ಮೈಸೂರು: ನಗರದ ಚಾಮುಂಡಿ ವಿಹಾರ ಬಡಾವಣೆಯ ನಿವಾಸಿ ಆರ್.ವರ್ಣಿಕಾ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಇವರು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು ಕೌಟಿಲ್ಯ ಅವರ ಪುತ್ರಿ.
ಹೈಕೋರ್ಟ್ನ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ವರ್ಣಿಕಾ ತೇರ್ಗಡೆಯಾಗಿದ್ದು, 2023ರ ನವೆಂಬರ್ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಶುಕ್ರವಾರ ಹೈಕೋರ್ಟ್ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ.
ಇಲ್ಲಿನ ಕೌಟಿಲ್ಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದ ಅವರು, ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು 2018ರಲ್ಲಿ 4ನೇ ರ್ಯಾಂಕ್ನೊಂದಿಗೆ ತೇರ್ಗಡೆಯಾಗಿದ್ದರು. ಕಳೆದ ಮೂರು ವರ್ಷದಿಂದ ವಕೀಲರಾಗಿ ಬೆಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಅಭ್ಯಾಸ ನಡೆಸಿದ್ದರು.
‘ಅಮ್ಮನ ಆಸೆ ಈಡೇರಿಸಿದ ತೃಪ್ತಿ ಇದೆ. ಅವರೀಗ ಇರಬೇಕಿತ್ತು. ಜನರ ಸೇವೆ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ. ಬಡವರು, ನ್ಯಾಯ ಕೇಳಿ ಬಂದವರಿಗೆ ನ್ಯಾಯ ಸಿಗಬೇಕು. ಇದಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ’ ಎಂದು ವರ್ಣಿಕಾ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.
‘ನ್ಯಾಯಾಧೀಶರ ನೇಮಕಾತಿಯಲ್ಲಿ 3 ಹಂತದ ಪರೀಕ್ಷೆಗಳಿರುತ್ತವೆ. ಪ್ರಾಯೋಗಿಕ ಜ್ಞಾನದೊಂದಿಗೆ ಪ್ರಚಲಿತ ವಿದ್ಯಾಮಾನಗಳ ಅರಿವೂ ಇರಬೇಕು. 5 ಸಾವಿರ ಸ್ಪರ್ಧಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಶ್ರಮ ಹಾಗೂ ಅಭ್ಯಾಸವಿದ್ದರೆ ತೇರ್ಗಡೆ ಆಗಬಹುದು’ ಎಂದು ತಿಳಿಸಿದರು.
‘ಚಿಕ್ಕಂದಿನಿಂದಲೂ ಚೆನ್ನಾಗಿ ಓದುತ್ತಿದ್ದಳು. ನ್ಯಾಯಾಂಗ ಕ್ಷೇತ್ರದಲ್ಲಿ ಸೇವೆ ಮಾಡಬೇಕೆಂಬುದು ಅವಳ ಆಸೆಯಾಗಿತ್ತು. ಶ್ರದ್ಧೆ, ಪರಿಶ್ರಮ ಅವಳನ್ನು ಗುರಿ ಮುಟ್ಟಿಸಿದೆ. ತಂದೆಯಾಗಿ ಹೆಮ್ಮೆ ಎನಿಸುತ್ತದೆ’ ಎಂದು ಆರ್.ರಘು ಕೌಟಿಲ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.