ಮೈಸೂರು: ‘ಅಸಂಘಟಿತ ಕಾರ್ಮಿಕರು ಸಂಘಟಿತರಾಗದ ಕಾರಣದಿಂದಾಗಿ ಬಹಳ ಶೋಷಣೆಗೆ ಒಳಗಾಗುತ್ತಿದ್ದಾರೆ’ ಎಂದು ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ಚಂದ್ರಶೇಖರ್ ಮೇಟಿ ಹೇಳಿದರು.
ಕೇಂದ್ರ ಕಾರ್ಮಿಕ ಸಂಘಟನೆ ಎಐಯುಟಿಯುಸಿಗೆ ಸಂಯೋಜಿತವಾಗಿರುವ ‘ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ’ದ ಜಿಲ್ಲಾ ಸಮಿತಿಯಿಂದ ಇಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ದೇಶದಾದ್ಯಂತ ಅತಿ ದೊಡ್ಡ ಸಂಖ್ಯೆಯಲ್ಲಿ ಇರುವ ಅಸಂಘಟಿತ ಕಾರ್ಮಿಕರು ಒಗ್ಗಟ್ಟಾದರೆ ಅದೊಂದು ಬಹುದೊಡ್ಡ ಶಕ್ತಿ ಆಗಲು ಸಾಧ್ಯ. ಅಂತಹ ಸಂಘಟನೆಯ ಕಟ್ಟುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ತಿಳಿಸಿದರು.
‘ಇಂದು ಕಾರ್ಮಿಕರಿಗೆ ಹಲವು ಸೌಲಭ್ಯಗಳಿದ್ದರೂ, ಅವು ಕಲ್ಯಾಣ ಮಂಡಳಿಯಲ್ಲಿರುವ ಭ್ರಷ್ಟಾಚಾರ ಹಾಗೂ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ನೈಜ ಕಾರ್ಮಿಕರಿಗೆ ತಲುಪುತ್ತಿಲ್ಲ. ಹಾಗಾಗಿ, ಬಲಿಷ್ಠ ಹೋರಾಟದ ಅವಶ್ಯಕತೆ ಇದೆ’ ಎಂದು ಎಐಯುಟಿಯಿಸಿ ಜಿಲ್ಲಾ ಸಮಿತಿಯ ಅಧ್ಯಕ್ಷ ವಿ.ಯಶೋಧರ್ ದೂರಿದರು.
ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನಾಗಿ ಹರೀಶ್ ಎಸ್.ಎಚ್. (ಅಧ್ಯಕ್ಷರು), ರಾಜು ದೊಡ್ಡಕಾನ್ಯ, ರಮೇಶ್ ಕಡಕೊಳ (ಉಪಾಧ್ಯಕ್ಷ), ಸಿದ್ದಯ್ಯ ಹುಲ್ಲಹಳ್ಳಿ (ಕಾರ್ಯದರ್ಶಿ), ಶಿವರಾಜ್ ಕಣೆನೂರು ಹಾಗೂ ಕುಮಾರ್ ಮೈಸೂರು (ಜಂಟಿ ಕಾರ್ಯದರ್ಶಿ), ಕೆಂಪಣ್ಣ ದೊಡ್ಡಕಾನ್ಯ, ಮಂಜುಳಾ ರಾಜೀವ್ ನಗರ, ರಾಜಶೇಖರ್ ಮಾರ್ಬಳ್ಳಿ, ಮಹೇಶ್ ಸುಣ್ಣದಕೇರಿ, ನವೀನ್ ಏಚಗಳ್ಳಿ ಹಾಗೂ ಮಲ್ಲಿಕಾರ್ಜುನ್ ಹುಲ್ಲಹಳ್ಳಿ (ಎಲ್ಲರೂ ಕಾರ್ಯಕಾರಿ ಸಮಿತಿಯ ಸದಸ್ಯರು) ಅವರನ್ನು ಆಯ್ಕೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.