.

‘ಬಹುತೇಕ ರೋಗಳಿಗೆ ನಾವು ತಿನ್ನುವ ಆಹಾರ, ಅದರಲ್ಲೂ ಜಂಕ್‌ಫುಡ್‌ ಕಾರಣವಾಗುತ್ತದೆ. ಅಂತಹ ಆಹಾರ ಸೇವನೆ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು.

‘1970ರ ದಶಕದಲ್ಲಿ ಸತತ 13 ವರ್ಷಗಳ ಕಾಲ ಸೋಮಾಲಿಯಾ ದೇಶದಲ್ಲಿ ಕೆಲಸ ಮಾಡಿದ್ದ ನೀಲಕಂಠಮೂರ್ತಿ ‘ಕಗ್ಗತ್ತಲ ಖಂಡದಲ್ಲಿ’ ಕೃತಿಯಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ’ ಎಂದರು.

ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ‘ಬೇರೆ ಬೇರೆ ಕ್ಷೇತ್ರಗಳವರು ಬರೆಯುವುದರಿಂದ ಮಾತ್ರ ವೈವಿಧ್ಯಮಯ ಸಾಹಿತ್ಯ ಸೃಷ್ಟಿಯಾಗುತ್ತದೆ’ ಎಂದು ಹೇಳಿದರು.

ವೈದ್ಯವಾರ್ತಾ ಪ್ರಕಾಶನದ ನಿರ್ದೇಶಕ ಎಚ್‌ಎಂಟಿ ಲಿಂಗರಾಜೇ ಅರಸು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಡಾ.ಎಂಜಿಆರ್‌ ಅರಸು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.