ಕಿಕ್ಕೇರಿ: ಹೋಬಳಿಯ ಗಂಗೇನಹಳ್ಳಿಯಲ್ಲಿ 10ಕ್ಕೂ ಹೆಚ್ಚು ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದ್ದು, ನಾಗರಿಕರಲ್ಲಿ ಡೆಂಗಿ ಉಲ್ಬಣದ ಆತಂಕ ಮನೆ ಮಾಡಿದೆ.
ಗ್ರಾಮದ ಬಡಾವಣೆಯಲ್ಲಿ ತ್ಯಾಜ್ಯ ವಿಲೇವಾರಿ, ಸಮರ್ಪಕವಾಗಿ ಒಳಚರಂಡಿ ನೀರು ಹರಿಯದಿರುವುದೇ ಪ್ರಮುಖ ಕಾರಣ ಎನ್ನಲಾಗಿದ್ದು, ಸೊಳ್ಳೆ ಕಾಟ ಹೆಚ್ಚಿದೆ.
ಗ್ರಾಮದ ಚರಂಡಿ ನೀರು ಇಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಮುಂದೆ ನಿಲ್ಲುವಂತಾಗಿದೆ. ಸುಮಾರು ಎರಡು ವರ್ಷಗಳಿಂದಲೂ ಚರಂಡಿ ನೀರು ಹರಿಯದೆ ಒಂದೆಡೆ ನಿಂತಿದೆ. ಇದರಿಂದ ಸೊಳ್ಳೆ ಉತ್ಪತಿಯಾಗುತ್ತಿದೆ.
ಜ್ವರದ ತೀವ್ರತೆ ಕಡಿಮೆಯಾಗದೆ ಗ್ರಾಮದಲ್ಲಿ ಜ್ವರದ ಭೀತಿ ಆವರಿಸಿದೆ. ಆರೋಗ್ಯ ಇಲಾಖೆಯವರು ನಿತ್ಯ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.
ಶಾಲಾ ಪರಿಸರದಲ್ಲಿ ನಿಂತಿರುವ ಕೊಳಚೆ ನೀರು ತೆರವು ಮಾಡಿಸಿ, ಸೊಳ್ಳೆಗಳ ನಿಯಂತ್ರಣ ಮಾಡಿಸುವವರಿಗೆ ಶಾಲೆಗೆ ಕಳಿಸುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಲಕ್ಷ್ಮೀಪುರ ಗ್ರಾ.ಪಂ ಪಿಡಿಒ ಸುರೇಶ್ಬಾಬು ಸ್ಥಳಕ್ಕೆ ಆಗಮಿಸಿ, ‘ಕಲ್ಲುಮಣ್ಣಿನಿಂದ ಅಡ್ಡಗಟ್ಟಲಾಗಿದ್ದ ಒಳಚರಂಡಿ ಶುಚಿಗೊಳಿಸಿದರು. ಚರಂಡಿ ನೀರು ಹರಿಯಲು ತೊಂದರೆ ಮಾಡಬಾರದು. ಗ್ರಾಮದಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ವ್ಯವಸ್ಥೆ ಮಾಡಲಾಗುವುದು. ಗ್ರಾಮ ಶುಚಿತ್ವಕ್ಕೆ ಸಹಕರಿಸಿ’ ಎಂದು ತಿಳಿಸಿದರು.
ಇಸಿಒ ವೀರಭದ್ರಯ್ಯ, ಗ್ರಾ.ಪಂ ಕಾರ್ಯದರ್ಶಿ ನವೀನ್, ಮುಖ್ಯ ಶಿಕ್ಷಕ ಹನುಮಂತ ಭಜಂತ್ರಿ, ನಟೇಶ್, ಮುಖಂಡರಾದ ಕನಕ ರಾಜೇಶ್, ಶರತ್ಕುಮಾರ್, ಕೃಷ್ಣಪ್ಪ, ರಂಗನಾಥ, ಸುನಿಲ್ ರಾಜೀವ್, ರಘು, ಧರ್ಮ, ಪಾರ್ವತಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.