ADVERTISEMENT

ಚಾಮುಂಡಿ ಬೆಟ್ಟದಲ್ಲಿ ಎಚ್.ಡಿ. ರೇವಣ್ಣ ಪೂಜೆ

​ಪ್ರಜಾವಾಣಿ ವಾರ್ತೆ
Published 14 ಮೇ 2024, 16:02 IST
Last Updated 14 ಮೇ 2024, 16:02 IST
   

ಮೈಸೂರು: ಹೊಳೆ ನರಸೀಪುರ ಶಾಸಕ ಎಚ್‌.ಡಿ. ರೇವಣ್ಣ ಮಂಗಳವಾರ ಜೈಲಿನಿಂದ ಹೊರಬಂದ ಬೆನ್ನಲ್ಲೇ ಇಲ್ಲಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ದೇವಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು.

ಗರ್ಭಗುಡಿಯಲ್ಲಿ ಸುಮಾರು 20 ನಿಮಿಷ ಕಾಲ ನಿಂತ ರೇವಣ್ಣ, ಎಚ್‌.ಡಿ. ದೇವೇಗೌಡರ ಕುಟುಂಬದ ಎಲ್ಲರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ಬಳಿಕ ಬಲಗೈಗೆ ರಕ್ಷಾ ಸೂತ್ರ ಕಟ್ಟಿಸಿಕೊಂಡರು. ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜೆಡಿಎಸ್ ಮುಖಂಡರಾದ ಸಾ.ರಾ. ಮಹೇಶ್‌, ಸಿ.ಎಸ್‌. ಪುಟ್ಟರಾಜು, ರವಿಕುಮಾರ್‌, ಬಿಜೆಪಿ ಮುಖಂಡ ಸಂದೇಶ್‌ ಸ್ವಾಮಿ ಜೊತೆಗಿದ್ದರು.

ಈ ಸಂದರ್ಭ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರೇವಣ್ಣ ‘ 40 ವರ್ಷದ ನನ್ನ ರಾಜಕೀಯ ಇತಿಹಾಸದಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ನನಗೆ ದೇವರು ಹಾಗೂ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಹೆಚ್ಚೇನು ಹೇಳಲಾರೆ. ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದರೆ ಅದನ್ನು ತಾಯಿಯ ಸನ್ನಿಧಿಗೆ ಬಿಟ್ಟಿದ್ದೇನೆ’ ಎಂದಷ್ಟೇ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.