ಮೈಸೂರು: ‘ಯೋಗವನ್ನು ರೂಪಾಂತರಿಸದೇ ಹಿರಿಯರಿಂದ ಬಳುವಳಿಯಾಗಿ ಬಂದಿರುವ ರೀತಿಯಲ್ಲಿಯೇ ಪರಂಪರೆ ಮುಂದುವರಿಸಬೇಕು’ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಪಾದಿಸಿದರು.
ಉತ್ತನಹಳ್ಳಿಯ ವಿಜಯಗಿರಿಯಲ್ಲಿ ‘ಓದುಗ ಪ್ರಕಾಶನ’, ‘ಮೈಸೂರು ಕಲ್ಚರಲ್ ಅಸೋಸಿಯೇಷನ್’, ‘ಭಾರತೀ ಯೋಗಧಾಮ’ದ ಸಹಯೋಗದಲ್ಲಿ ಶುಕ್ರವಾರ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ ‘ಯೋಗ ಸಂಗೀತ, ಮೈಸೂರು ಪರಂಪರೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
‘ಮುಮ್ಮಡಿ ಕೃಷ್ಣರಾಜ ಒಡೆಯರ್ 108 ಯೋಗಾಸನ ಪ್ರದರ್ಶಿಸುತ್ತಿದ್ದರು. ತಿರುಮಲೈ ಕೃಷ್ಣಮಾಚಾರ್ ಮೂರು ಸಾವಿರಕ್ಕೂ ಹೆಚ್ಚು ಆಸನ ಪರಿಚಯಿಸಿದರು. ಭಾರತೀಯರಾಗಿ ಈ ಗುರು ಪರಂಪರೆ ನೀಡಿರುವ ರೀತಿಯಲ್ಲಿಯೇ ಯೋಗ ಬೆಳೆಸಬೇಕಿದೆ’ ಎಂದರು.
ಭಾರತೀ ಯೋಗಧಾಮ ಸ್ಥಾಪಕ ಕೆ.ಎಲ್.ಶಂಕರನಾರಾಯಣ ಜೋಯಿಸ್, ‘ದೇಶದಲ್ಲಿ ಬಳಕೆಯಾಗುತ್ತಿರುವ ಯೋಗಾಸನಗಳು ಮಾರ್ಪಾಡಾಗಿವೆ. ಮೂಲ ಸ್ಥಿತಿಯಲ್ಲಿಯೇ ಉಳಿಸಿಕೊಳ್ಳಬೇಕು. ಕೇವಲ ಆಸನಗಳನ್ನು ಮಾಡುವುದು ಯೋಗವಲ್ಲ. ಸಮಚಿತ್ತದಿಂದ ಅರ್ಧ ಗಂಟೆ ಕುಳಿತುಕೊಳ್ಳುವುದೂ ಆಸನಕ್ಕಿಂತ ಮಿಗಿಲಾದ ಸ್ಥಿತಿ’ ಎಂದು ಅಭಿಪ್ರಾಯಪಟ್ಟರು.
ಯೋಗ ಗುರು ಪಿ.ಎನ್.ಗಣೇಶ್ ಕುಮಾರ್, ಯೋಗ ತಜ್ಞ ಡಾ.ಎ.ಎಸ್.ಚಂದ್ರಶೇಖರ್ ಹಾಗೂ ಯೋಗಪಟುಗಳಾದ ಎಚ್.ಖುಷಿ, ಅಮೂಲ್ಯಾ, ಆರ್.ಅಂಕಿತಾ ಅವರಿಗೆ ಕ್ರಮವಾಗಿ ‘ಸ್ಟಾರ್ ಆಫ್ ಯೋಗ’, ‘ದಿ ರೈಸಿಂಗ್ ಸ್ಟಾರ್ಸ್ ಆಫ್ ಯೋಗ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾಂಗ್ರೆಸ್ ಮುಖಂಡ ಎಚ್.ವಿ.ರಾಜೀವ್, ‘ಮೈಸೂರು ಕಲ್ಚರಲ್ ಅಸೋಸಿಯೇಷನ್’ ಅಧ್ಯಕ್ಷ ಎ.ಪಿ.ನಾಗೇಶ್, ಓದುಗ ಪ್ರಕಾಶನದ ಪ್ರಕಾಶ್ ಚಿಕ್ಕಪಾಳ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.