ADVERTISEMENT

ಮೈಸೂರು | ‘ವಿಮಾನ ನಿಲ್ದಾಣ ಅಭಿವೃದ್ಧಿಗೊಳಿಸಿ, ಸಿದ್ದರಾಮಯ್ಯ ಹೆಸರಿಡಿ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 15:06 IST
Last Updated 20 ಫೆಬ್ರುವರಿ 2024, 15:06 IST

ಮೈಸೂರು: ‘ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದ ಅಭಿವೃದ್ಧಿಯನ್ನು ರಾಜಕೀಯ ದ್ವೇಷದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಡೆಗಣಿಸಿದ್ದು, ಹೀಗೆಯೇ ಮುಂದುವರಿದರೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್ ಎಚ್ಚರಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯಕ್ಕೆ ಸಾಕಷ್ಟು ಬಾರಿ ಭೇಟಿ ನೀಡಿದರೂ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಈ ರೀತಿ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ. ಇಂಧನ ಸಬ್ಸಿಡಿ ಕಡಿತಗೊಳಿಸುವ ಮೂಲಕ ದೇಶದ ಅನೇಕ ಭಾಗಗಳಿಗೆ ನಿತ್ಯವೂ ವಿಮಾನ ಸಂಚಾರ ನಡೆಸುತ್ತಿದ್ದ ನಿಲ್ದಾಣವನ್ನು ಸಂಪೂರ್ಣ ಸೊರಗುವಂತೆ ಮಾಡಿದ್ದಾರೆ. ‘ಅಭಿವೃದ್ಧಿ ಮಾಡುತ್ತೇವೆ, ಭೂ ಸ್ವಾಧೀನ ನಡೆಯಲಿದೆ’ ಎನ್ನುತ್ತಾ ಸುತ್ತಮುತ್ತಲಿನ ರೈತರ ಜಮೀನು ಮಾರಾಟಕ್ಕೂ ಸಮಸ್ಯೆ ಉಂಟು ಮಾಡಲಾಗಿದೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರವೂ ನಿಲ್ದಾಣದ ಅಭಿವೃದ್ಧಿಗೆ ಸಿದ್ಧವಿದ್ದು, ಕೇಂದ್ರ ಸರ್ಕಾರವು ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳಬೇಕು. ರೈತರು ಹಾಗೂ ನಗರವಾಸಿಗಳ ಅಭಿವೃದ್ಧಿ ವಿಚಾರದಲ್ಲಿ ಚೆಲ್ಲಾಟವಾಡಬಾರದು. ಹಾಗೆಯೇ, ಮಹಿಳೆಯರ ಸ್ವಾವಲಂಬನೆಗಾಗಿ ಸಾಕಷ್ಟು ಕೆಲಸ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕಡಕೊಳ ಶಿವಲಿಂಗ, ಕೆಪಿಸಿಸಿ ಎಸ್‌ಸಿ ಘಟಕದ ಕಾರ್ಯದರ್ಶಿ ವಿಜಯಕುಮಾರ್, ಸದಸ್ಯ ಸೋಮಶೇಖರ್, ಕಿಸಾನ್ ಸೆಲ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.