ಮೈಸೂರು: ‘ಅರಣ್ಯ ಇಲಾಖೆ ಮೈಸೂರು ವಿಭಾಗ ವ್ಯಾಪ್ತಿಯ 400 ಪಿಸಿಪಿ ಗುತ್ತಿಗೆ ನೌಕರರನ್ನು ಯಾವುದೇ ನೋಟಿಸ್ ನೀಡದೇ ಕೆಲಸದಿಂದ ಏಕಾಏಕಿ ತೆಗೆದು ಹಾಕಿರುವುದನ್ನು ಖಂಡಿಸಿ, ನೌಕರರಿಗೆ ಉದ್ಯೋಗ ಕಾಯಂಗೊಳಿಸಲು ಆಗ್ರಹಿಸಿ ಆ.1ರಂದು ಬೈಕ್ ರ್ಯಾಲಿ ಆಯೋಜಿಸಲಾಗಿದೆ’ ಎಂದು ಕರ್ನಾಟಕ ಪ್ರಜಾ ಪಕ್ಷದ (ರೈತಪರ್ವ) ಅಧ್ಯಕ್ಷ ಪಿ.ಶಿವಣ್ಣ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ತಾಲ್ಲೂಕಿನ ಜಯಪುರ ಹೋಬಳಿಯ ಮಹದೇವಪುರ ಗ್ರಾಮದಿಂದ ಅಂದು ಬೆಳಿಗ್ಗೆ 11ಕ್ಕೆ ರ್ಯಾಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಹೊರಡಲಿದೆ. ಇಲಾಖೆಯ ಎಲ್ಲ ಪಿಸಿಪಿ ಗುತ್ತಿಗೆ ನೌಕರರು ರ್ಯಾಲಿಯಲ್ಲಿ ಪಾಲ್ಗೊಳ್ಳುವರು’ ಎಂದು ತಿಳಿಸಿದರು.
‘1998–99ರಿಂದಲೂ ಅರಣ್ಯ ಇಲಾಖೆಯ ದಿನಗೂಲಿ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅರಣ್ಯ ರಕ್ಷಣೆಯಲ್ಲದೇ ಕಾಳ್ಗಿಚ್ಚಿನಿಂದ ರಕ್ಷಣೆ, ಗಿಡ–ಮರಗಳ ನೆಡುವಿಕೆ ಸೇರಿದಂತೆ ಎಲ್ಲ ಕೆಲಸ ಮಾಡುತ್ತಿದ್ದಾರೆ. ಇದವರೆಗೂ ಅವರಿಗೆ ₹ 6 ಸಾವಿರದಿಂದ ₹ 14 ಸಾವಿರ ಸಂಬಳವಿದೆ. ಕೆಲಸದಿಂದ ತೆಗೆದುಹಾಕಿದವರನ್ನು ಮತ್ತೆ ಪುನರ್ ನೇಮಕ ಮಾಡಬೇಕಿ. ಬಾಕಿ ವೇತನ ಪಾವತಿಸಬೇಕು’ ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ರಾಜ್ಯ ಅರಣ್ಯ ಇಲಾಖೆಯ ಸರ್ಕಾರಿ ದಿನಗೂಲಿ ಪಿಸಿಪಿ ಪರಿಶಿಷ್ಟ ಜಾತಿ– ಪಂಗಡ ಹಾಗೂ ಹಿಂದುಳಿದ ವರ್ಗಗಳ ನೌಕರರ ಸಂಘದ ಅಧ್ಯಕ್ಷೆ ಎಚ್.ಜಿ.ಹೇಮಲತಾ, ಪಕ್ಷದ ನಗರಾಧ್ಯಕ್ಷ ಆರ್.ಶ್ರೀನಿವಾಸ್, ಮುಖಂಡರಾದ ಸ್ಟೀಫನ್ ಜೋಸೆಫ್, ಶಿವುಗೌಡ, ಪಿ.ಕುಮಾರಸ್ವಾಮಿ, ಬಸವರಾಜು ಇದ್ದರು.
₹3 ಕೋಟಿ ಮೌಲ್ಯದ ಭೂ ಒತ್ತುವರಿ ತೆರವು ಜಯಪುರ: ಮೈಸೂರು ತಾಲ್ಲೂಕು ಮಾದಗಳ್ಳಿ ಗ್ರಾಮದ ಸರ್ವೇ ನಂಬರ್ ವ್ಯಾಪ್ತಿಯಲ್ಲಿ ಖಾಸಗಿಯವರು ಅತಿಕ್ರಮಿಸಿದ್ದ ಸರ್ಕಾರಿ ಭೂಮಿಯನ್ನು ಮೈಸೂರು ತಹಶೀಲ್ದಾರ್ ಕೆ.ಎಂ. ಮಹೇಶ್ ಕುಮಾರ್ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಒತ್ತುವರಿ ತೆರವುಗೊಳಿಸಿದರು. ಸುಅಕ್ರಮವಾಗಿ ನಿರ್ಮಿಸಿದ್ದ ಮಳಿಗೆಗಳನ್ನು ಜೆಸಿಬಿಯಿಂದ ಕೆಡವಲಾಯಿತು. ‘ಗ್ರಾಮದ ಸರ್ವೇ ನಂಬರ್ 54ರಿಂದ 57ರ ಮಧ್ಯದಲ್ಲಿ ಮೈಸೂರು ಗದ್ಧಿಗೆ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇದ್ದ 0.27 ಗುಂಟೆ ಲೋಕೋಪಯೋಗಿ ರಸ್ತೆಗೆ ಸೇರಿದ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿ 12 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದರು. ಒತ್ತುವರಿ ತೆರವು ಜಾಗದ ಮೌಲ್ಯ ₹ 3 ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ. ಒತ್ತುವರಿ ತೆರವು ಮಾಡಿಸಿ ಸರ್ಕಾರಿ ಆಸ್ತಿಯನ್ನು ರಕ್ಷಿಸಲಾಗಿದೆ’ ಎಂದು ತಹಶೀಲ್ದಾರ್ ಮಹೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಇಲವಾಲ ಹೋಬಳಿ ಉಪ ತಹಶೀಲ್ದಾರ್ ಕೆ.ಎಸ್.ಕುಬೇರ್ ಕಂದಾಯ ಅಧಿಕಾರಿ ಶಿವಕುಮಾರ್ ಗ್ರಾಮ ಆಡಳಿತ ಅಧಿಕಾರಿ ಭಾರತೀಶ್ ಬೋಗಾದಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವಿಜಯ್ ಕುಮಾರ್ ಲೋಕೋಪಯೋಗಿ ಇಲಾಖಾ ಸಿಬ್ಬಂದಿ ಮತ್ತು ಪೊಲೀಸರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.