ADVERTISEMENT

ಚಮಚಾಗಿರಿ ಭಾಷಣದಿಂದ ನಾಡಹಬ್ಬದ ಪಾವಿತ್ರ್ಯ ಹಾಳು: ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 6:39 IST
Last Updated 4 ಅಕ್ಟೋಬರ್ 2024, 6:39 IST
ಎ.ಎಚ್. ವಿಶ್ವನಾಥ್
ಎ.ಎಚ್. ವಿಶ್ವನಾಥ್   

ಮೈಸೂರು: ‘ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಡೆದ ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದ ಪಾವಿತ್ರ್ಯತೆಯು ಚಮಚಾಗಿರಿಯ ಭಾಷಣ ಹಾಗೂ ರಾಜಕಾರಣದ ಘಮಲಿನಿಂದಾಗಿ ಹಾಳಾಗಿದೆ’ ಎಂದು ವಿಧಾನಪರಿಷತ್‌ ಸದಸ್ಯ ಎ.ಎಚ್. ವಿಶ್ವನಾಥ್ ಆರೋಪಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಆ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡುವುದು ಬೇಕಿರಲಿಲ್ಲ’ ಎಂದರು.

‘ಹಿಂದೆ, ಚಾಮುಂಡೇಶ್ವರಿಯ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಈಗ ಪದೇ ಪದೇ ಆ ತಾಯಿಯ ಆಶೀರ್ವಾದ ಬೇಡಿದ್ದಾರೆ’ ಎಂದು ವ್ಯಂಗ್ಯವಾಡಿದರು. ‘ನಾನೇನೂ ತಪ್ಪು ಮಾಡಿಲ್ಲ ಎಂದು ಪುನರುಚ್ಚರಿಸುತ್ತಿದ್ದಾರೆ. ಇದರ ಅರ್ಥವೇನು?’ ಎಂದು ಕೇಳಿದರು.

ADVERTISEMENT

‘ದಸರಾ ಉದ್ಘಾಟಿಸಿದ ಸಾಹಿತಿ ಹಂ.ಪ. ನಾಗರಾಜಯ್ಯ ಅವರೂ ರಾಜಕೀಯ ಭಾಷಣ ಮಾಡಿದ್ದಾರೆ. ಭಕ್ತಿ ಭಾವದ ಕಾರ್ಯಕ್ರಮದಲ್ಲಿ ದಸರಾ ಇತಿಹಾಸ, ಮಹಾರಾಜರ ಕೊಡುಗೆ, ನಾಡಹಬ್ಬದ ಐತಿಹಾಸಿಕ ಮಹತ್ವದ ಬಗ್ಗೆ ಮಾತನಾಡದೇ, ಕೆಳಮಟ್ಟಕ್ಕೆ ತರುವ ಕೆಲಸವನ್ನು ನಮ್ಮ ರಾಜಕಾರಣಿಗಳು ಮಾಡಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಜೆಡಿಎಸ್‌ ಪ್ರಮುಖರ ಸಮಿತಿಯ ಅಧ್ಯಕ್ಷ ಜಿ.ಟಿ. ದೇವೇಗೌಡರು ಸಿದ್ದರಾಮಯ್ಯ ಅವರನ್ನು ಹೊಗಳಿರುವುದು ಬೂಟಾಟಿಕೆ ಎನಿಸಿತು. ಅವರೂ ಮುಡಾ ಫಲಾನುಭವಿಯೇ. ಅಷ್ಟೆಲ್ಲ ಹೊಗಳುವ ಅವಶ್ಯಕತೆ ಇರಲಿಲ್ಲ. ಇಡೀ ಕಾರ್ಯಕ್ರಮವನ್ನು ಅವರು ಗೊಂದಲಮಯ ಮಾಡಿ, ಹೊಲಸಾಗಿದರು. ಅದಕ್ಕೆ ಕ್ಷಮೆಯೇ ಇಲ್ಲ’ ಎಂದರು.

‘ಮುಡಾ ಹಗರಣದ ಬಗ್ಗೆ ಇಷ್ಟು ದಿನ ಮಾತನಾಡದ ಜಿಟಿಡಿ ಈಗೇಕೆ ಪ್ರತಿಕ್ರಿಯಿಸಿದ್ದಾರೆ? ಅವರೂ ಮುಡಾ ಫಲಾನುಭವಿ ಆಗಿರುವುದೇ ಇದಕ್ಕೆ ಕಾರಣ. ಅವರದ್ದೂ ಎಷ್ಟೋ‌ ನಿವೇಶನ ಇವೆ ಎಂಬ ಮಾತುಗಳಿವೆ. ಎಲ್ಲ ರಾಜಕಾರಣಿಗಳೂ ಸೇರಿ ಮೈಸೂರನ್ನು ಕಳ್ಳರ ಸಂತೆಯಂತೆ ಬಿಂಬಿಸಿದ್ದಾರೆ’ ಎಂದು ದೂರಿದರು. ‘ಜೆಡಿಎಸ್‌ ಶಾಸಕಾಂಗ ‌ಪಕ್ಷದ ನಾಯಕನನ್ನಾಗಿ ಮಾಡದಿದ್ದರಿಂದ ಜಿಟಿಡಿ ಕೋಪಗೊಂಡಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರವನ್ನು ಬೀಳಿಸುತ್ತೇವೆ ಎಂದು ಯಾರೂ ಹೇಳಿಲ್ಲ. ಆದರೂ ಮುಖ್ಯಮಂತ್ರಿಯೇ ಆ ಬಗ್ಗೆ ಗುಲ್ಲೆಬ್ಬಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ, ಜಾರಿ ನಿರ್ದೇಶನಾಲಯ (ಇಡಿ) ಮಧ್ಯಪ್ರವೇಶ ಮಾಡುತ್ತಿದ್ದಂತೆಯೇ ಮುಖ್ಯಮಂತ್ರಿ ಪತ್ನಿ ಪಾರ್ವತಿಯವರು 14 ನಿವೇಶನಗಳನ್ನು ವಾಪಸ್ ಮಾಡಿದ್ದಾರೆ. ಅಪರಾಧ ಒಪ್ಪಿಕೊಂಡಾಕ್ಷಣ, ಮಾಡಿರುವ ಅಪರಾಧ ಹೋಗಿಬಿಡುವುದಿಲ್ಲ’ ಎಂದರು.

‘ಮುಡಾದಿಂದ ಶೇ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲ ನಿವೇಶನಗಳ ಬಗ್ಗೆಯೂ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

‘14 ನಿವೇಶನಗಳ ಹಂಚಿಕೆ ಪ್ರಕರಣ, ನ್ಯಾಯಾಲಯದ ಆದೇಶದಂತೆ ತನಿಖೆಯ ಹಂತದಲ್ಲಿರುವಾಗಲೇ ನಿವೇಶನಗಳನ್ನು ವಾಪಸ್ ಪಡೆದುಕೊಳ್ಳಲು ಮುಡಾ ಆಯುಕ್ತರಿಗೆ ಅಧಿಕಾರ ಏನಿದೆ?’ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.