ಮೈಸೂರು: ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ಕ್ಷೇತ್ರದಲ್ಲಿ ಮಾಡಿರುವ ಕೆಲಸದಿಂದ ಇಂದಿಗೂ ಜೀವಂತವಾಗಿದ್ದಾರೆ’ ಎಂದು ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಎಸ್.ಶಿವರಾಜಪ್ಪ ಹೇಳಿದರು.
ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿಯಂತೆ ನಾಲ್ವಡಿ ಅವರೂ ಸಾಮಾಜಿಕ ಕ್ರಾಂತಿಯ ಹರಿಕಾರ. ಜನರ ಜೀವನ ಸುಧಾರಣೆಗೆ ಶ್ರಮಿಸಿದ್ದ ವ್ಯಕ್ತಿ’ ಎಂದು ಬಣ್ಣಿಸಿದರು.
‘ಮಹಾರಾಜನಿಂದ ಪೌರಕಾರ್ಮಿಕರವರೆಗೂ ಸಮಾನತೆಯನ್ನು ಕಂಡ ವ್ಯಕ್ತಿ. ಅವರ ಆದರ್ಶ ಆಡಳಿತವನ್ನು ಇಂದಿನ ರಾಜಕಾರಣಿಗಳು, ಸರ್ಕಾರ ಅಳವಡಿಸಲಿಕೊಳ್ಳಲಿ’ ಎಂದು ಸಲಹೆ ನೀಡಿದರು.
ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ‘ಕೇಂದ್ರ ಸರ್ಕಾರವು ನಾಲ್ವಡಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು. ಆ ಮೂಲಕ ಇಡೀ ದೇಶಕ್ಕೆ ಅವರ ಆದರ್ಶ ರಾಜಾಡಳಿತದ ಬಗ್ಗೆ ಮಾಹಿತಿ ನೀಡಬೇಕು. ಅವರು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಅಪಾರ ಗೌರವವಿದ್ದ ಪ್ರಜಾತಂತ್ರವಾದಿ’ ಎಂದು ಹೇಳಿದರು.
ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಗುರುಪಾದಸ್ವಾಮಿ ಉದ್ಘಾಟಿಸಿದರು. ಸಾಧಕರಾದ ಪಿ. ಶಾಂತ ರಾಜೇ ಅರಸ್, ಡಿ.ಶಿವಯ್ಯ, ಕೆ.ಲೀಲಾ ಪ್ರಕಾಶ್, ಬಿ.ಪಿ.ಮೂರ್ತಿ, ಎಂ.ಬಿ.ಶಿವಕುಮಾರ್ ಅವರಿಗೆ ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಜಿ.ಆರ್.ಅರಸ್ ಅವರು ‘ರಾಜಶ್ರೀ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್’ ಪ್ರಶಸ್ತಿ ನೀಡಿ ಗೌರವಿಸಿದರು.
ಸಾಹಿತಿ ಬನ್ನೂರು ಕೆ.ರಾಜು, ಜಗನ್ಮಾತೆ ಅಕ್ಕಮಹಾದೇವಿ ಮಹಿಳಾ ಸೌಹಾರ್ದ ಸಂಘದ ಸಿ.ಎಲ್. ಶರ್ಮಿಳಾ, ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.