ಮೈಸೂರು: ಬೋಗಾದಿ– ಗದ್ದಿಗೆ ರಸ್ತೆಗೆ ಸಮೀಪದಲ್ಲಿರುವ ಹುಯಿಲಾಳು ಗ್ರಾಮದ ಕೆರೆಯಿಂದ ಆರಂಭವಾಗುವ ಪೂರ್ಣಯ್ಯ ನಾಲೆಯು ನಗರದ ಕುಕ್ಕರಹಳ್ಳಿ ಕೆರೆವರೆಗೆ 20 ಕಿ.ಮೀ ಉದ್ದವಿದೆ. ಅದನ್ನು ಪುನರುಜ್ಜೀವನಗೊಳಿಸದಿದ್ದರೆ, ನಗರದ ಪಶ್ಚಿಮ ಭಾಗದಲ್ಲಿ ಮಳೆ ಬಂದಾಗ ಪ್ರವಾಹ ಭೀತಿ ಉಂಟಾಗಲಿದೆ.
ಕಳೆದ 3 ದಶಕಗಳಿಂದ ವ್ಯಾಪಕ ನಗರೀಕರಣದಿಂದ ಒತ್ತುವರಿ ಎಗ್ಗಿಲ್ಲದೆ ಮುಂದುವರಿದಿದ್ದು, ಕುಕ್ಕರಹಳ್ಳಿ ಕೆರೆಯ ಜಲಮೂಲವು ಅವಸಾನವಾಗುತ್ತಿದೆ. ನಾಲೆಯ ಬಹುತೇಕ ಭಾಗವು ಒತ್ತುವರಿಯಿಂದ ನಾಶವಾಗಿದೆ. ಕೊನೆಯ 2.5 ಕಿ.ಮೀ. ನಾಲೆಯ ಭಾಗವನ್ನು ಉಳಿಸಿಕೊಂಡರೆ ಕುಕ್ಕರಹಳ್ಳಿ ಕೆರೆಯ ಶುದ್ಧ ನೀರಿನ ಹರಿವನ್ನು ಶೇ 30ರಷ್ಟು ಹೆಚ್ಚಿಸಬಹುದು ಎಂಬುದು ಪರಿಸರವಾದಿಗಳ ಪ್ರತಿಪಾದನೆಯಾಗಿದೆ.
ಕುಕ್ಕರಹಳ್ಳಿ ಕೆರೆಗೆ ಜಯಲಕ್ಷ್ಮೀಪುರಂ, ಒಂಟಿಕೊಪ್ಪಲು ಮತ್ತು ಪಡುವಾರಹಳ್ಳಿ ಕಡೆಯಿಂದ ಬರುವ ಮಳೆ ನೀರು ಕಾಲುವೆಗಳು ಕಲುಷಿತ ನೀರನ್ನೇ ಹೊತ್ತು ತರುತ್ತಿವೆ. ಪೂರ್ಣಯ್ಯ ನಾಲೆ ಪುನರುಜ್ಜೀವನಗೊಳಿಸಿದರೆ ಅಂತರ್ಜಲ ಮಟ್ಟವೂ ಹೆಚ್ಚಲಿದೆ.
6 ಕೆರೆಗಳ ನೀರು: ಹುಯಿಲಾಳು ಕೆರೆ, ಮಾದಗಳ್ಳಿ ದೊಡ್ಡಕೆರೆ ಸೇರಿದಂತೆ 6 ಕೆರೆಗೆಳ ಕೋಡಿ ಬಿದ್ದ ನೀರು ಪೂರ್ಣಯ್ಯ ನಾಲೆ ಸೇರುತ್ತಿತ್ತು. ನಾಗವಾಲ, ಹೆಮ್ಮನಗಳ್ಳಿ, ಸಾಹುಕಾರ ಹುಂಡಿ, ಗಾಣಗರಹುಂಡಿ, ಶಂಕರಪುರ ಹೊಸಹಳ್ಳಿ, ಮರಟಿಕ್ಯಾತನಹಳ್ಳಿ, ದಾಸನಕೊಪ್ಪಲು, ಬಸವನಹಳ್ಳಿ, ಯಳವರಹುಂಡಿ, ಹಿನಕಲ್, ವಿಜಯನಗರ, ಮಾನಸಗಂಗೋತ್ರಿಯಲ್ಲಿ ಬಿದ್ದ ಮಳೆ ನೀರು ಕುಕ್ಕರಹಳ್ಳಿ ಕೆರೆಗೆ ಹರಿಯುತ್ತಿತ್ತು. ಇದೀಗ ಮಾನಸಗಂಗೋತ್ರಿಯಲ್ಲಿ ಬಿದ್ದ ಮಳೆ ನೀರು ಕೆರೆಯ ಒಡಲು ಸೇರುತ್ತಿದೆ. ಉಳಿದ ನೀರು ಬೋಗಾದಿ ಕೆರೆ ಪಾಲಾಗುತ್ತಿದ್ದು, ಮಳೆ ಬಂದಾಗ ಪ್ರವಾಹ ಉಂಟಾಗುತ್ತಿದೆ.
ಕಾಡುವ ಪ್ರವಾಹ: 2022ರ ಮೇ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ನಗರದ ಬೋಗಾದಿ, ಆನಂದನಗರ, ಆಶ್ರಯ ಬಡಾವಣೆ, ಸಿಎಫ್ಟಿಆರ್ಐ ಬಡಾವಣೆಗಳ ಪ್ರವಾಹ ಉಂಟಾಗಿತ್ತು. ಪೂರ್ಣಯ್ಯ ನಾಲೆ ಸುಸ್ಥಿತಿಯಲ್ಲಿದ್ದರೆ ಮಳೆ ನೀರು ಸರಾಗವಾಗಿ ಕುಕ್ಕರಹಳ್ಳಿ ಕೆರೆಗೆ ಸಾಗುತ್ತಿತ್ತು. ನಾಲೆ ಅವಸಾನಗೊಂಡಿದ್ದರಿಂದ ಜಲಾನಯನ ಪ್ರದೇಶದಲ್ಲಿ ಬಿದ್ದ ನೀರಿನಿಂದ ಬೋಗಾದಿ ಕೆರೆಗೆ ಹರಿದು, ಅಲ್ಲಿಂದ ಲಿಂಗಾಂಬುಧಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಕೊಚ್ಚಿಕೊಂಡು ಹೋಗಿತ್ತು. ಆನಂದನಗರ ಸೇರಿದಂತೆ ಸುತ್ತಲಿನ ಪ್ರದೇಶ ಜಲಾವೃತಗೊಂಡಿದ್ದವು.
2017ರ ಸೆಪ್ಟೆಂಬರ್, 2021ರ ನವೆಂಬರ್ನಲ್ಲೂ ಬಿದ್ದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿತ್ತು. ಬೋಗಾದಿ ಗ್ರಾಮ ಹಾಗೂ ಸುತ್ತಮುತ್ತಲ ಬಡಾವಣೆಗಳಲ್ಲಿ ಪ್ರವಾಹ ಪ್ರತಿ ಮಳೆಗಾಲದಲ್ಲೂ ಮುಂದುವರಿದಿದೆ.
‘ಪೂರ್ಣಯ್ಯ ನಾಲೆ ಪುನರುಜ್ಜೀವನಗೊಂಡರೆ ಭಾರಿ ಮಳೆ ಬಂದಾಗ ತಗ್ಗು ಪ್ರದೇಶಗಳಲ್ಲಿ ಉಂಟಾಗುವ ಪ್ರವಾಹವನ್ನು ತಪ್ಪಿಸಲಿದೆ’ ಎನ್ನುತ್ತಾರೆ ಪರಿಸರ ತಜ್ಞ ಯು.ಎನ್.ರವಿಕುಮಾರ್.
ಹುಯಿಲಾಳು ಕೆರೆಯಿಂದ ನಾಲೆ ಆರಂಭ 20 ಕಿ.ಮೀ ಉದ್ದದ ಪೂರ್ಣಯ್ಯ ನಾಲೆ ನಗರಾಭಿವೃದ್ಧಿಯಿಂದ ಒತ್ತುವರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.