ಮೈಸೂರು: ‘ನಮ್ಮ ರಾಜ್ಯವು ರಫ್ತಿನಲ್ಲಿ ಮೊದಲ ಸ್ಥಾನಕ್ಕೆ ಬರುವಂತಾಗಲು ಉದ್ದಿಮೆದಾರರು ಶ್ರಮಿಸಬೇಕು’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ್ ಆಶಯ ವ್ಯಕ್ತಪಡಿಸಿದರು.
ಇಲ್ಲಿನ ಪ್ರೆಸಿಡೆಂಟ್ ಹೋಟೆಲ್ನಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ರಪ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ರಪ್ತು ಮಾಡುವುದರಿಂದ ವಿದೇಶಿ ವಿನಿಮಯದ ಜೊತೆಗೆ ದೇಶದ ಆದಾಯವೂ ಹೆಚ್ಚಾಗುತ್ತದೆ. ಅಲ್ಲದೇ, ಕೈಗಾರಿಕೆಗಳಿಗೆ ಉತ್ತೇಜನವೂ ದೊರೆಯುತ್ತದೆ. ಸರ್ಕಾರದ ಸೌಲಭ್ಯ ಗಳನ್ನು ಬಳಸಿಕೊಂಡು ಕೈಗಾರಿಕೆಗಳಲ್ಲಿ ಪ್ರಗತಿ ಕಾಣಬೇಕು’ ಎಂದು ತಿಳಿಸಿದರು.
‘ದೇಶದಲ್ಲಿ 778 ಮಿಲಿಯನ್ ಡಾಲರ್ ಮೊತ್ತದ ವಸ್ತುಗಳನ್ನು ರಪ್ತು ಮಾಡಿದ್ದು, 860 ಮಿಲಿಯನ್ ಡಾಲರ್ ಮೊತ್ತದ ಸರಕನ್ನು ಆಮದು ಮಾಡಿಕೊಂಡಿದ್ದೇವೆ. ಕರ್ನಾಟಕವು ರಪ್ತು ಮಾಡುವುದರಲ್ಲಿ 4ನೇ ಸ್ಥಾನದಲ್ಲಿದೆ’ ಎಂದು ಹೇಳಿದರು.
‘ಭಾರತ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ರಫ್ತು ಉತ್ತೇಜನ ಕೇಂದ್ರವನ್ನು ಸ್ಥಾಪಿಸಿದೆ. ಮೈಸೂರು ಜಿಲ್ಲೆಯಲ್ಲಿಯೂ ಕೈಗಾರಿಕೆಗಳ ಸ್ಥಾಪನೆಗೆ ಬಹಳಷ್ಟು ಅವಕಾಶಗಳಿವೆ. ಪ್ರತಿ ವರ್ಷ ಶೇ 5ರಷ್ಟು ರಫ್ತನ್ನು ಹೆಚ್ಚಳ ಮಾಡಬೇಕು’ ಎಂದರು.
ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಜಂಟಿ ನಿರ್ದೇಶಕ ಸಿ.ಎಸ್. ಬಾಬು ನಾಗೇಶ್, ‘ಉದ್ಯಮಿಗಳಿಗೆ 6 ದಿನಗಳವರೆಗೆ ಹಮ್ಮಿಕೊಂಡಿರುವ ಈ ತರಬೇತಿಯನ್ನು ಸದುಪಯೋಗ ಮಾಡಿಕೊಳ್ಳಬೇಕು. ರಪ್ತು ಮಾಡುವುದು ಕೈಗಾರಿಕೆಗಳ ಆರ್ಥಿಕ ಆದಾಯವನ್ನು ಹೆಚ್ಚಿಸುತ್ತದೆ. ಇದರಿಂದ ಹೆಚ್ಚಿನ ಉತ್ಪಾದನೆ ಮಾಡಿ ಕೈಗಾರಿಕೆಯು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ’ ಎಂದು ಮಾಹಿತಿ ನೀಡಿದರು.
ಮೈಸೂರು ಕೈಗಾರಿಕಾ ಒಕ್ಕೂಟದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಮಾತನಾಡಿ, ‘ರಫ್ತಿನಲ್ಲಿ ಸಣ್ಣ ಕೈಗಾರಿಕೆಗಳ ಪಾಲು ಶೇ 45ರಷ್ಟಿದೆ. ಮೈಸೂರಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ಅವಕಾಶಗಳಿವೆ’ ಎಂದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು ಮಾತನಾಡಿ, ‘ಯಾವುದೇ ಪದಾರ್ಥವನ್ನು ನಾವು ರಪ್ತು ಮಾಡಲು ಅವು ರಾಸಾಯನಿಕ ಮುಕ್ತವಾಗಿ ಇರಬೇಕು. ಗುಣಮಟ್ಟದಿಂದ ಕೂಡಿರಬೇಕು. ಮೈಸೂರಿನಲ್ಲಿ 165 ಮಂದಿ ರಪ್ತು ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ಮಂದಿ ಸೇರ್ಪಡೆ ಅಗುವಂತಾಗಬೇಕು’ ಎಂದರು.
ರಪ್ತು ಮಾಹಿತಿ ಕೇಂದ್ರದ ಉಪ ನಿರ್ದೇಶಕಿ ಮೇಘಲಾ ಹಾಗೂ ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.
ಪ್ರತಿ ದಿನವೂ ಹೊಸತನ್ನು ಕಲಿಯಬೇಕು ಎಂಬ ಹಂಬಲ ಉದ್ದಿಮೆದಾರರಿಗೆ ಇರಬೇಕು ಟಿ.ದಿನೇಶ್ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.