ADVERTISEMENT

ಮೈಸೂರು: 150 ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಿದ್ದರಾಮಯ್ಯ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 9:38 IST
Last Updated 24 ಜನವರಿ 2024, 9:38 IST
<div class="paragraphs"><p> ಕೆರೆಗಳು ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದರು.</p></div>

ಕೆರೆಗಳು ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದರು.

   

ಮೈಸೂರು: ‌ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತಿನಮುಳಸೋಗೆ ಗ್ರಾಮದ ಬಳಿ ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳ 150 ಕೆರೆಗಳು ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ವೆಂಕಟೇಶ್, ಡಾ.ಎಚ್.ಸಿ. ಮಹದೇವಪ್ಪ, ಭೋಸರಾಜು, ಶಾಸಕರಾದ ಡಿ.ರವಿಶಂಕರ್, ಮಂತರ್‌ಗೌಡ, ಕೆ.ಹರೀಶ್ ಗೌಡ, ವಿಧಾನಪರಿಷತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಮರಿತಿಬ್ಬೇಗೌಡ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ, ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ. ಬೋರಲಿಂಗಯ್ಯ, ಎಸ್ಪಿ ಸೀಮಾ ಲಾಟ್ಕರ್ ಪಾಲ್ಗೊಂಡಿದ್ದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಪಿರಿಯಾಪಟ್ಟಣ ತಾಲ್ಲೂಕಿನ 150 ಕೆರೆ- ಕಟ್ಟೆಗಳಿಗೆ‌ ನೀರು ತುಂಬಿಸುವ ಯೋಜನೆಗೆ 2017ರಲ್ಲಿ ಈ ನಾನೇ ಶಂಕುಸ್ಥಾಪನೆ ನೆರವೇರಿಸಿದ್ದೆ. ಮಂಜೂರು ಮಾಡಿದ್ದು ಕೂಡ ನಮ್ಮ ಸರ್ಕಾರವೇ.‌ ಇದು ಬಿಜೆಪಿಯವರ ಕೊಡುಗೆ ಅಲ್ಲ. ಯೋಜನೆ ಮಂಜೂರಾಗಲು ಶಾಸಕರಾಗಿದ್ದ ಕೆ.ವೆಂಕಟೇಶ್ ಅವರು ಕಾರಣ ಎಂದರು.

ಕುಡಿಯುವ ನೀರು‌ ಒದಗಿಸಲು, ಅಂತರ್ಜಲ ಪ್ರಮಾಣ ಹೆಚ್ಚಿಸಲು ಈ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದೇವೆ. ಇದರಿಂದ 79 ಹಳ್ಳಿಗಳ 93ಸಾವಿರ ಜನಸಂಖ್ಯೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ನೀರಾವರಿಗೆ ಪ್ರತಿ ವರ್ಷ ₹ 10ಸಾವಿರ ಕೋಟಿ ಖರ್ಚು ಮಾಡುತ್ತೇವೆ ಎಂದು ಹೇಳಿದ್ದೆವು. ₹56 ಸಾವಿರ ಕೋಟಿ ಖರ್ಚು ಮಾಡಿದೆವು. ನುಡಿದಂತೆ ನಡೆದಿದ್ದೇವೆ.ಆದರೆ ಬಿಜೆಪಿಯವರು ಒಂದು ಲಕ್ಷ ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ ಎಂದಿದ್ದರು. ಆದರೆ, ಮಾಡಲಿಲ್ಲ ಎಂದು ಟೀಕಿಸಿದರು.

223 ತಾಲ್ಲೂಕುಗಳಲ್ಲಿ ಬರಗಾಲವಿದೆ. ರಾಜ್ಯದ ಜನರು ಕಷ್ಟಕ್ಕೆ ಸಿಲುಕಬಾರದೆಂದು ಬರಗಾಲವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದೇವೆ. ಕೇಂದ್ರ ಸರ್ಕಾರವು ಬರ ಪರಿಹಾರವಾಗಿ ಒಂದೇ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಎನ್‌ಡಿಆರ್‌ಎಫ್‌ನಲ್ಲಿ ಹಣ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೆ. ಆದರೂ ಹಣ ಬಂದಿಲ್ಲ. ಬಿಜೆಪಿಯವರಿಗೆ ಬೆಂಬಲ ಕೊಡಬೇಕಾ? ಅವರಿಗೆ ರೈತರ ಬಗ್ಗೆ ಕಾಳಜಿ ಇದೆಯೇ? ಸಂಸದ ಪ್ರತಾಪ ಸಿಂಹ ಏನ್ ಮಾಡುತ್ತಾ ಇದ್ದೀಯಾ? ಕೇಂದ್ರದವರಿಗೆ ಮಾನ ಮರ್ಯಾದೆ ಇದೆಯೇ? ನಾಚಿಕೆ ಆಗುವುದಿಲ್ಲವೇ? ಇವತ್ತಿನವರೆಗೂ ಸಭೆ ನಡೆಸುವುದಕ್ಕೂ ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿ.ಎಸ್. ಯಡಿಯೂರಪ್ಪ ಅವರು ಮಾತ್ರ ರೈತನ ಮಕ್ಕಳಾ? ನಾವು ರೈತರ ಮಕ್ಕಳಲ್ಲವಾ? ನಾವು ಹಿಂದೂಗಳಲ್ಲವೇ? ಎಂದು ‌ಕೇಳಿದರು. ದೇವೇಗೌಡರೇ ನೀವು- ಪ್ರಧಾನಿ ಜೊತೆ ಚೆನ್ನಾಗಿದ್ದೀರಲ್ಲಾ ಕೇಂದ್ರದಿಂದ ಹಣ‌ ಬಿಡುಗಡೆ ಮಾಡಿಸಿ ಎಂದು ಕೋರಿದರು.

ಬಿಜೆಪಿಯನ್ನು ವಿರೋಧ ಮಾಡುತ್ತಿದ್ದ ಜೆಡಿಎಸ್‌ನವರು ಈಗ ಮತ ಹಾಗೂ ಅಧಿಕಾರಕ್ಕಾಗಿ ಕೋಮುವಾದಿಗಳ ಜೊತೆ ಕೈಜೋಡಿಸಿದ್ದಾರೆ. ಈ ಡೋಂಗಿಗಳನ್ನು ಸೋಲಿಸಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಕೋರಿದರು.

ಗ್ಯಾರಂಟಿಗಳ ವಿಷಯದಲ್ಲಿ ಬಿಜೆಪಿಯವರು ಎಲ್ಲೋ ಕುಳಿತು ಮಾತನಾಡುವುದಲ್ಲ, ಬಹಿರಂಗ ಚರ್ಚೆಗೆ ಒಂದೇ ವೇದಿಕೆಗೆ ಬರಲಿ ಎಂದು ಸವಾಲೆಸೆದರು.

1.30 ಲಕ್ಷ ಕುಟುಂಬಗಳಿಗೆ ₹4ಸಾವಿರದಿಂದ ₹ 5ಸಾವಿರ ಲಾಭ ಸಿಗುತ್ತಿದೆ. ಇದರಿಂದ ರಾಜ್ಯದ 4.30 ಕೋಟಿ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಯಾವ ಸರ್ಕಾರವಾದರೂ ಇಂತಹ ಅನುಕೂಲ ಕಲ್ಪಿಸಿತ್ತಾ? ಎಂದು ಕೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಇಡೀ ದೇಶಕ್ಕೆ ಮಾದರಿಯಾದ ಸರ್ಕಾರವನ್ನು ನಾವು ರೂಪಿಸಿದ್ದೇವೆ. ಕೊಟ್ಟ ಮಾತುಗಳನ್ನು ಉಳಿಸಿಕೊಂಡಿದ್ದೇವೆ ಎಂದರು.

ರೈತರಿಗೆ ಸಂಬಳ, ಬಡ್ತಿ, ಪಿಂಚಣಿ ಅಥವಾ ಲಂಚ ಸಿಗುವುದಿಲ್ಲ. ಅವರಿಗೆ ನೀರಾವರಿ ಒದಗಿಸಲು ನಾವು ಆದ್ಯತೆ ನೀಡಲು ಬದ್ಧವಾಗಿದ್ದೇವೆ ಎಂದರು.

ಬಿಜೆಪಿ- ಜೆಡಿಎಸ್‌ನವರು ಕೊಟ್ಟಿದ್ದ ಮಾತು ಉಳಿಸಿಕೊಳ್ಳಲಾಗಲಿಲ್ಲ.‌ ನಮ್ಮ ಗ್ಯಾರಂಟಿ ನೋಡಿ ಬಿಜೆಪಿ ಸ್ನೇಹಿತರ ಕಮಲ ಮುದುಡಿ ಹೋಗಿದೆ. ಅವರಿಬ್ಬರೂ ನೆಂಟಸ್ತನ ಮಾಡುತ್ತಿದ್ದಾರೆ. ಜೆಡಿಎಸ್‌ನವರೇ ಬಿಜೆಪಿಯವರ ವಕ್ತಾರರಾಗಿದ್ದಾರೆ ಎಂದು ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಜನರ ಬದುಕಿನಲ್ಲಿ ಒಳ್ಳೆಯ ಬದಲಾವಣೆ ತರುವ ಕೆಲಸವನ್ನು ನಮ್ಮ‌ ಸರ್ಕಾರ ಮಾಡುತ್ತಿದೆ. ನಿರುದ್ಯೋಗಿ ಯುವಕರಿಗೆ ಕೌಶಲ ತರಬೇತಿ ನೀಡಿ ಅವರು ಉದ್ಯೋಗ ಕಂಡುಕೊಳ್ಳುವಂತೆ ಮಾಡುತ್ತಿದ್ದೇವೆ ಎಂದರು.

ನಮ್ಮದು ಜನರ ಬದುಕಿನ ಬಗ್ಗೆ ಚಿಂತೆ, ಬೇರೆ ಪಕ್ಷದವರಿಗೆ ಭಾವನೆಯೇ ಮುಖ್ಯವಾಗಿದೆ ಎಂದು ಬಿಜೆಪಿಯವರನ್ನು ಟೀಕಿಸಿದರು.

ಮಂತ್ರಾಕ್ಷತೆ ಕೊಟ್ಟರು. ಅವರಿಗೆ ಎಲ್ಲಿತ್ತು ಅಕ್ಕಿ? ಸಿದ್ದರಾಮಯ್ಯ ಅವರ ಅಕ್ಕಿಗೆ ಬಿಜೆಪಿಯವರು ಅರಿಸಿನ ಹಾಕಿ ಕೊಟ್ಟಿದ್ದಾರೆ ಎಂದು ಟೀಕಿಸಿದರು. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳೇ ನಮ್ಮ ಮಂತ್ರಾಕ್ಷತೆ. ಎಲ್ಲರಿಗೂ ನ್ಯಾಯ ಸಿಗಬೇಕು ಎಂಬುದು ನಮ್ಮ ಉದ್ದೇಶ. ಯಾವುದೇ ಧರ್ಮೀಯರಾದರೂ ಎಲ್ಲರೂ ಒಂದೇ. ದೇವನೊಬ್ಬ ನಾಮ ಹಲವು. ಬಿಜೆಪಿಯವರಷ್ಟೆ ಹಿಂದೂಗಳೇ. ನಾವು ಹಿಂದೂಗಳಲ್ಲವೇ? ಎಂದು ಕೇಳಿದರು.

ಮೇಕೆದಾಟು ವಿಚಾರದಲ್ಲಿ ಕರ್ನಾಟಕ ಸರ್ಕಾರ ಗಮನ ಕೊಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ಡಿಪಿಆರ್ ಬಗ್ಗೆ ಚರ್ಚೆ ಆಗುತ್ತಿದೆ. ಆ ಯೋಜನೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಿಯೇ ತೀರುತ್ತೇವೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾವಿರ ಕೋಟಿ ರೂಪಾಯಿ ನೀಡಿದ್ದರು. ಆ ಯೋಜನೆ ಏನಾಯಿತು? ಅದನ್ನೇಕೆ ದೇವೇಗೌಡರು ಕೇಳುತ್ತಿಲ್ಲ? ನೀವೀಗ ಪ್ರಧಾನಿ ಜೊತೆ ಹತ್ತಿರದಲ್ಲಿದ್ದೀರಿ. ನೀವೇಕೆ ಯೋಜನೆ ಅನುಷ್ಠಾನದ ಬಗ್ಗೆ ಮಾತನಾಡುತ್ತಿಲ್ಲ ದೇವೇಗೌಡರೇ ಎಂದು ಪ್ರಶ್ನಿಸಿದರು.

ತಮಿಳುನಾಡಿಗೆ ನೀರು ಕೊಡುತ್ತೇವೆ.‌ ನಮ್ಮ ನೀರು ನಮ್ಮ ಹಕ್ಕು ಎಂದರು. ಮುಂಬರುವ ‌ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಹಾಕಿದರೆ, ಮತ್ತಷ್ಟು ಯೋಜನೆಗಳನ್ನು ಕೊಡುತ್ತೇವೆ ಎಂದು ಶಿವಕುಮಾರ್ ಭರವಸೆ ನೀಡಿದರು.

ಪಿರಿಯಾಪಟ್ಟಣ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಕೆ.ವೆಂಕಟೇಶ್ ಮಾತನಾಡಿ, ರಾಜಕಾರಣಿಗಳು ಜನರ ಬಗ್ಗೆ ಯೋಚನೆ ಮಾಡುವವರು ಬಹಳ‌ ಕಡಿಮೆ. ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡವರು ಹಾಗೂ ಯೋಚನೆ ಮಾಡುವವರು ಜನಮಾನಸದಲ್ಲಿ ಉಳಿಯುತ್ತಾರೆ.‌ ಅಂಥವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿದ್ದಾರೆ. ಅವರು ಮುಖ್ಯಮಂತ್ರಿ ಆಗದೇ ಇದ್ದಿದ್ದರೆ ಇಂತಹ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿರಲಿಲ್ಲ ಎಂದರು.

ತಾಲ್ಲೂಕಿನ ಶಾಸಕರು ನೀರಾವರಿ ಯೋಜನೆ ಬಗ್ಗೆ ದೊಡ್ಡ ಭಾಷಣ ಮಾಡಿದ್ದರು. ಯಾರೂ ಯಾವ ಯೋಜನೆಯನ್ನೂ ಮಾಡಲಿಲ್ಲ. ಇಲ್ಲಿ ಏನೇನು ಯೋಜನೆ ಬಂದಿವೆಯೋ ಅವೆಲ್ಲವೂ ನನ್ನ ಕಾಲದಲ್ಲಿ ಆಗಿದ್ದೆಯೇ ಹೊರತು ಬೇರೆಯವರು ಮಾಡಲಿಲ್ಲ ಎಂದರು.

ಸಿದ್ದರಾಮಯ್ಯ ಅವರು ತಾಲ್ಲೂಕಿಗೆ ನೀಡಿರುವ ಕೊಡುಗೆಯನ್ನು ತಲೆತಲಾಂತರಗಳು ಕೂಡ ಮರೆಯಲಾಗದು. ಜನರ ಬಗ್ಗೆ ಕಾಳಜಿ ಇದ್ದವರು ಮಾತ್ರ ಇಂಥ ಕಾರ್ಯಕ್ರಮ ನೀಡಬಹುದು. ಬಿಜೆಪಿಯವರು ಅಧಿಕಾರಕ್ಕೆ ಬಂದು ಬಡವರ ಪರವಾದ ಕಾರ್ಯಕ್ರಮಗಳನ್ನೆಲ್ಲ ತೆಗೆದು ಹಾಕಿದರು ಎಂದು ದೂರಿದರು.

ಗ್ಯಾರಂಟಿಗಳನ್ನು ಜಾರಿ ಮಾಡಿರುವುದರಿಂದಾಗಿ, ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇದು ಶೇ 80 ಕಮಿಷನ್ ಸರ್ಕಾರ ಎಂದು ಆರೋಪಿಸುತ್ತಿದ್ದಾರೆ. 80% ತಗೊಂಡು ಸರ್ಕಾರ ನಡೆಸಲು ಆಗುತ್ತದೆಯೇ ಎಂದು ಕೇಳಿದರು.

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಕಟ್ಟಿದರು.‌ ಅಕ್ಕಿ ಕಾಳಿಗೆ ಅರಿಸಿನ ಬೆರೆಸಿ ಹಂಚಿದರು.‌ ಅಯೋಧ್ಯೆಯಿಂದ ಬಂದಿದೆ, ಅದನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ ಎಂದರು. ಇಂತಹ ಭಾವನಾತ್ಮಕ ವಿಚಾರಗಳನ್ನು ಮುಂದೆ ಮಾಡಿ ಅವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ದೂರಿದರು.

150 ಕೆರೆ ಹಾಗೂ ಕಟ್ಟೆಗಳಿಗೆ ನೀರು ತುಂಬಿಸಲಾಗುವುದು. ಇದರಿಂದ ಕೃಷಿಗೆ ಅನುಕೂಲ ಆಗುತ್ತದೆ. ಈ ಋಣ ತೀರಿಸಲು ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲ‌ ಕೊಡಬೇಕು ಎಂದು ಕೋರಿದರು.

ಆ ಕೆರೆಗಳ ದುರಸ್ತಿ ಮಾಡದೇ ನೀರು ತುಂಬಿಸಿದರೆ ಪ್ರಯೋಜನ ಆಗುವುದಿಲ್ಲ. ಈ ಕೆಲಸಕ್ಕೆ ₹ 30 ಕೋಟಿ ಅಗತ್ಯವಿದೆ. ಹೂಳೆತ್ತದೇ, ಬದು ಭದ್ರಪಡಿಸದೇ ಇದ್ದರೆ ಅನುಕೂಲ ಆಗುವುದಿಲ್ಲ. ಇದಕ್ಕೆ ಮುಖ್ಯಮಂತ್ರಿ ಸಹಕಾರ ಕೊಡಬೇಕು ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.